ಆಕ್ಷೇಪದ ನಡುವೆಯೂ ಕೊಲಿಜಿಯಂ ಸಭೆ ಕರೆದ ಸಿಜೆಐ: ಫಲಿತಾಂಶವಿಲ್ಲದೆ ಅಂತ್ಯ
ನವದೆಹಲಿ, ಏಪ್ರಿಲ್ 9: ತಮ್ಮ ಕನಿಷ್ಠ ಇಬ್ಬರು ಸಹೋದ್ಯೋಗಿಗಳ ಆಕ್ಷೇಪದ ನಡುವೆಯೂ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರು ಸುಪ್ರೀಂಕೋರ್ಟ್ಗೆ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಗುರುವಾರ ಕೊಲಿಜಿಯಂ ಸಭೆ ಕರೆದಿದ್ದರು. ಆದರೆ ಈ ಸಭೆಯು ಮುಂದಿನ ಕ್ರಮದ ಬಗ್ಗೆ ಯಾವುದೇ ಒಮ್ಮತದ ನಿರ್ಣಯಕ್ಕೆ ಬಾರದೆ ಅಂತ್ಯಗೊಂಡಿತು ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಕೋರ್ಟ್ ಸಂಖ್ಯೆ 2ರಲ್ಲಿ ಮುಂದಿನ ಸಿಜೆಐ ಎನ್ವಿ ರಮಣ ಅವರು ಗುರುವಾರ ಹಾಜರಾಗದೆ ಇದ್ದರೂ, ಕೊಲಿಜಿಯಂ ಸಭೆಗೆ ಹಾಜರಾಗಿದ್ದರು. ಐವರು ಸದಸ್ಯರ ಸಮಿತಿಯಲ್ಲಿ ನಡೆದ ಸಭೆಯಲ್ಲಿ ಒಂದು ವೇಳೆ ನ್ಯಾಯಮೂರ್ತಿಗಳ ನೇಮಕಾತಿ ಬಗ್ಗೆ ಒಮ್ಮತ ವ್ಯಕ್ತವಾಗಿದ್ದರೆ, ಸಿಜೆಐ ಬೋಬ್ಡೆ ಅವರ 14 ತಿಂಗಳ ಸುದೀರ್ಘ ಅಧಿಕಾರಾವಧಿಯಲ್ಲಿ ಸರ್ಕಾರಕ್ಕೆ ನೀಡಲಾದ ಮೊದಲ ಶಿಫಾರಸು ಎನಿಸಿಕೊಳ್ಳುತ್ತಿತ್ತು.
ಈ ಸಮಯದಲ್ಲಿ ಕೊಲಿಜಿಯಂ ಸಭೆ ಏಕೆ? ಸಿಜೆಐ ನಿರ್ಧಾರಕ್ಕೆ ನ್ಯಾಯಮೂರ್ತಿಗಳ ಆಕ್ಷೇಪ
ಸಿಜೆಐ ಬೋಬ್ಡೆ ಮತ್ತು ಹಿರಿಯ ನ್ಯಾಯಮೂರ್ತಿ ಎನ್ವಿ ರಮಣ ಅಲ್ಲದೆ, ನ್ಯಾಯಮೂರ್ತಿಗಳಾದ ರೊಹಿಂಗ್ಟನ್ ನಾರಿಮನ್, ಉದಯ್ ಲಲಿತ್ ಮತ್ತು ಎಎಂ ಖಾನ್ವಿಲ್ಕರ್, ನ್ಯಾಯಮೂರ್ತಿಗಳ ನೇಮಕಾತಿಗೆ ಶಿಫಾರಸು ಮಾಡುವ ಕೊಲಿಜಿಯಂ ಸದಸ್ಯರಾಗಿದ್ದಾರೆ.
ಸಿಜೆಐ ಬೋಬ್ಡೆ ಅವರು ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ಗೆ ಐವರು ನ್ಯಾಯಮೂರ್ತಿಗಳ ಕೊರತೆ ಇದೆ. ಹೀಗಾಗಿ ಕನಿಷ್ಠ ಆರು ನ್ಯಾಯಮೂರ್ತಿಗಳ ನೇಮಕಾತಿಗೆ ಪ್ರಕ್ರಿಯೆ ನಡೆಯಬೇಕಿದೆ. ಸಿಜೆಐ ಬೋಬ್ಡೆ ಅವರಲ್ಲದೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ರೊಹಿಂಗ್ಟನ್ ನಾರಿಮನ್ ಮತ್ತು ನವೀನ್ ಸಿನ್ಹಾ ಅವರು ಈ ವರ್ಷವೇ ನಿವೃತ್ತರಾಗಲಿದ್ದಾರೆ.
ಸುಪ್ರೀಂಕೋರ್ಟ್ಗೆ ಕೊನೆಯ ಬಾರಿ ನೇಮಕಾತಿ ನಡೆದಿದ್ದು 2019ರ ಸೆಪ್ಟೆಂಬರ್ನಲ್ಲಿ. 2019ರ ನವೆಂಬರ್ನಲ್ಲಿ ಆಗಿನ ಸಿಜೆಐ ರಂಜನ್ ಗೊಗೊಯ್ ನಿವೃತ್ತರಾದಾಗಿನಿಂದ ಹುದ್ದೆಗಳು ಖಾಲಿ ಉಳಿದಿವೆ. 2015ರಲ್ಲಿ ಸಿಜೆಐ ಎಚ್ಎಲ್ ದತ್ತು ಅವರ ಅವಧಿಯಲ್ಲಿ ನ್ಯಾಯಾಂಗ ನೇಮಕಾತಿಯ ಬಿಕ್ಕಟ್ಟು ತಲೆದೋರಿತ್ತು. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಹಿಂದೆಂದೂ ಕಾಣದ ಬಿಕ್ಕಟ್ಟು ಉಂಟಾಗಿತ್ತು.
ನಿವೃತ್ತರಾಗಲಿರುವ ಸಿಜೆಐ ಬೋಬ್ಡೆ ಶಿಫಾರಸಿನಂತೆ ಎನ್ವಿ ರಮಣ ಅವರನ್ನು ಮುಂದಿನ ಸಿಜೆಐ ಆಗಿ ನೇಮಕ ಮಾಡಿ ರಾಷ್ಟ್ರಪತಿ ಅಧಿಸೂಚನೆ ಹೊರಡಿಸಿದ್ದಾರೆ. ಏಪ್ರಿಲ್ 24ರಂದು ರಮಣ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಿರುವಾಗ ಹಾಲಿ ಸಿಜೆಐ ಅವರು ಯಾವುದೇ ಶಿಫಾರಸುಗಳನ್ನು ಕಳುಹಿಸುವುದು ಸೂಕ್ತವಲ್ಲ ಎಂದು ಬೋಬ್ಡೆ ಅವರು ಕರೆದಿದ್ದ ಕೊಲಿಜಿಯಂ ಸಭೆಗೆ ಇಬ್ಬರು ನ್ಯಾಯಮೂರ್ತಿಗಳು ವಿರೋಧ ವ್ಯಕ್ತಪಡಿಸಿದ್ದರು.