ಖಾಲಿ ಕೋರ್ಟ್ ಹಾಲ್ ಗಳಿವೆ, ಜಡ್ಜ್ ಗಳ ನೇಮಿಸಿ: ಸಿಜೆಐ ಠಾಕೂರ್
ನವದೆಹಲಿ, ನವೆಂಬರ್ 26: ನ್ಯಾಯಾಂಗ ಹಾಗೂ ಸರಕಾರದ ಮಧ್ಯೆ ಇರುವ ಭಿನ್ನಾಭಿಪ್ರಾಯ ಶನಿವಾರ ಮತ್ತೊಮ್ಮೆ ಬಹಿರಂಗವಾಯಿತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮಾತನಾಡಿ, ಹೈ ಕೋರ್ಟ್ ಗಳಲ್ಲಿ, ನ್ಯಾಯಾಧಿಕರಣಗಳಲ್ಲಿ ನ್ಯಾಯಮೂರ್ತಿಗಳ ಕೊರತೆ ಇದೆ. ಇದನ್ನು ನಿವಾರಿಸಲು ಸರಕಾರ ಮಧ್ಯಪ್ರವೇಶಿಸಬೇಕು ಎಂದಿದ್ದಾರೆ.
ಅದರೆ, ಇದನ್ನು ಪ್ರಬಲವಾಗಿ ನಿರಾಕರಿಸಿದ್ದಾರೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್. 'ಹೈ ಕೋರ್ಟ್ ಗಳಲ್ಲಿ 500 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಸದ್ಯಕ್ಕೇನೋ ಕೆಲಸ ಮಾಡುತ್ತಿರಬಹುದು. ಆದರೆ ಇದು ಹೀಗೇ ಅಗಲ್ಲ. ಎಷ್ಟೋ ಖಾಲಿ ಕೋರ್ಟ್ ಹಾಲ್ ಗಳು ಇವೆ, ಆದರೆ ಅಲ್ಲಿ ನ್ಯಾಯಮೂರ್ತಿಗಳು ಇಲ್ಲ. ಅನೇಕ ಪ್ರಸ್ತಾವಗಳು ಬಾಕಿ ಉಳಿದಿವೆ. ಸರಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ನಿವಾರಿಸಬೇಕು' ಎಂದು ಠಾಕೂರ್ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳ ಮಾತನ್ನು ನಿರಾಕರಿಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸರಕಾರವು ನೂರಿಪ್ಪತ್ತು ಜಡ್ಜ್ ಗಳನ್ನು ಈ ವರ್ಷ ನೇಮಿಸಿದೆ. 1990ರಿಂದ ಈಚೆಗೆ ನಡೆದ ಅತಿ ಹೆಚ್ಚಿನ ನೇಮಕ ಇದು. ಹಿಂದೆ 2013ರಲ್ಲಿ 121 ನೇಮಕವಾಗಿತ್ತು. ಆದ್ದರಿಂದ ಜಡ್ಜ್ ಗಳ ಕೊರತೆ ಎಂಬ ಅವರ ಮಾತನ್ನು ತುಂಬ ಗೌರವದಿಂದ ನಿರಾಕರಿಸುತ್ತಿದ್ದೇನೆ ಎಂದು ಸಚಿವರು ಹೇಳಿದ್ದಾರೆ.