ಪೌರತ್ವ ತಿದ್ದುಪಡಿ ಕಾಯ್ದೆಗೆ ತಸ್ಲಿಮಾ ನಸ್ರೀನ್ ಬೆಂಬಲ
ನವದೆಹಲಿ, ಡಿಸೆಂಬರ್ 14: ಉದ್ದೇಶಪೂರ್ವಕವಾಗಿಯೇ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಟೀಕಾಕಾರರು ಆರೋಪಿಸಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿಯ ಹೊಸ ಕಾಯ್ದೆಗೆ ಬರಹಗಾರ್ತಿ ತಸ್ಲಿಮಾ ನಸ್ರೀನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂಸತ್ನ ಉಭಯ ಸದನಗಳಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಂಕಿತ ಪಡೆದ ಪೌರತ್ವ ತಿದ್ದುಪಡಿ ಮಸೂದೆ ಕಾಯ್ದೆಯ ರೂಪ ಪಡೆದುಕೊಂಡಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಧಾರ್ಮಿಕ ಶೋಷಣೆಯ ಕಾರಣಕ್ಕೆ ಭಾರತಕ್ಕೆ 2014ರ ಡಿ. 31ಕ್ಕೂ ಮೊದಲು ವಲಸೆ ಬಂದು ನೆಲೆಸಿದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಇದರಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದು ವಿರೋಧಕ್ಕೆ ಕಾರಣವಾಗಿದೆ.
ಪೌರತ್ವ ಕಾಯ್ದೆಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಆಕ್ಷೇಪ
ಈಶಾನ್ಯ ರಾಜ್ಯಗಳಲ್ಲಿ ತಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿಗೆ ಈ ಕಾಯ್ದೆ ಎರವಾಗಲಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದ್ದರೆ, ವಿವಿಧ ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ಈ ಕಾಯ್ದೆ ಇದೆ ಎಂಬ ಆರೋಪ-ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಇದು ಮುಸ್ಲಿಂ ವಿರೋಧಿಯಾಗಿಲ್ಲ ಎಂದು ತಸ್ಲಿಮಾ ಅಭಿಪ್ರಾಯಪಟ್ಟಿದ್ದಾರೆ.
ಇದು ಮುಸ್ಲಿಂ ವಿರೋಧಿಯಲ್ಲ
'ಇಂಡಿಯಾ ಟುಡೆ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತಸ್ಲಿಮಾ ನಸ್ರೀನ್, 'ಈ ಕಾಯ್ದೆಯು ಮುಸ್ಲಿಂ ವಿರೋಧಿಯಾಗಿಲ್ಲ. ಭಾರತವು ತನ್ನಲ್ಲಿನ ಮುಸ್ಲಿಂ ಜನಸಂಖ್ಯೆಯನ್ನು ಗಡಿಪಾರು ಮಾಡುತ್ತಿಲ್ಲ' ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ತಸ್ಲೀಮಾ, ಮೂಲಭೂತವಾದಿಗಳಿಂದ ಈ ದೇಶಗಳ ಅಲ್ಪಸಂಖ್ಯಾತರು ಕಿರುಕುಳ ಅನುಭವಿಸಿದ್ದ ಸತ್ಯ ಎಂದರು.
ಹೆಚ್ಚು ಸಮಸ್ಯೆ ಪ್ರಗತಿಪರರಿಗೆ
'ಆದರೆ, ಈ ದೇಶಗಳಲ್ಲಿ ಅತಿ ಹೆಚ್ಚು ಸಂಕಷ್ಟ ಅನುಭವಿಸುವವರು ಪ್ರಗತಿಪರರು, ಬುದ್ಧಿಜೀವಿಗಳು, ನಾಸ್ತಿಕರು ಮತ್ತು ವಿಚಾರವಾದಿಗಳಾಗಿದ್ದಾರೆ. ನಾವು ಟೀಕಿಸಿದಾಗ ಇಸ್ಲಾಮಿಕ್ ಸೊಸೈಟಿ ಅದನ್ನು ಸಹಿಸದೆ ನಮ್ಮನ್ನು ದ್ವೇಷಿಸುತ್ತದೆ. ನನ್ನ ರೀತಿಯಲ್ಲಿ ಗಡಿಪಾರಾದ ಜನರಿಗೂ ಪೌರತ್ವ ಸಿಗಬೇಕು' ಎಂದು ಹೇಳಿದರು.
'ನನ್ನ ತವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬಂಗಾಳಕ್ಕೆ ಕೂಡ ಹೋಗಲು ಸಾಧ್ಯವಿಲ್ಲ. ಏಕೆಂದರೆ ನಾನು ಸತ್ಯ ನುಡಿದ ತಪ್ಪಿಗೆ ಬೆಲೆ ತೆರಬೇಕಾಗಿದೆ. ಸಾಧ್ಯವಾದರೆ ನಾನು ಮತ್ತೆ ಆ ಪುಸ್ತಕಗಳನ್ನು ಬರೆಯಬೇಕು' ಎಂದು ಬಾಂಗ್ಲಾದೇಶ ಮೂಲದ ತಸ್ಲಿಮಾ ಹೇಳಿದರು.
ಪೌರತ್ವ ಮಸೂದೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಕಾಂಗ್ರೆಸ್
ಮುಸ್ಲಿಂ ಗುಂಪುಗಳಿಂದ ಬೆದರಿಕೆ
ಬಾಂಗ್ಲಾದೇಶ-ಸ್ವೀಡಿಶ್ ಬರಹಗಾರ್ತಿ ತಸ್ಲಿಮಾ ನಸ್ರೀನ್ (57) ಭಾರತದಲ್ಲಿ ನೆಲೆಸಿದ್ದಾರೆ. ಮುಸ್ಲಿಮರಿಂದ ಧಾರ್ಮಿಕ ಶೋಷಣೆಗೆ ಒಳಪಟ್ಟ ಹಿಂದೂ ಕುಟುಂಬವೊಂದರ ಕುರಿತಾದ 'ಲಜ್ಜಾ' ಕಾದಂಬರಿ ಬರೆದಿದ್ದ ಅವರು ಮುಲಭೂತವಾದಿ ಮುಸ್ಲಿಂ ಸಂಘಟನೆಗಳಿಂದ ಬೆದರಿಕೆಗೆ ಒಳಗಾಗಿದ್ದರು. ಹೀಗಾಗಿ 1990ರಲ್ಲಿ ಬಾಂಗ್ಲಾದೇಶದಿಂದ ಬಲವಂತವಾಗಿ ಗಡಿಪಾರಾಗುವಂತೆ ಮಾಡಲಾಗಿತ್ತು. 2004-2007ರ ಅವಧಿಯಲ್ಲಿ ಕೋಲ್ಕತಾದಲ್ಲಿ ನೆಲೆಸಿದ್ದ ಅವರು, ಅಲ್ಲಿಯೂ ಮುಸ್ಲಿಂ ಸಂಘಟನೆಗಳಿಂದ ವಿರೋಧ ಎದುರಿಸಿದ್ದರಿಂದ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಮೊದಲು ವಿರೋಧ ವ್ಯಕ್ತಪಡಿಸಿದ್ದ ತಸ್ಲಿಮಾ
ಎರಡು ದಿನಗಳ ಹಿಂದೆ 'ಔಟ್ಲುಕ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಸ್ಲಿಮಾ ವಿಭಿನ್ನ ನಿಲುವು ವ್ಯಕ್ತಪಡಿಸಿದ್ದರು. ಜನರು ಉತ್ತಮ ಜೀವನಕ್ಕಾಗಿ ವಲಸೆ ಹೋಗಿರುತ್ತಾರೆ. ಭಾರತೀಯರೂ ಯುರೋಪ್ ಮತ್ತು ಅಮೆರಿಕಕ್ಕೆ ಹೋಗಿದ್ದಾರೆ. ಅವರನ್ನು ಗಡಿಪಾರು ಮಾಡುವ ಬದಲು, ಒಪ್ಪಿಕೊಂಡಿದ್ದಾರೆ. ಮಾನವಹಕ್ಕುಗಳಲ್ಲಿ ನಂಬಿಕೆ ಇರಿಸದ ಸೌದಿ ಅರೇಬಿಯಾವನ್ನು ಭಾರತ ಅನುಸರಿಸಬೇಕೇ ಅಥವಾ ಅಮೆರಿಕ ಮತ್ತು ಯುರೋಪ್ಅನ್ನೇ? ಈ ನಡೆ ಭಾರತದ ವರ್ಚಸ್ಸಿಗೆ ಹಾನಿಯುಂಟುಮಾಡುತ್ತದೆ ಎಂಬ ಭಯವಿದೆ ಎಂದು ತಸ್ಲಿಮಾ ಹೇಳಿದ್ದರು.