1993 ಮುಂಬೈ ಸ್ಫೋಟದಿಂದ ಶಿಕ್ಷೆಯವರೆಗೆ : ಟೈಮ್ ಲೈನ್
ಮುಂಬೈ, ಸೆಪ್ಟೆಂಬರ್ 7: 1993ರ ಮುಂಬೈ ಸ್ಫೋಟ ಪ್ರಕರಣದ ರೂವಾರಿ ಅಬು ಸಲೇಂಗೆ ವಿಶೇಷ ಟಾಡಾ (Terrorist and Disruptive Activity) ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ದಾವೂದ್ ಇಬ್ರಾಹಿಂ ಬಲಗೈ ಬಂಟ ಅಬು ಸಲೇಂ ಮತ್ತು ಕರೀಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೆ, ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. ಇನ್ನೊಬ್ಬ ಅಪರಾಧಿ ರಿಯಾಜ್ ಸಿದ್ದಿಖಿಗೆ 10 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.
1993 ಮುಂಬೈ ಸ್ಫೋಟ: ಅಬು ಸಲೇಂಗೆ ಜೀವಾವಧಿ, ಇನ್ನಿಬ್ಬರಿಗೆ ಗಲ್ಲು
ಇದೇ ವರ್ಷದ ಜೂನ್ ನಲ್ಲಿ, ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿದಂತೆ 6 ಜನರನ್ನು ಅಪರಾಧಿಗಳು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಕೋರ್ಟು ತೀರ್ಪು ನೀಡಿದ ಎರಡು ವಾರದಲ್ಲಿ ಮುಸ್ತಫಾ ದೊಸ್ಸಾ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇಂದು ಉಳಿದ 5 ಜನರಿಗೆ ಶಿಕ್ಷೆ ಪ್ರಕಟಿಸಲಾಗಿದೆ.
1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಭಾರತ ಮಾತ್ರವಲ್ಲದೆ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಮಧ್ಯಾಹ್ನ 1.30ರಿಂದ 3.40ರ ಮಧ್ಯೆ ನಡೆದ 12 ಸರಣಿ ಸ್ಫೋಟ 257 ಜನರು ಸಾವನ್ನಪ್ಪಿ 713 ಜನರು ಗಾಯಗೊಂಡಿದ್ದರು. 27 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಯೂ ಈ ಸ್ಫೋಟಕ್ಕೆ ನಾಶವಾಗಿತ್ತು.
1993 ಮುಂಬೈ ಸ್ಫೋಟ: ಅಪರಾಧಿಗಳಿಗಿಂದು ಶಿಕ್ಷೆಯ ಪ್ರಮಾಣ ಘೋಷಣೆ
ಈ ಪ್ರಕರಣದ ತನಿಖೆ ಸರಿಸುಮಾರು 25 ವರ್ಷ ನಡೆದು ಬಂದಿದೆ. ಅದರ ಸಂಪೂರ್ಣ ವಿವರಗಳು ಇಲ್ಲಿವೆ,
ಜನವರಿ 1, 1993: ಮೊಹಮ್ಮದ್ ದೊಸ್ಸಾ ಪನ್ವೇಲ್ ನಲ್ಲಿರುವ ಹೋಟೆಲ್ ಪರ್ಶಿಯನ್ ದರ್ಬಾರ್ ನಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮೊದಲ ಸಭೆ ನಡೆಸಿದ್ದ.
ಜನವರಿ 19, 1993: ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮೊನ್ ದುಬೈನಲ್ಲಿ ಇನ್ನೊಂದು ಸಭೆ ನಡೆಸಿದ್ದ. ಸ್ಫೋಟದ ನೀಲನಕ್ಷೆ ಅಲ್ಲಿ ಸಿದ್ಧವಾಗಿತ್ತು. ಶಸ್ತ್ರಾಸ್ತ್ರಗಳ ಸಾಗಣೆ, ಇತರ ಸಲಕರಣೆಗಳು, ಸ್ಫೋಟಕಗಳ ಸಾಗಣೆಗೆ ಟೈಗರ್ ಮೆಮೆನ್ ಒಪ್ಪಿಕೊಂಡಿದ್ದ. ಸಮುದ್ರ ಮಾರ್ಗವಾಗಿ ಪಾಕಿಸ್ತಾನ ಮತ್ತು ದುಬೈನಿಂದ ಶಸ್ತ್ರಾಸ್ತ್ರಗಳನ್ನು ತರಲಾಯಿತು.
1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು
ಫೆಬ್ರವರಿ 2-8, 1993: ರಾಯಗಢ ಜಿಲ್ಲೆಯಲ್ಲಿರುವ ಶೆಖಡಿ ತೀರಕ್ಕೆ ಡಿಟೊನೇಟರ್ ಗ ಳು, ಆರ್.ಡಿ.ಎಕ್ಸ್ ನಂಥ ಸ್ಫೋಟಕಗಳು, ಹ್ಯಾಂಡ್ ಗ್ರೆನೇಡ್ ಗಳು, ಶಸ್ತ್ರಾಸ್ತ್ರಗಳನ್ನು ತರಲಾಯಿತು.
ಮಾರ್ಚ್ 4, 1993: ಸ್ಫೋಟಕ್ಕೆ ಬೇಕಾದ ಒಂದು ಹಂತದ ಸಿದ್ಧತೆಗಳು ಮುಗಿದಿತ್ತು. ತಾಜ್ ಮಹಲ್ ಹೊಟೇಲ್ ನಲ್ಲಿ ಸ್ಫೋಟಕ್ಕೆ ಪೂರ್ವಭಾವಿ ಸಭೆ ಕರೆದಿದ್ದ ಟೈಗರ್ ಮೆಮೊನ್.
ಮಾರ್ಚ್ 7, 1993: ಶಫಿ ಮನೆಯಲ್ಲಿ ಮತ್ತೊಂದು ಸುತ್ತಿನ ಸಭೆಯಲ್ಲಿ ಟೈಗರ್ ಮೆಮೊನ್ ನಡೆಸಿದ್ದ. ಈ ಸಭೆಯಲ್ಲಿ ಗುಂಪುಗಳನ್ನು ವಿಂಗಡಣೆ ಮಾಡಿ ಎಲ್ಲರಿಗೂ ತಮ್ಮ ಗುರಿಗಳನ್ನು ನೀಡಿದ್ದ.
ಮಾರ್ಚ್ 8, 1993: ಬಬ್ಲೂ ಮನೆಯಲ್ಲಿ ಮತ್ತೊಂದು ಸಭೆ ನಡೆಸಿದ ಟೈಗರ್ ಮೆಮೊನ್ ದಾಳಿ ಮಾಡಬೇಕಾದ ಗುರಿಗಳನ್ನು ಅಂತಿಮಗೊಳಿಸಿದ. ಎಲ್ಲೆಲ್ಲಿ ಬಾಂಬ್ ಇಡಬೇಕು ಎಂಬುದು ನಿರ್ಧಾರವಾಗಿತ್ತು.
ಮಾರ್ಚ್ 10, 1993: ಭಿವಂಡಿವಾಲಾದಲ್ಲಿರುವ ಮೊಬಿನಾ ಅಲಿಯಾಸ್ ಬಯ್ಯಾಮೂಸಾ ಮನೆಯಲ್ಲಿ ಎರಡನೇ ಸಭೆ ನಡೆಯಿತು. ಇಲ್ಲಿ ಪ್ರತಿಯೊಬ್ಬರಿಗೆ 5,000 ರೂಪಾಯಿ ನೀಡಿದ ಟೈಗರ್ ಮೆಮೊನ್ ಮತ್ತೆ ಅವರಲ್ಲೇ ಗುಂಪುಗಳನ್ನು ರಚಿಸಿದ.
ಮಾರ್ಚ್ 11, 1993: ಮಾಹಿಮ್ ನ ದರ್ಗಾ ಸ್ಟ್ರೀಟ್ ನಲ್ಲಿರುವ ಅಲ್ ಹುಸೇನ್ ಬಿಲ್ಡಿಂಗ್ ನಲ್ಲಿ ಸಭೆ ನಡೆಯಿತು. ಯೋಜನೆಯ ಎಲ್ಲಾ ವಿವರಗಳನ್ನೂ ಅಂತಿಮಗೊಳಿಸಲಾಯಿತು. ಮೆಮೊನ್ ಮತ್ತು ಆತನ ಸಂಬಂಧಿಕರಿಗೆ ಸೇರಿದ ಅಲ್ ಹುಸೇನಿ ಕಟ್ಟಡದಲ್ಲಿ ಆರ್.ಡಿ.ಎಕ್ಸ್ ಸ್ಫೋಟಕಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ತಂದು ಇಡಲಾಯಿತು.
ಮಾರ್ಚ್ 12, 1993: ಬಾಂಬ್ ಮತ್ತು ಸ್ಪೋಟಕಗಳನ್ನು 12 ಸ್ಥಳಗಳಲ್ಲಿ ಇಡಲಾಯಿತು. 12 ಸರಣಿ ಸ್ಫೋಟಗಳು ಇಡೀ ಮುಂಬೈಯನ್ನು ನಡುಗಿಸಿಬಿಟ್ಟಿತು.
ನವೆಂಬರ್ 4, 1993: 10,000 ಪುಟಗಳ ಪ್ರಾಥಮಿಕ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಸಂಜಯ್ ದತ್ ಸೇರಿದಂತೆ 189 ಮಂದಿಯನ್ನು ಆರೋಪಿಯನ್ನಾಗಿಸಲಾಯಿತು.
ನವೆಂಬರ್ 19, 1993: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಕೇಷನ್ (ಸಿಬಿಐ) ಕೈಗೆ ಸಂಪೂರ್ಣ ಕೇಸ್ ತನಿಖೆ ವಹಿಸಲಾಯಿತು.
ಏಪ್ರಿಲ್ 1, 1994: ಸಿಟಿ ಸೆಷನ್ಸ್ ಮತ್ತು ಸಿವಿಲ್ ನ್ಯಾಯಾಲಯದಿಂದ ಅರ್ತುರ್ ರಾಬ್ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದ ಒಳಗಿರುವ ಕಟ್ಟಡಕ್ಕೆ ಟಾಡಾ ನ್ಯಾಯಾಲಯವನ್ನು ಸ್ಥಳಾಂತರಗೊಳಿಸಲಾಯಿತು.
ಏಪ್ರಿಲ್ 19, 1995 : ಪ್ರಕರಣದ ಕುರಿತು ಕೋರ್ಟಿನಲ್ಲಿ ವಿಚಾರಣೆ ಆರಂಭ.
ಏಪ್ರಿಲ್ 1995 : 26 ಆರೋಪಿಗಳನ್ನು ಪ್ರಕರಣದಿಂದ ಟಾಡಾ ನ್ಯಾಯಾಲಯ ಕೈಬಿಟ್ಟಿತು. ಉಳಿದ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಯಿತು. ಆಗಿನ ಟ್ರಾವೆಲ್ ಏಜೆಂಟ್ ಹಾಲಿ ಸಮಾಜವಾದಿ ಪಕ್ಷದ ಸಂಸತ್ ಸದಸ್ಯ ಅಬು ಅಸೀಮ್ ಅಜ್ಮಿ ಮತ್ತು ಅಮ್ಜೆದ್ ಮೆಹೆರ್ ಬಾಕ್ಸ್ ರನ್ನು ಸುಪ್ರಿಂ ಕೋರ್ಟ್ ಪ್ರಕರಣದಿಂದ ಕೈಬಿಟ್ಟಿತು. ಹೀಗೆ 28 ಆರೋಪಿಗಳು ಪ್ರಕರಣದಿಂದ ಹೊರ ಬಂದರು.
ಮಾರ್ಚ್ 1995: ಪಿಡಿ ಕೋಡೆಯವರನ್ನು ಟಾಡಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು.
ಅಕ್ಟೋಬರ್ 2000 : 684ಕ್ಕೂ ಅಧಿಕ ಸಾಕ್ಷಿಗಳ ವಿಚಾರಣೆ ಮುಕ್ತಾಯ.
ಆಗಸ್ಟ್ 2001 - ಆಗಸ್ಟ್ 2002: ಸರ್ಕಾರಿ ಮತ್ತು ಪ್ರತಿವಾದಿ ವಕೀಲರ ವಾದ ಪ್ರತಿವಾದಗಳು ಮುಕ್ತಾಯ
2005: 25 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ನೀಡಬಾರದು ಮತ್ತು ಗಲ್ಲು ಶಿಕ್ಷೆ ನೀಡಬಾರದು ಎಂಬ ಷರತ್ತಿನ ಮೇಲೆ ಪೋರ್ಚುಗಲ್ ಅಬು ಸಲೇಮ್ ನನ್ನು ಭಾರತ್ಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿತು.
ಆಗಸ್ಟ್ 10, 2006: ಸೆಪ್ಟೆಂಬರ್ 12ರಂದು ತೀರ್ಪು ಣಿಡಲಾಗುವುದು ಎಂದು ನ್ಯಾ. ಕೋಡೆ ಹೇಳಿದರು.
ಸೆಪ್ಟೆಂಬರ್ 12, 2006 : ಟೈಗರ್ ಮೆಮೊನ್ ಕುಟುಂಬದ ನಾಲ್ವರಿಗೆ ಶಿಕ್ಷೆ ಪ್ರಮಾಣ ಪ್ರಕಟ, ಮೂವರು ನಿರ್ದೋಷಿ ಎಂದು ತೀರ್ಪು.
ನವೆಂಬರ್ 2006 : ಕಾಂಗ್ರೆಸ್ ಸಂಸದ ನಟ ದಿವಂಗತ ಸುನೀಲ್ ದತ್ ಅವರ ಪುತ್ರ ಸಂಜಯ್ ದತ್ ಅವರು ಅಕ್ರಮವಾಗಿ 9mm ಪಿಸ್ತೊಲ್ ಹಾಗೂ ಎಕೆ 47 ರೈಫಲ್ ಹೊಂದಿದ್ದ ಆರೋಪದ ಮೇಲೆ ಟಾಡಾ ಕಾಯ್ದೆಯಂತೆ ಬಂಧನ.
ಡಿಸೆಂಬರ್ 4, 2006: ತೀರ್ಪು ಮುಗಿಸಿದ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿಡಿ ಕೋಡೆ.
ಜುಲೈ 27, 2007: ಯಾಕೂಬ್ ಮೆಮೊನ್ ಗೆ ಗಲ್ಲು ಶಿಕ್ಷೆ ನೀಡಿದ ವಿಶೇಷ ನ್ಯಾಯಾಲಯ.
ಅಕ್ಟೋಬರ್ 19, 2012: ಅಬು ಸಲೇಮ್ ನನ್ನು ಮತ್ತೆ ತನಗೆ ಹಸ್ತಾಂತರಿಸುವ ಅಗತ್ಯವಿಲ್ಲ ಎಂದು ಪೋರ್ಚುಗಲ್ ಹೇಳಿಕೆ. ಅಲ್ಲಿನ ನ್ಯಾಯಾಲಯ ಹಸ್ತಾಂತರವನ್ನು ರದ್ದುಗೊಳಿಸಿದರೂ ಪೋರ್ಚುಗಲ್ ಈ ಹೇಳಿಕೆ ನೀಡಿತ್ತು.
ಮಾರ್ಚ್ 21, 2013: ಸಂಜಯ್ ದತ್ ಶಿಕ್ಷೆಯನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದ್ದರಿಂದ ಸಂಜಯ್ ದತ್ ಮತ್ತೆ ಜೈಲು ಪಾಲಾದರು.
ಆಗಸ್ಡ್ 5, 2013: ಭಾರತಕ್ಕೆ ಅಬು ಸಲೇಂ ನನ್ನು ಹಸ್ತಾಂತರಿಸಿದ್ದು ಸರಿ ಎಂದ ಸುಪ್ರಿಂ ಕೋರ್ಟ್ ಹಸ್ತಾಂತರ ನಿರ್ಧಾರವನ್ನು ಎತ್ತಿ ಹಿಡಿಯಿತು.
ಜುಲೈ 30, 2015: ಯಾಕೂಬ್ ಮೆಮೊನ್ ನನ್ನು ಗಲ್ಲಿಗೇರಿಸಲಾಯಿತು.
ಜೂನ್ 16, 2017: ಮುಸ್ತಾಫಾ ದೊಸ್ಸಾ ಮತ್ತು ಅಬು ಸಲೇಂ ಸೇರಿ 6 ಜನರು ಮುಂಬೈ ಬಾಂಬ್ಬ್ ಸ್ಫೋಟ ಪ್ರಕರಣದಲ್ಲಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತು.
ಸೆಪ್ಟೆಂಬರ್ 7, 2017: 1993ರ ಮುಂಬೈ ಸ್ಫೋಟ ಪ್ರಕರಣದ ರೂವಾರಿ, ದಾವೂದ್ ಬಲಗೈ ಬಂಟ ಅಬು ಸಲೇಂಗೆ ವಿಶೇಷ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಕರೀಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೆ, ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. ಇನ್ನೊಬ್ಬ ಅಪರಾಧಿ ರಿಯಾಜ್ ಸಿದ್ದಿಖಿಗೆ 10 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.
* ಮಾರ್ಚ್ 12, 1993ರಲ್ಲಿ ಸ್ಫೋಟವಾದ ಸ್ಥಳಗಳು: ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡ, ನಾರಿಮನ್ ಪಾಯಿಂಟ್ ನ ಏರ್ ಇಂಡಿಯಾ ಕಟ್ಟಡ, ವೊರ್ಲಿಯ ಸೆಂಚುತಿ ಬಜಾರ್, ಹೋಟೆಲ್ ಸೀ ರಾಕ್ ಹಾಗೂ ಜುಹೂನ ಸೆಂಟ್ಯೂರ್
* ದಾವೂದ್ ಇಬ್ರಾಹಿಂ, ಟೈಗರ್ ಮೆಮೊನ್ ಹಾಗೂ ಅಯೂಬ್ ಮೆಮೊನ್ ಇಡೀ ಸ್ಫೋಟದ ರುವಾರಿಗಳು ಹಾಗೂ ಪ್ರಮುಖ ಅಪರಾಧಿಗಳಾಗಿದ್ದಾರೆ.
* ಒಟ್ಟಾರೆ 100 ಜನರನ್ನು ಅಪರಾಧಿಗಳು ಎಂದು ಘೋಷಿಸಲಾಯಿತು. 12 ಜನರಿಗೆ ಮರಣದಂಡನೆ ಹಾಗೂ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ಟಾಡಾ ಕೋರ್ಟ್ ಪ್ರಕಟಿಸಿತ್ತು.
* ಅಪರಾಧಿಗಳ ಪೈಕಿ ಮರಣದಂಡನೆ ಶಿಕ್ಷೆ ಪಡೆದಿದ್ದ ಮಹಮ್ಮದ್ ಇಕ್ಬಾಲ್ ಹಾಗೂ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕಸ್ಟಮ್ ಅಧಿಕಾರಿಯಾಗಿದ್ದ ಎಸ್ ಎನ್ ಥಾಪಾ ಅವರು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಮೃತಪಟ್ಟಿದ್ದಾರೆ.