ಕೊನೆಗೂ ಸುಪ್ರೀಂನಲ್ಲಿ ಕ್ಷಮೆಯಾಚಿಸಿದ ರಾಹುಲ್ ಗಾಂಧಿ
Recommended Video
ನವದೆಹಲಿ, ಏಪ್ರಿಲ್ 30: 'ಚೌಕಿದಾರ್ ಕಳ್ಳತನ ಮಾಡಿದ್ದಾನೆ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ' ಎಂದು ಅನಗತ್ಯವಾಗಿ ರಾಜಕೀಯ ಉದ್ದೇಶಕ್ಕೆ ಸುಪ್ರೀಂಕೋರ್ಟ್ ಹೆಸರನ್ನು ಬಳಸಿಕೊಂಡಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ಸರ್ವೋಚ್ಛ ನ್ಯಾಯಾಲಯದ ಕ್ಷಮೆ ಕೋರಿದ್ದಾರೆ.
ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ಬಲಗೊಳ್ಳುವ ಸೂಚನೆ ಅರಿತ ಬಳಿಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ಗೆ ಕ್ಷಮೆಯಾಚಿಸಿದ್ದಾರೆ. ರಾಹುಲ್ ಗಾಂಧಿ ಅವರ ಪರವಾಗಿ ಕೋರ್ಟ್ನಲ್ಲಿ ಹಾಜರಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ, ಕ್ಷಮೆಯಾಚನೆ ಹೇಳಿಕೆ ನೀಡಿದರು. ಇದಕ್ಕೂ ಮುನ್ನ ಅವರು ತಾವು ಚುನಾವಣಾ ಪ್ರಚಾರದ ಆವೇಶದಲ್ಲಿ ಸುಪ್ರೀಂಕೋರ್ಟ್ ಹೆಸರನ್ನು ತಪ್ಪಾಗಿ ಉಲ್ಲೇಖಿಸಿದ್ದಾಗಿ ವಿಷಾದಿಸಿದ್ದರು.
ಚೌಕಿದಾರ್ ಚೋರ್ ಹೈ : ವಿಷಾದ ವ್ಯಕ್ತಪಡಿಸಿದ ರಾಹುಲ್, ಕ್ಷಮೆಗೆ ನಕಾರ
ಇದಕ್ಕೂ ಮೊದಲು ಎರಡು ಬಾರಿ ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದ ರಾಹುಲ್ ಗಾಂಧಿ, 'ಚೌಕಿದಾರ್ ಚೋರ್ ಹೈ' ಹೇಳಿಕೆಯಲ್ಲಿ ಸುಪ್ರೀಂಕೋರ್ಟ್ಅನ್ನು ತಪ್ಪಾಗಿ ಉಲ್ಲೇಖ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರೆ ವಿನಾ ಕ್ಷಮೆ ಕೋರಿರಲಿಲ್ಲ. ಇದರಿಂದ ಸುಪ್ರೀಂಕೋರ್ಟ್ ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿತು.
ರಾಹುಲ್ ಗಾಂಧಿ ಬಳಸಿದ ಭಾಷೆಯ ಕುರಿತು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ರಾಜಕೀಯ ಹೇಳಿಕೆಗಳ ಸಂದರ್ಭದಲ್ಲಿ ತನ್ನ ಹೆಸರನ್ನು ಬಳಸಿಕೊಂಡಿರುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಒಳಗೊಂಡ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿತು.
ಕ್ಷಮೆ ಯಾಚಿಸುತ್ತೇವೆ
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನಾವು ಮೂರು ತಪ್ಪುಗಳನ್ನು ಮಾಡಿದ್ದೇವೆ. ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಅಫಿಡವಿಟ್ನಲ್ಲಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ. ನ್ಯಾಯಾಲಯಕ್ಕೆ ಕ್ಷಮೆಯಾಚಿಸುತ್ತೇನೆ. ಸೋಮವಾರ ಈ ಬಗ್ಗೆ ಹೊಸ ಅಫಿಡವಿಟ್ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ನಿಗದಿಪಡಿಸಲಾಗಿದೆ.
ಕ್ಷಮೆಯಾಚಿಸದೆ ಇರುವುದು ನ್ಯಾಯಾಂಗ ನಿಂದನೆ
ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್ ಹೆಸರನ್ನು ಎಳೆದು ತರುವ ಮೂಲಕ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂಕೋರ್ಟ್ನಲ್ಲಿ ದೂರಿದ್ದರು. ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿಯೇ ಸುಪ್ರೀಂಕೋರ್ಟ್ ಹೆಸರನ್ನು ಉಲ್ಲೇಖಿಸಿದ್ದರು. ಈ ಬಗ್ಗೆ ಅವರು ತಮ್ಮ ಹಿಂದಿನ ಎರಡೂ ಅಫಿಡವಿಟ್ಗಳಲ್ಲಿ ವಿಷಾದ ವ್ಯಕ್ತಪಡಿಸಿದ್ದರೇ ವಿನಾ, ಕ್ಷಮೆ ಯಾಚಿಸಿಲ್ಲ. ಅವರು ಬೇಷರತ್ ಕ್ಷಮೆಯಾಚಿಸದೆ ಇದ್ದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ವಕೀಲ ಮುಕುಲ್ ರೋಹಟಗಿ ಹೇಳಿದ್ದರು.
ಚೌಕಿದಾರ್ ಚೋರ್ ಹೈ ಹೇಳಿಕೆ: ಸುಪ್ರೀಂಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿಷಾದ
22 ಪುಟಗಳು ಬೇಕಾಯಿತೇ
ರಾಹುಲ್ ಗಾಂಧಿ ಅವರು ನೇರವಾಗಿ ಕ್ಷಮೆ ಕೋರದೆ ಅಫಿಡವಿಟ್ನಲ್ಲಿ ಸಲ್ಲಿಸಿದ್ದ ಹೇಳಿಕೆಯಲ್ಲಿ ಮುಚ್ಚಿದ ಆವರಣದಲ್ಲಿ 'ವಿಷಾದ' ವ್ಯಕ್ತಪಡಿಸಿದ್ದರು. ಈ ಮೂಲಕ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಷಾದ ವ್ಯಕ್ತಪಡಿಸಲು ನಿಮಗೆ 22 ಪುಟಗಳು ಬೇಕಾಯಿತೇ? ನಿಮ್ಮ ಅಫಿಡವಿಟ್ನಲ್ಲಿ ವಿರೋಧಾಭಾಸವಿದೆ ಎಂದು ನ್ಯಾಯಪೀಠ ಅಸಮಾಧಾನದಿಂದ ಹೇಳಿತು.
ರಾಹುಲ್ ಹೇಳಿದ್ದೇನು?
ರಫೇಲ್ ಡೀಲ್ ಕುರಿತಾದ ತನ್ನ ಹಿಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆಗೆ ಒಳಪಡಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ಅರ್ಜಿಯನ್ನು ತಳ್ಳಿಹಾಕಿತ್ತು. ಈ ಬಗ್ಗೆ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ, ಚೌಕಿದಾರ್ ಕಳ್ಳತನ ಮಾಡಿದ್ದಾನೆ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ ಎಂದು ಹೇಳಿಕೆ ನೀಡಿದ್ದರು. ಸುಪ್ರೀಂಕೋರ್ಟ್ ಮೋದಿ ಅವರ ಹೆಸರನ್ನು ಮತ್ತು ಚೌಕಿದಾರ ಎಂಬ ಪದವನ್ನು ಎಲ್ಲಿಯೂ ಬಳಸಿರಲಿಲ್ಲ. ಈ ರೀತಿ ಹೇಳಿಕೆ ನೀಡದ ಸುಪ್ರೀಂಕೋರ್ಟ್ ಹೆಸರನ್ನು ಉಲ್ಲೇಖಿಸಿರುವುದು ನ್ಯಾಯಾಂಗ ನಿಂದನೆ ಎಂದು ಆರೋಪಿಸಿ ಮೀನಾಕ್ಷಿ ಲೇಖಿ ದೂರು ಸಲ್ಲಿಸಿದ್ದರು.