ಲೌಡ್ ಸ್ಪೀಕರ್ನಲ್ಲಿ ಪಂಜಾಬಿ ಹಾಡು ಹಾಕಿದ ಚೀನಾ ಸೈನಿಕರು
ಲಡಾಖ್, ಸೆಪ್ಟೆಂಬರ್ 17: ಗಡಿಯಲ್ಲಿ ಸದಾ ತಂಟೆ ಮಾಡುತ್ತಿರುವ ಚೀನಾ ಪಡೆಗಳು, ಭಾರತೀಯ ಸೈನಿಕರನ್ನು ಗೊಂದಲಕ್ಕ ಸಿಲುಕಿಸಲು ಅಥವಾ ತಮಾಷೆಗಾಗಿ ಕೀಟಲೆ ಮಾಡಲು ಆರಂಭಿಸಿದೆ. ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಪ್ಯಾಂಗೊಂಗ್ ತ್ಸೊ ಸರೋವರ ಪ್ರದೇಶದಲ್ಲಿನ ಫಿಂಗರ್ 4 ಎತ್ತರ ಪ್ರದೇಶದಲ್ಲಿ ಲೌಡ್ ಸ್ಪೀಕರ್ಗಳಲ್ಲಿ ಪಂಜಾಬಿ ಹಾಡುಗಳನ್ನು ಚೀನೀ ಸೈನಿಕರು ಹಾಕಿದ್ದಾರೆ.
ಚೀನೀ ಪಡೆಗಳು ಪಂಜಾಬಿ ಹಾಡುಗಳನ್ನು ಮೊಳಗಿಸಿದ ಮುಂಚೂಣಿ ನೆಲೆಗಳ ಮೇಲೆ ಭಾರತೀಯ ಸೈನಿಕರು ಹದ್ದಿನ ಕಣ್ಣಿರಿಸಿದ್ದಾರೆ. ಭಾರತೀಯ ಸೈನಿಕರ ದಿಕ್ಕು ತಪ್ಪಿಸಲು ಅಥವಾ ಮನರಂಜನೆಗಾಗಿ ಅವರು ಈ ಹಾಡುಗಳನ್ನು ಹಾಕಿರಬಹುದು ಎನ್ನಲಾಗಿದೆ.
ಆದರೆ ಇದು ಚೀನಾದ ಯುದ್ಧತಂತ್ರಗಳಲ್ಲಿ ಒಂದಾಗಿದೆ. 1962ರ ಯುದ್ಧದ ಸಂದರ್ಭದಲ್ಲಿ ಚೀನಾ ಇದೇ ರೀತಿಯ ಲೌಡ್ ಸ್ಪೀಕರ್ ತಂತ್ರಗಳನ್ನು ಅನುಸರಿಸಿತ್ತು. 1967ರಲ್ಲಿ ನಾಥು ಲಾ ಚಕಮಕಿ ಸಂದರ್ಭದಲ್ಲಿ ಕೂಡ ಈ ರೀತಿ ನಡೆ ಚೀನಾದಿಂದ ಕಂಡುಬಂದಿತ್ತು.
ಚೀನಾ ವಿರುದ್ಧ ಕಾರ್ಯಾಚರಣೆಗೆ ಬೋಫೋರ್ಸ್ ಗನ್ ಬಳಕೆ
ದೆಹಲಿಯಲ್ಲಿ ಕುಳಿತ ರಾಜಕಾರಣಿಗಳ ಹುಚ್ಚಾಟಿಕೆ ಮತ್ತು ಕಲ್ಪನೆಗಳಿಂದಾಗಿ ಈ ಕೊರೆಯುವ ಚಳಿಯಲ್ಲಿ ಎತ್ತರ ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಇದು ನಿಷ್ಫಲ ಪ್ರಯತ್ನ ಎಂದು ಚೀನಾದ ಪಡೆಗಳು ಶುದ್ಧ ಹಿಂದಿಯಲ್ಲಿ ಭಾರತೀಯ ಪಡೆಗಳಿಗೆ ಲೌಡ್ ಸ್ಪೀಕರ್ ಮೂಲಕ ಹೇಳಲಾಗಿದೆ. ಮುಂದೆ ಓದಿ.
ಚೆಂಡು ಭಾರತದ ಅಂಗಳದಲ್ಲಿ
ಗಡಿಯಲ್ಲಿನ ಸನ್ನಿವೇಶವನ್ನು ತಿಳಿಗೊಳಿಸುವ ಸಂಬಂಧ ನಡೆದ ಐದು ಅಂಶಗಳ ಚರ್ಚೆಯ ಬಳಿಕವೂ ಚೀನಾ ತನ್ನ ವರಸೆ ಬದಲಿಸಿಲ್ಲ. ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಚೆಂಡು ಭಾರತದ ಅಂಗಳದಲ್ಲಿದೆ. ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವಲ್ಲಿ ಭಾರತ ವಿಫಲವಾಗುತ್ತಿದೆ. ಉದ್ವಿಗ್ನತೆ ಕಡಿಮೆ ಮಾಡಲು ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳಿ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
50 ಬೆಟಾಲಿಯನ್ ನಿಯೋಜನೆ
ಕಳೆದ ಒಂದು ವಾರದವರೆಗೆ ಲಡಾಖ್ನ ಎಲ್ಎಸಿಯಲ್ಲಿ ಚೀನಾವು ಸುಮಾರು 52,000 ಪಡೆಗಳನ್ನು ನಿಯೋಜಿಸಿದೆ ಎಂದು ಹೇಳಲಾಗಿದೆ. ಇದರಲ್ಲಿ ಸುಮಾರು 10,000 ಪಡೆಗಳನ್ನು ಪ್ಯಾಂಗೊಂಗ್ ತ್ಸೊ ಸರೋವರದ ದಕ್ಷಿಣ ತೀರದಲ್ಲಿ ನಿಯೋಜನೆ ಮಾಡಲಾಗಿದೆ. ಆಗಸ್ಟ್ 29-30ರಂದು ಈ ಭಾಗದಲ್ಲಿ ಉಭಯ ಪಡೆಗಳ ನಡುವೆ ಉದ್ವಿಗ್ನತೆ ತೀವ್ರವಾಗಿತ್ತು.
ಪೂರ್ವ ಲಡಾಖ್ನಲ್ಲಿ ಯುದ್ಧಕ್ಕೆ ಭಾರತೀಯ ಸೇನೆ ಸರ್ವ ಸನ್ನದ್ಧ
ಭಾರತದ ಕ್ರಿಯೆಗೆ ಪ್ರತಿಕ್ರಿಯೆ
ನಾವು ಗಡಿಯಲ್ಲಿ ಯಥಾಸ್ಥಿತಿ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇದುವರೆಗೂ ಭಾರತೀಯ ಸೇನೆ ಇಲ್ಲಿ ಪಡೆಗಳನ್ನು ಹೆಚ್ಚಿಸುವ ಮೂಲಕ ಯಥಾಸ್ಥಿತಿಯನ್ನು ಬದಲಿಸಿದೆ. ಭಾರತದ ಕ್ರಿಯೆಗೆ ಪ್ರತಿಯಾಗಿ ತಾನೂ ಪ್ರತಿಕ್ರಿಯೆ ನೀಡಿದ್ದಾಗಿ ಚೀನಾ ಹೇಳಿಕೊಂಡಿದೆ.
ಚಟುವಟಿಕೆ ಮುಂದುವರಿಯಲಿದೆ
ಸೇನಾ ಮಟ್ಟದ ಮಾತುಕತೆಯ ಫಲಿತಾಂಶಕ್ಕೆ ಅನುಗುಣವಾಗಿ ಗಡಿಯಲ್ಲಿನ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯ ನಡೆಯಲಿದೆ. ಈ ವಾರ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಎತ್ತರ ಪ್ರದೇಶಗಳನ್ನು ಆಗ್ರಮಿಸುವ ಕಾರ್ಯವನ್ನು ಭಾರತೀಯ ಸೇನೆ ಮುಂದುವರಿಸಲಿದೆ ಎಂದು ಸೇನಾ ಪಡೆಯ ಮೂಲಗಳು ತಿಳಿಸಿವೆ.