ಉತ್ತರಾಖಂಡದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹಿಂದಿರುಗಿದ ಚೀನಾ ಸೇನೆ
ನವದೆಹಲಿ, ಸೆಪ್ಟೆಂಬರ್ 29: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ಉತ್ತರಾಖಂಡದ ಬರಹೋತಿ ಸೆಕ್ಟರ್ನಲ್ಲಿ ಅತಿ ಕ್ರಮ ಪ್ರವೇಶ ಮಾಡಿ ಕೆಲವೇ ಗಂಟೆಗಳಲ್ಲಿ ಹಿಂದಿರುಗಿದೆ.
ಈಶಾನ್ಯ ಲಡಾಖ್ ನಲ್ಲಿ ಉಭಯ ಪಕ್ಷಗಳೂ ಎರಡು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವ ಕೆಲಸವನ್ನು ಪೂರ್ಣಗೊಳಿಸಿದ್ದರೂ ಈಶಾನ್ಯ ಲಡಾಖ್ನಲ್ಲಿ ಘರ್ಷಣೆ ಮುಂದುವರೆದಿರುವುದರ ನಡುವೆಯೇ ಈ ಹೊಸ ಘಟನೆ ವರದಿಯಾಗಿದೆ.
ಲಡಾಖ್ನಲ್ಲಿ ತನ್ನ ಸೇನಾ ಸಿಬ್ಬಂದಿಗೆ ವಸತಿ ವ್ಯವಸ್ಥೆ ಬದಲಿಸಿದ ಚೀನಾ
ಉತ್ತರಾಖಂಡ್ ನಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿರುವ ಮಂದಿ, ಬರಹೋತಿ ಸೆಕ್ಟರ್ ನಲ್ಲಿ ಎರಡೂ ಕಡೆಗಳಲ್ಲಿ ಎಲ್ಎಸಿ ಕುರಿತು ಇರುವ ಭಿನ್ನ ಗ್ರಹಿಕೆಯಿಂದಾಗಿ ಈ ರೀತಿಯಾಗಿರಬಹುದು ಎಂದೂ ಹೇಳುತ್ತಿದ್ದಾರೆ.
ಆ.30 ರಂದು ಆ ಪರಿಪ್ರಮಾಣದಲ್ಲಿ (100 ಕ್ಕೂ ಹೆಚ್ಚಿನ ಮಂದಿ ಚೀನಾ ಸೈನಿಕರು) ಗಡಿ ಉಲ್ಲಂಹನೆ ಮಾಡಿ ಅತಿಕ್ರಮಣ ಮಾಡಿದ್ದು ಭಾರತದ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ. ಜತೆಗೆ ಬ್ರಿಡ್ಜ್ ಒಂದನ್ನು ನಾಶಪಡಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚೀನಾ ಎಲ್ಎಸಿಯ ಸೆಕ್ಟರ್ ನಾದ್ಯಂತ ಗಣನೀಯವಾಗಿ ತನ್ನ ಮೂಲಸೌಕರ್ಯ ಅಭಿವೃದ್ಧಿಯನ್ನು ಮಾಡುತ್ತಿದೆ. ಇತ್ತ ಭಾರತ ಈಶಾನ್ಯ ಲಡಾಖ್ ಪ್ರಾಂತ್ಯದಲ್ಲಿ ಎಲ್ಎಸಿಯ 3,500 ಕಿ.ಮೀ ನಾದ್ಯಂತ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದೆ.
ಘಟನೆ ಬಗ್ಗೆ ಅರಿವಿರುವವರು ಈ ಬಗ್ಗೆ ಮಾಹಿತಿ ನೀಡಿದ್ದು ಆ.30 ರಂದು ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಭಾರತೀಯ ಪಡೆ ಈ ಬೆಳವಣಿಗೆ ಬಳಿಕ ಆ ಪ್ರದೇಶದಲ್ಲಿ ಗಸ್ತು ತಿರುಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಈ ವರೆಗೂ ಚೀನಾದ ಅತಿಕ್ರಮಣದ ವಿಷಯವಾಗಿ ಅಧಿಕೃತ ಹೇಳಿಕೆ, ಪ್ರತಿಕ್ರಿಯೆ ಬಿಡುಗಡೆಯಾಗಿಲ್ಲ.
ಕಳೆದ ಅಕ್ಟೋಬರ್ ತಿಂಗಳಲ್ಲೂ ಒಬ್ಬ ಚೀನೀ ಸೈನಿಕ ಭಾರತದೊಳಗೆ ಪ್ರವೇಶ ಮಾಡಿ ಬಂಧಿಯಾಗಿದ್ದ. ಪೂರ್ವ ಲಡಾಖ್ನ ಡೆಮ್ಚೋಕ್ ಸೆಕ್ಟರ್ನಲ್ಲಿ ಆತನನ್ನ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆತ ದಾರಿ ತಪ್ಪಿ ಆಕಸ್ಮಿಕವಾಗಿ ಭಾರತ ಪ್ರವೇಶ ಮಾಡಿದ್ದು ಖಚಿತಗೊಂಡ ನಂತರ ಬಿಟ್ಟು ಕಳುಹಿಸಲಾಗಿತ್ತು.
ಕಳೆದ ವರ್ಷ ಕೊರೋನಾ ಸಂಕಷ್ಟ ಬಂದ ನಂತರ ಚೀನಾದ ಸೇನಾಪಡೆಗಳು ಲಡಾಖ್ನ ಗಡಿಭಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದವು. ಗಸ್ತು ತಿರುಗುವ ನೆವದಲ್ಲಿ ಭಾರತದ ಭೂಭಾಗವನ್ನು ಚೀನೀ ಸೈನಿಕರು ಅತಿಕ್ರಮಿಸಿಕೊಂಡಿದ್ದರು. ಭಾರತ ಮತ್ತು ಚೀನಾ ಮಧ್ಯೆ ವಾಸ್ತವ ಗಡಿನಿಯಂತ್ರಣ ರೇಖೆ ಇನ್ನೂ ಅಂತಿಮಗೊಳ್ಳದೇ ಇರುವುದರಿಂದ ಚೀನೀಯರಿಗೆ ಅತಿಕ್ರಮಣ ಸುಲಭ ಮಾಡಿತ್ತು.
ಇವರ ಅತಿಕ್ರಮಣವನ್ನು ಭಾರತೀಯ ಸೈನಕರು ಪ್ರತಿರೋಧಿಸಿದ ಬಳಿಕ ಲಡಾಖ್ನ ಹಲವು ಕಡೆಯ ಗಡಿಭಾಗದಲ್ಲಿ ಎರಡೂ ಕಡೆಯ ಸೈನಿಕರ ಮಧ್ಯೆ ಸಣ್ಣಪುಟ್ಟ ಸಂಘರ್ಷಗಳಾದವು.
ಅಂತಿಮವಾಗಿ ಗಾಲ್ವನ್ ಕಣಿವೆ ಬಳಿ ಚೀನೀ ಸೈನಿಕರು ದೊಡ್ಡ ಮಟ್ಟದಲ್ಲಿ ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡಿದರು. ಈ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಬಲಿಯಾದರು. ಚೀನೀ ಸೈನಿಕರೂ ಹತ್ಯೆಯಾಗಿದ್ದು ತಿಳಿದುಬಂದಿದೆ.
ಆಗಿನಿಂದಲೂ ಲಡಾಖ್ನ ಗಡಿಭಾಗದಲ್ಲಿ ಪ್ರಕ್ಷುಬ್ದ ವಾತಾವರಣ ಇದೆ. ಪರಿಸ್ಥಿತಿ ತಿಳಿಬೊಳಿಸಲು ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಸಂಘರ್ಷದ ಸ್ಥಳದಿಂದ ಸೇನಾ ಪಡೆಗಳನ್ನ ಹಿಂಪಡೆಯಲು ಎರಡೂ ಸೇನೆಗಳು ನಿರ್ಧರಿಸಿವೆ. ಆದರೆ, ಚೀನೀ ಸೇನೆ ಸಂಪೂರ್ಣವಾಗಿ ಕಾಲ್ತೆಗೆದಿಲ್ಲ.