ವಿವಾದಿತ ಗಡಿ ಪ್ರದೇಶದಲ್ಲಿ ಸೇನಾ ಚಟುವಟಿಕೆ ಜೊತೆ ಗಸ್ತು ತಿರುಗುವಿಕೆ ಹೆಚ್ಚಿಸಿದ ಚೀನಾ!
ನವದೆಹಲಿ, ಅಕ್ಟೋಬರ್ 19: ಭಾರತ ಮತ್ತು ಚೀನಾ ನಡುವಿನ ಗಡಿ ತಿಕ್ಕಾಟ ಮುಂದುವರಿದಿದೆ. ಚೀನಾದ ಸೇನೆಯಿಂದ ಗಡಿ ಗಸ್ತು ತಿರುಗುವುದು ಮತ್ತು ವಾರ್ಷಿಕ ತರಬೇತಿ ಹೆಚ್ಚಾಗುತ್ತಿರುವುದರ ಬಗ್ಗೆ ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
"ಚೀನಾ ಸಮಗ್ರ ಜಂಟಿ ಕಾರ್ಯಾಚರಣೆ ವ್ಯಾಯಾಮಗಳನ್ನು ನಡೆಸುತ್ತಿದೆ. ಅವರು ತಮ್ಮ ಸಶಸ್ತ್ರ ಪಡೆಗಳ ವಿವಿಧ ಅಂಶಗಳನ್ನು ಒಟ್ಟುಗೂಡಿಸುತ್ತಿದ್ದಾರೆ. ಈ ವರ್ಷ ಸೇನಾ ಪ್ರಮಾಣದಲ್ಲಿ ಹೆಚ್ಚಳ ಆಗಿರುವುದು ಕಂಡುಬಂದಿದೆ ಮತ್ತು ಅವುಗಳು ದೀರ್ಘಾವಧಿಗೆ ಮುಂದುವರಿದಿದೆ," ಎಂದು ಲೆಫ್ಟಿನೆಂಟ್ ಜನರಲ್ ಪಾಂಡೆ ತಿಳಿಸಿದ್ದಾರೆ.
ಚೀನಾಗೆ ಕರೆಂಟ್ ಶಾಕ್! ಇನ್ನೂ ಮುಂದಕ್ಕೆ ಕಾದಿದೆ ಮಾರಿ ಹಬ್ಬ!
"ಕೆಲವು ಪ್ರದೇಶಗಳಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ಗಸ್ತುಗಳಲ್ಲಿ ಅಲ್ಪ ಹೆಚ್ಚಳ ಕಂಡುಬಂದಿದ್ದು, ಮತ್ತಷ್ಟು ಯೋಧರನ್ನು ಸೇರಿಸಿರುವ ಶಂಕೆಯಿದೆ. ಆದರೆ ಗಸ್ತು ಮಾದರಿಗಳಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಗಳಿಲ್ಲ. ಆಳ ಪ್ರದೇಶಗಳಲ್ಲಿನ ವ್ಯಾಯಾಮಗಳ ವಾರ್ಷಿಕ ತರಬೇತಿಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಮೀಸಲುದ ರಚನೆಗಳು ತರಬೇತಿ ಪ್ರದೇಶಗಳಾಗಿ ಉಳಿದುಕೊಂಡಿವೆ.
ಭಾರತ-ಚೀನಾ ನಡುವೆ ಘರ್ಷಣೆಗೆ ಕಾರಣ?:
"ಕಳೆದ ಒಂದೂವರೆ ವರ್ಷಗಳ ಕಾಲ ನಮ್ಮ ಪಾಲಿಗೆ ತೀವ್ರ ಕಳವಳಕಾರಿ ವಿಷಯವಾಗಿತ್ತು. ಪೂರ್ವ ಲಡಾಖ್ ಪ್ರದೇಶದಲ್ಲಿ ಯಾವುದೇ ಆಕಸ್ಮಿಕ ಘಟನೆಗಳನ್ನು ಸಮರ್ಥವಾಗಿ ಎದುರಿಸುವ ಮತ್ತು ಸನ್ನದ್ಧತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗಿದೆ," ಎಂದು ಪೂರ್ವ ಸೇನಾ ಕಮಾಂಡರ್ ಹೇಳಿದ್ದಾರೆ. ಚೀನಾದ ಚಟುವಟಿಕೆಯ ಮಟ್ಟದಲ್ಲಿ ಸ್ವಲ್ಪ ಏರಿಕೆಯಾಗಿದ್ದರೂ, ವಾಸ್ತವ ನಿಯಂತ್ರಣ ರೇಖೆ (LAC) ಹತ್ತಿರ ಎರಡೂ ಕಡೆಯವರು ಮೂಲಸೌಕರ್ಯ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದು ಕೆಲವೊಮ್ಮೆ ಘರ್ಷಣೆಗೆ ಕಾರಣವಾಗುತ್ತದೆ ಎಂದು ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ. .
ಗಡಿ ನಿಯಂತ್ರಣ ರೇಖೆಯಲ್ಲಿ ಕಣ್ಗಾವಲು ಹೆಚ್ಚಳ:
"ನಾವು LAC ಮತ್ತು ಆಳದ ಪ್ರದೇಶಗಳಲ್ಲಿ ನಮ್ಮ ಕಣ್ಗಾವಲನ್ನು ಹೆಚ್ಚಿಸಿದ್ದೇವೆ. ಯಾವುದೇ ಆಕಸ್ಮಿಕ ದಾಳಿಗಳನ್ನು ಎದುರಿಸಲು ನಮಗೆ ಪ್ರತಿಯೊಂದು ವಲಯದಲ್ಲೂ ಸಾಕಷ್ಟು ಸಾಮರ್ಥ್ಯವಿದೆ. ಗಸ್ತು ತಿರುಗುವುದು ಹೆಚ್ಚಳ ಅಥವಾ ಬದಲಾಗಿಲ್ಲ, ಕೆಲವು ಪ್ರದೇಶಗಳಲ್ಲಿ ಅಲ್ಪ ಹೆಚ್ಚಳವಿದೆ," ಎಂದು ಸೇನಾ ಕಮಾಂಡರ್ ಹೇಳಿದರು.
ಗಡಿ ಕಣ್ಗಾವಲಿಗೆ ಡ್ರೋನ್, ರಾಡರ್ ಬಳಕೆ:
ಭಾರತೀಯ ಸೇನೆಯು ಕಣ್ಗಾವಲು ಡ್ರೋನ್ಗಳು, ಉತ್ತಮ ಕಣ್ಗಾವಲು ರಾಡಾರ್ಗಳು, ಸಂವಹನ ವ್ಯವಸ್ಥೆಗಳು ಮತ್ತು ಉತ್ತಮ ರಾತ್ರಿ ದೃಷ್ಟಿ ಸಾಮರ್ಥ್ಯವನ್ನು ಪರಿಚಯಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ತಂತ್ರಜ್ಞಾನದ ಪರಿಚಯವು ನಮ್ಮ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಅದರ ಕಡೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಲೆಫ್ಟಿನೆಂಟ್ ಜನರಲ್ ಪಾಂಡೆ ತಿಳಿಸಿದ್ದಾರೆ.
ಸಂಧಾನ ಮಾತುಕತೆಯಲ್ಲಿ ಚೀನಾ ಉಲ್ಟಾ:
ಕಳೆದ ಅಕ್ಟೋಬರ್ 10ರಂದು ನಡೆದ ಉಭಯ ಸೇನಾ ಕಮಾಂಡರ್ ನಡುವಿನ 13ನೇ ಸುತ್ತಿನ ಸಂಧಾನ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಬಗೆಹರಿಸುವಲ್ಲಿ ಚೀನಾ ಮತ್ತೊಮ್ಮೆ ಉಲ್ಟಾ ಹೊಡೆದಿದ್ದು, ವಿವಾದಿತ ಘರ್ಷಣೀಯ ಕೇಂದ್ರಗಳಲ್ಲಿ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವ ಭಾರತದ ಪ್ರಸ್ತಾಪವನ್ನು ಚೀನಾ ತಳ್ಳಿಹಾಕಿತ್ತು. ಪಾಂಗೊಂಗ್ ತ್ಸೊ, ಗಾಲ್ವಾನ್ ಮತ್ತು ಗೋಗ್ರಾಗಳಲ್ಲಿ ಇರುವಂತೆ ಬಫರ್ ವಲಯಗಳನ್ನು ರಚಿಸಿ ಆಗಿದೆ. ಅದೊಂದು ಅಂತಿಮ ಪರಿಹಾರವಾಗುವುದಿಲ್ಲ ಎಂದು ಭಾರತ ಹೇಳಿದೆ. ಆದರೆ ಹಾಟ್ ಸ್ಪ್ರಿಂಗ್ ಪ್ರದೇಶಗಳಲ್ಲಿ ಅದೇ ರೀತಿ ಬಫರ್ ಝೋನ್ ರಚಿಸಲು ಚೀನಾ ಒತ್ತಾಯಿಸಿದೆ. ಈ ಪ್ರದೇಶಗಳಲ್ಲಿ 3 ರಿಂದ 10 ಕಿಮೀ ಬಫರ್ ವಲಯ ಎಂದರೆ ಭಾರತವು ಸಾಂಪ್ರದಾಯಿಕವಾಗಿ ಮಾಡಿಕೊಂಡಿರುವ ಪ್ರದೇಶಗಳಲ್ಲಿ ಗಸ್ತು ತಿರುಗಲು ಸಾಧ್ಯವಾಗುವುದಿಲ್ಲ. ಮೇಲಾಗಿ, ಮೇ 2020 ರಲ್ಲಿ ಆರಂಭವಾದ ಸ್ಟ್ಯಾಂಡ್-ಆಫ್ನ ಭಾಗವಾಗಿ ಪರಿಗಣಿಸದ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಂತಹ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ, ಆದರೆ ಇವುಗಳನ್ನು ಚರ್ಚಿಸುವಲ್ಲಿ ಚೀನಾ ಹಿಂದೇಟು ಹಾಕಿದೆ.
ಗಡಿಯಲ್ಲಿ ಅಸ್ತಿತ್ವ ಸ್ಥಾಪನೆ ಬಗ್ಗೆ ಸೇನಾ ಮುಖ್ಯಸ್ಥರ ಮಾತು:
ಚೀನಾದ ಸೇನೆಯು ಎರಡನೇ ಚಳಿಗಾಲದ ವೇಳೆಗೆ ನಿಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ವಹಿಸಲು ಶುರು ಮಾಡಿದರೆ, ಅದು ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ಇರುವಂತೆ ಸಕ್ರಿಯ ನಿಯಂತ್ರಣ ರೇಖೆಯಲ್ಲದಿದ್ದರೂ ಅದೇ ರೀತಿಯ ಪರಿಸ್ಥಿತಿಗೆ (ನಿಯಂತ್ರಣ ರೇಖೆ) ಕಾರಣವಾಗುತ್ತದೆ. ಪ್ರಸ್ತುತ ಎರಡು ಗಡಿ ನಿಯಂತ್ರಣ ರೇಖೆಯಲ್ಲಿ 50,000 ದಿಂದ 60,000 ಯೋಧರನ್ನು ನಿಯೋಜನೆ ಮಾಡಲಾಗಿದೆ. "ಒಂದು ವೇಳೆ ಚೀನಾದ ಸೇನೆಯು ತನ್ನ ಸೇನಾ ನಿಯೋಜನೆ ಹೆಚ್ಚಿಸುವುದನ್ನು ಮುಂದುವರಿಸಿದರೆ, ಭಾರತೀಯ ಸೇನೆಯು ಕೂಡ ತನ್ನ ವ್ಯಾಪ್ತಿಯಲ್ಲಿ ಅಸ್ತಿತ್ವವನ್ನು ತೋರಿಸಿಕೊಳ್ಳಬೇಕಾಗುತ್ತದೆ, ಅದು ಪೀಪಲ್ಸ್ ಲಿಬರೇಶನ್ ಆರ್ಮಿಯಷ್ಟೇ ಉತ್ತಮವಾಗಿರುತ್ತದೆ," ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಎಚ್ಚರಿಸಿದ್ದರು.