ಚೀನಾ ವಿರುದ್ಧದ ಯುದ್ಧಕ್ಕೆ ತಯಾರಿ ಆರಂಭಿಸಿತೇ ಭಾರತ?
ಚೀನಾ ಗಡಿ ಭಾಗದ ಹಳ್ಳಿಗಳ ನಾಗರಿಕರನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವ ಭಾರತೀಯ ಸೇನೆ. ಚೀನಾದ ಪ್ರಮುಖ ಪತ್ರಿಕೆಯಾದ 'ದ ಪೀಪಲ್ಸ್ ಡೈಲಿ ಚೀನಾ' ವರದಿ. ಚೀನಾ ಮಾಧ್ಯಮದ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಭಾರತೀಯ ಸೇನೆ.
ನವದೆಹಲಿ, ಆಗಸ್ಟ್ 11: ಚೀನಾ ವಿರುದ್ಧ ಯುದ್ಧ ದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಭಾರತ-ಚೀನಾ ಗಡಿ ಭಾಗದಲ್ಲಿರುವ ತನ್ನ ಹಳ್ಳಿಗಳ ಜನತೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಆರಂಭಿಸಿದೆ ಎಂದು ಚೀನಾದ ಮಾಧ್ಯಮಗಳು ಹೇಳಿವೆ.
ಭಾರತ- ಚೀನಾ ಯುದ್ಧ? ದೋಕ್ಲಾಂ ಹತ್ತಿರದ ಹಳ್ಳಿಗರ ಸ್ಥಳಾಂತರ
ಚೀನಾದ 'ದ ಪೀಪಲ್ಸ್ ಡೈಲಿ ಚೀನಾ' ಎಂದ ಪತ್ರಿಕೆಯು ಈ ರೀತಿ ವರದಿ ಮಾಡಿದ್ದು, ಸಿಕ್ಕಿಂ ರಾಜ್ಯಕ್ಕೆ ಸೇರಿದ, ಇದೀಗ ಭಾರತ ಮತ್ತು ಚೀನಾದ ನಡುವಿನ ವಿರಸಕ್ಕೆ ಕಾರಣವಾಗಿರುವ ಡೊಕ್ಲಾಮ್ ಪ್ರಾಂತ್ಯಕ್ಕೆ ಸಮೀಪವಿರುವ 'ನಥಾಂಗ್' ಹಳ್ಳಿಯ ಜನರನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಅದು ತಿಳಿಸಿದೆ. ಈ ಪತ್ರಿಕೆಯ ಸುದ್ದಿಯನ್ನೇ ಮತ್ತೂ ಕೆಲವು ಪತ್ರಿಕೆಗಳು ಪುನರುಚ್ಛರಿಸಿವೆ.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಭಾರತೀಯ ಸೇನೆಯು, ಚೀನಾ ಮಾಧ್ಯಮಗಳ ಈ ಹೇಳಿಕೆಗೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೆಲವು ಸೇನಾಧಿಕಾರಿಗಳು ನಿರಾಕರಿಸಿದ್ದಾರೆ. ಇದು ಚೀನಾದ ಮಾಧ್ಯಮಗಳ ವರದಿಯನ್ನು ಪುಷ್ಟೀಕರಿಸಿದೆಯಲ್ಲದೆ, ಉಭಯ ದೇಶಗಳ ನಡುವಿನ ಯುದ್ಧದ ಭೀತಿ ಮತ್ತಷ್ಟು ಗಾಢವಾಗಿ ಆವರಿಸಿದೆಯೇ ಎಂಬ ಅನುಮಾನವನ್ನೂ ಹೆಚ್ಚಿಸಿದೆ.