ಬಿಜೆಪಿ ಮೊದಲು ಚೀನಾ ಜೊತೆ ಹೋರಾಡಲಿ, ನಂತರ ಕಾಂಗ್ರೆಸ್ ಜೊತೆ!
ಮುಂಬೈ, ಜೂನ್ 28: ಚೀನಾ ದೂತಾವಾಸದಿಂದ, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಫೌಂಡೇಶನ್ ದೇಣಿಗೆ ಸ್ವೀಕರಿಸಿರುವ ಬಗೆಗಿನ ಬಿಜೆಪಿ-ಕಾಂಗ್ರೆಸ್ ವಾಕ್ಸಮರಕ್ಕೆ ಶಿವಸೇನೆ ಧ್ವನಿಗೂಡಿಸಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ, "ಕಾಂಗ್ರೆಸ್ ಅನ್ನು ದೂರುವ ಮೊದಲು ಚೀನಾ ಗಡಿ ಅತಿಕ್ರಮಣದ ವಿಚಾರದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗೆ ಬಿಜೆಪಿಯವರು ಉತ್ತರ ನೀಡಲಿ"ಎಂದು ಬರೆಯಲಾಗಿದೆ.
ಭಾರತ-ಚೀನಾ ಗಡಿ ವಿವಾದದ ಮಧ್ಯೆ ಚೀನಾದ ಜತೆ ಮಹಾರಾಷ್ಟ್ರ ಒಪ್ಪಂದ
"ಕಾಂಗ್ರೆಸ್ ಪಕ್ಷವನ್ನು ಚೀನಾದ ಏಜೆಂಟ್ ಎಂದು ಕರೆದ ಕೂಡಲೇ, ಚೀನಾದ ಗಡಿನುಸುಳುವಿಕೆ ನಿಲ್ಲುವುದೇ"ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ. "ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಮೊದಲು ಚೀನಾದ ಜೊತೆ ಹೋರಾಡಲಿ"ಎಂದು ವ್ಯಂಗ್ಯವಾಡಲಾಗಿದೆ.
"ನಮ್ಮ ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ/ಮುಖಂಡರಿಗೆ ವಿದೇಶೀ ದೇಣಿಗೆ ಹರಿದು ಬರುತ್ತಿದೆ. ಕಾಂಗ್ರೆಸ್ಸಿಗೆ ಮಾತ್ರ ಹಣ ಬರುತ್ತಿರುವುದಲ್ಲ. ಬಿಜೆಪಿಯವರು ಈ ವಿಚಾರವನ್ನು ಪದೇಪದೇ ಕೆದಕಿ ಕೆಸರಿಗೆ ಕಲ್ಲು ಹೊಡೆಯುವ ಕೆಲಸವನ್ನು ಮಾಡುತ್ತಿದ್ದಾರೆ"ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
"ಕಳೆದ ಕೆಲವು ವರ್ಷಗಳಲ್ಲಿ ಚೀನಾದ ಅಧ್ಯಕ್ಷರು ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಒಂದು ಕಡೆ ಮಾತುಕತೆ ನಡೆಸುವುದು ಇನ್ನೊಂದು ವಿಶ್ವಾಸಘಾತಕ ಕೆಲಸ ಮಾಡುವುದು ಚೀನಾದ ಬುದ್ದಿ"ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ಮೋದಿ ಮೌನವೇಕೆ? ಏಕೆ ಅಡಗಿಕೊಂಡಿದ್ದಾರೆ? ಪಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
"ಗಡಿ ವಿಚಾರದಲ್ಲಿ ಇಡೀ ದೇಶವೇ ಪ್ರಧಾನಿ ಮೋದಿಯವರ ಬೆನ್ನಿಗೆ ನಿಂತಿದೆ. ಈಗ ನಾವು ಎದುರಿಸುತ್ತಿರುವ ಸಮಸ್ಯೆ ಇಡೀ ದೇಶಕ್ಕೆ ಹೊರತು, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಮಾತ್ರವಲ್ಲ"ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.