ಗಾಲ್ವಾನ್ ಕಣಿವೆಯಲ್ಲಿ ಚೀನಾದ ಬಾವುಟ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ
ನವದೆಹಲಿ, ಜನವರಿ 03: ಗಾಲ್ವಾನ್ನಲ್ಲಿ ಚೀನಾದ ಬಾವುಟ ಕಂಡು ಬಂದಿರುವ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನ ಮುರಿಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಚೀನಾದೊಂದಿಗಿನ ಬಿಕ್ಕಟ್ಟಿನ ವಿಚಾರವನ್ನು ಕೇಂದ್ರ ಸರ್ಕಾರ ನಿರ್ವಹಣೆ ಮಾಡುತ್ತಿರುವ ರೀತಿಯ ವಿರುದ್ಧವಾಗಿ ವಿರೋಧ ಪಕ್ಷಗಳು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, "ನಮ್ಮ ತ್ರಿವರ್ಣ ಧ್ವಜವೇ ಗಾಲ್ವಾನ್ನಲ್ಲಿ ಅಂದ. ಚೀನಾಕ್ಕೆ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಬೇಕು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವನ್ನು ಮುರಿಯಿರಿ," ಎಂದು ತಿಳಿಸಿದ್ದಾರೆ.
ಚೀನಾದಿಂದ ಗಡಿ ಗ್ರಾಮಗಳ ಹೆಸರು ಬದಲಾವಣೆ: ಭಾರತ ಆಕ್ರೋಶ
ಚೀನಾವು ಪ್ರಚಾರ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ 2022ರ ಹೊಸ ವರ್ಷದ ಮೊದಲ ದಿನದಂದು ಚೀನಾವು ಗಾಲ್ವಾನ್ನಲ್ಲಿ ತನ್ನ ಬಾವುಟವನ್ನು ಹಾರಿಸುವ ದೃಶ್ಯವು ಕಂಡು ಬಂದಿದೆ. ಚೀನಾವು ಗಡಿ ಪ್ರದೇಶದಲ್ಲಿರುವ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಿರುವ ವಿಚಾರವು ಇತ್ತೀಚೆಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಚೀನಾವು ಗಾಲ್ವಾನ್ನಲ್ಲಿ ತನ್ನ ಬಾವುಟವನ್ನು ಹಾರಿಸಿದೆ.
ಚೀನಾವು ಅಕ್ಟೋಬರ್ನಲ್ಲಿ ವಿವಾದಾತ್ಮಕ ಗಡಿ ಭೂಮಿ ಕಾನೂನನ್ನು ಪರಿಚಯ ಮಾಡಿದ್ದು ಇದು ಜನವರಿ 1, 2022 ಜಾರಿಗೆ ಬಂದಿದೆ. ಚೀನಾ ಹಾಗೂ ನೆರೆ ರಾಷ್ಟ್ರಗಳ ನಡುವಿನಲ್ಲಿ ವಿವಾದವು ಹೆಚ್ಚಳವಾದ ಸಂದರ್ಭದಲ್ಲಿ ಚೀನಾವು ಈ ವಿವಾದಾತ್ಮಕ ಕಾನೂನನ್ನು ಜಾರಿ ಮಾಡಿದೆ. ಹಲವಾರು ದಶಕಗಳಿಂದ ಚೀನಾ ಹಾಗೂ ಭಾರತ ನಡುವೆ ಗಡಿ ಸಂಘರ್ಷವಿದ್ದು, ಇದು 2020ರ ಮೇ ತಿಂಗಳಿನಿಂದ ಅಧಿಕವಾಗಿದೆ.
🇨🇳China’s national flag rise over Galwan Valley on the New Year Day of 2022.
— Shen Shiwei沈诗伟 (@shen_shiwei) January 1, 2022
This national flag is very special since it once flew over Tiananmen Square in Beijing. pic.twitter.com/fBzN0I4mCi
ವಿಡಿಯೋದಲ್ಲಿ ಏನಿದೆ?
ಶೇನ್ ಶಿವಿಯ್ ಎಂಬ ಚೀನಾ ಮಾಧ್ಯಮದ ವರದಿಗಾರ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಚೀನಾದ ಅಧಿಕಾರಿಗಳು ಚೀನಾದ ಬಾವುಟವನ್ನು ಗಾಲ್ವಾನ್ನಲ್ಲಿ ಹಾರಿಸುವ ದೃಶ್ಯವು ಕಂಡು ಬಂದಿದೆ. "2022ರ ಈ ಹೊಸ ವರ್ಷದಲ್ಲಿ ಚೀನಾದ ಬಾವುಟವನ್ನು ಗಾಲ್ವಾರ್ ಕಣಿವೆಯಲ್ಲಿ ಹಾರಿಸಲಾಗಿದೆ. ಬೇಜಿಂಗ್ನಲ್ಲಿ ಹಾರುವ ಈ ಬಾವುಟ ನಮಗೆ ವಿಶೇಷವಾದುದ್ದು," ಎಂದು ಚೀನಾದ ವರದಿಗಾರ ಶೇನ್ ಶಿವಿಯ್ ಟ್ವೀಟ್ ಮಾಡಿದ್ದಾರೆ. ಈ ಬೆನ್ನಲ್ಲೇ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ಈ ವಿಚಾರದಲ್ಲೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಗಡಿ ಪ್ರದೇಶದಲ್ಲಿ ಚೀನಾವು ನಿರಂತರವಾಗಿ ಉದ್ಧಟತನವನ್ನು ತೋರುತ್ತಿದ್ದು, ಕೆಲ ದಿನಗಳ ಹಿಂದೆ ಗಡಿ ಪ್ರದೇಶದಲ್ಲಿನ ಗ್ರಾಮಗಳ ಹೆಸರುಗಳನ್ನು ಬದಲಾವಣೆ ಮಾಡಲು ಚೀನಾ ಮುಂದಾಗಿತ್ತು. ಗಡಿ ಪ್ರದೇಶ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಿ ತನ್ನ ದೇಶಕ್ಕೆ ಸೇರ್ಪಡೆ ಮಾಡುವ ಕುತಂತ್ರವನ್ನು ಚೀನಾ ಮಾಡಿತ್ತು. ಇದನ್ನು ಭಾರತ ಸರ್ಕಾರವು ತೀವ್ರವಾಗಿ ವಿರೋಧ ಮಾಡಿತ್ತು. ಇನ್ನು ಚೀನಾವು ಅರುಣಾಚಲ ಪ್ರದೇಶವು ತನ್ನ ನಿಯಂತ್ರಣದಲ್ಲಿರುವ ದಕ್ಷಿಣ ಟಿಬೆಟ್ ಎಂದು ಕೂಡಾ ಹೇಳಿಕೊಂಡಿದೆ. ಹಾಗೆಯೇ ಅಲ್ಲಿನ 15 ಸ್ಥಳಗಳ ಹೆಸರನ್ನು ಚೀನಾ ಬದಲಾವಣೆ ಮಾಡಿದೆ. ಅರುಣಾಚಲ ಪ್ರದೇಶವನ್ನು ಚೀನಾ ಭೂಪಟ 'ಝಂಗ್ನಾನ್' (ದಕ್ಷಿಣ ಟಿಬೆಟ್) ಎಂದೇ ತೋರಿಸುತ್ತದೆ. ಝಂಗ್ನಾನ್ನ 15 ಪ್ರದೇಶಗಳ ಹೆಸರನ್ನು ಚೀನೀ ಭಾಷೆಯಲ್ಲಿ, ಟಿಬೆಟಿಯನ್ ಮತ್ತು ರೋಮನ್ ಅಕ್ಷರಗಳಲ್ಲಿ ಉನ್ನತೀಕರಿಸಿದ್ದೇವೆ ಎಂದು ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಹೇಳಿಕೊಂಡಿದೆ.
ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣಕ್ಕೆ ಭಾರತದ ತಿರುಗೇಟು
2017ರಲ್ಲಿಯೂ ಚೀನಾ ಆರು ಸ್ಥಳಗಳಿಗೆ ತನ್ನದೇ ಹೆಸರು ಇರಿಸಿತ್ತು. ಬೌದ್ಧ ಧರ್ಮ ಗುರು ದಲೈಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಕೂಡಲೇ ಅದು ಪ್ರತೀಕಾರದ ಕ್ರಮವಾಗಿ ಹೆಸರು ಬದಲಾವಣೆ ಮಾಡಿತ್ತು. ಈ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡಿರುವ ದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, "ನಾವು ಈ ರೀತಿಯ ಚಟುವಟಿಕೆಗಳನ್ನು ಈ ಹಿಂದೆಯೂ ನೋಡಿದ್ದೇವೆ. ಅರುಣಾಚಲ ಪ್ರದೇಶ ರಾಜ್ಯದ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುತ್ತಿರುವುದು ಇದು ಮೊದಲ ಸಲವೇನಲ್ಲ. 2017ರ ಏಪ್ರಿಲ್ನಲ್ಲಿ ಕೂಡ ಚೀನಾ ಇದೇ ರೀತಿ ಹೆಸರುಗಳನ್ನು ಇರಿಸಿತ್ತು," ಎಂದು ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)