ಪ್ಯಾಂಗಾಂಗ್ ಸರೋವರದಿಂದ ಹಿಂದೆ ಸರಿಯಲ್ಲ ಎಂದ ಚೀನಾ!
ನವದೆಹಲಿ, ಸಪ್ಟೆಂಬರ್.22: ಭಾರತ-ಚೀನಾ ನಡುವಿನ ಸಂಘರ್ಷದ ಬೆನ್ನಲ್ಲೇ ಸೋಮವಾರ ಉಭಯ ರಾಷ್ಟ್ರಗಳ ಕಾರ್ಪ್ ಕಮಾಂಡರ್ ಹಂತದ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಚೀನಾದ ನಿಗದಿತ ಗಡಿ ರೇಖೆಗೆ ಹೊಂದಿಕೊಂಡಿರುವ ಮಾಲ್ಡೊ ಪ್ರದೇಶದಲ್ಲಿ 13 ಗಂಟೆಗಳ ಕಾಲ ಈ ಸಭೆ ನಡೆಯಿತು.
ಕಳೆದ ಜೂನ್ ತಿಂಗಳಿನಿಂದ ಕಾರ್ಪ್ ಕಮಾಂಡರ್ ಹಂತದ ಆರನೇ ಸಭೆ ಇದಾಗಿದ್ದು, ಮೊದಲ ಬಾರಿಗೆ ಉನ್ನತ ಮಟ್ಟದ ಕಾರ್ಪ್ ಕಮಾಂಡರ್ ಸಭೆಯಲ್ಲಿ ಭಾರತೀಯ ಕೇಂದ್ರ ಸರ್ಕಾರದ ಪ್ರತಿನಿಧಿಯೊಬ್ಬರು ಭಾಗಿಯಾಗಿದ್ದರು.
20 ದಿನದಲ್ಲೇ ಗಡಿ 6 ಎತ್ತರದ ಪ್ರದೇಶಗಳ ಮೇಲೆ ಭಾರತದ ಹಿಡಿತ!
ಭಾರತದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾದ ಪ್ರತಿನಿಧಿಯಾಗಿ ಪೀಪಲ್ಸ್ ಲಿಬರೇಷನ್ ಆರ್ಮಿಯ ಮೇಜರ್ ಜನರಲ್ ಲಿನ್ ಲಿಯು ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ನಡೆದಿದ್ದೇನು ಎನ್ನುವುದರ ಕುರಿತು ಡಿಎನ್ಎ ಪ್ರಮುಖ ಅಂಶಗಳನ್ನು ವಿಶ್ಲೇಷಿಸಿದೆ.
ಕಾರ್ಪ್ ಕಮಾಂಡರ್ ಸಭೆಯ 4 ಪ್ರಮುಖ ಅಂಶ
1. ಮಾಲ್ಡೋ ಪ್ರದೇಶದಲ್ಲಿ ನಡೆದ ಕಾರ್ಪ್ ಕಮಾಂಡರ್ ಸಭೆಯಲ್ಲಿ ಚೀನಾ ತನ್ನ ಹಠವನ್ನು ಮುಂದುವರಿಸಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಬಳಿಯಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳುವುದಕ್ಕೆ ನಿರಾಕರಿಸಿದೆ ಎನ್ನಲಾಗುತ್ತಿದೆ.
2. ಏಪ್ರಿಲ್-2020ಕ್ಕೂ ಮೊದಲು ಗಡಿಯಲ್ಲಿದ್ದ ಸ್ಥಿತಿಯನ್ನೇ ಯಥಾವತ್ತಾಗಿ ಕಾಯ್ದುಕೊಳ್ಳುವ ಬಗ್ಗೆ ಭಾರತವು ಪ್ರಸ್ತಾಪಿಸಿತು. ಅದರ ಪ್ರಕಾರ 2020ರ ಏಪ್ರಿಲ್ ಗೂ ಮೊದಲು ಚೀನಾದ ಸೈನಿಕರು ಗಡಿಯ ಯಾವ ಪ್ರದೇಶದಲ್ಲಿದ್ದರೋ ಅದೇ ಪ್ರದೇಶಕ್ಕೆ ವಾಪಸ್ ತೆರಳುವುದು ಭಾರತದ ವಾದವಾಗಿತ್ತು.
3. ಭಾರತದ ನಿಯೋಗದಲ್ಲಿ ಲೆಫ್ಟಿನೆಂಟ್ ಗವರ್ನರ್ ಪಿಜಿಕೆ ಮೆನನ್ ಕೂಡಾ ಭಾಗಿಯಾಗಿದ್ದರು. ಏಕೆಂದರೆ ಆಕ್ಟೋಬರ್ ತಿಂಗಳಿನಲ್ಲಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನಿವೃತ್ತರಾಗಲಿದ್ದು, ಅವರಿಂದ ಮೆನನ್ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ.
4. ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವಿನ್ ಶ್ರೀವಾಸ್ತವ್, ಮೇಜರ್ ಜನರಲ್ ಅಭಿಜಿತ್ ಬಾಪತ್ ಮತ್ತು ಮೇಜರ್ ಜನರಲ್ ಪದಮ್ ಶೆಖಾವತ್ ರನ್ನೊಳಗೊಂಡ ನಿಯೋಗವು ಕೂಡಾ ಸಭೆಯಲ್ಲಿ ಭಾಗಿಯಾಗಿತ್ತು.
ಸ.18ರಂದೇ ಕಾರ್ಪ್ ಕಮಾಂಡರ್ ಸಭೆ ಬಗ್ಗೆ ಚರ್ಚೆ
ಸೋಮವಾರ ನಡೆದ ಕಾರ್ಪ್ ಕಮಾಂಡರ್ ಹಂತದ ಸಭೆಯಲ್ಲಿ ಭಾರತದ ವಾದವೇನು ಎನ್ನುವುದು ಮೊದಲೇ ತೀರ್ಮಾನವಾಗಿತ್ತು. ಕಳೆದ ಸಪ್ಟೆಂಬರ್.18ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್, ಭದ್ರತಾ ಪಡೆ ಮುಖ್ಯಸ್ಥರಾದ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮೇಜರ್ ಮುಕುಂದ್ ನರವಾಣೆ ಅವರು ನಡೆಸಿದ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗಿತ್ತು.
ಚೀನಾ ಶಾಂತಿಮಂತ್ರ ಜಪಿಸುವುದರ ಹಿಂದೆ ಭಾರತೀಯ ಯೋಧರ ಶಕ್ತಿ
ಲಡಾಖ್ ಮತ್ತು ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಂತೆ ಭಾರತೀಯ ಯೋಧರು ಅಲರ್ಟ್ ಆದರು. ಕಳೆದ 20 ದಿನಗಳಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಇರುವ ಆರು ಪ್ರಮುಖ ಮತ್ತು ಆಯಗಟ್ಟಿನ ಎತ್ತರದ ಪ್ರದೇಶಗಳ ಮೇಲೆ ಭಾರತೀಯ ಯೋಧರು ಹಿಡಿತ ಸಾಧಿಸಿದರು. ಇದರಿಂದ ಆತಂಕಗೊಂಡ ಚೀನಾ ಇದೀಗ ಶಾಂತಿ ಮಾತುಕತೆಗೆ ಮುಂದಾಗಿತ್ತು.
ಉಭಯ ರಾಷ್ಟ್ರಗಳ ನಡುವಿನ ಚರ್ಚೆ ಕುರಿತು DNA ವಿಶ್ಲೇಷಣೆ
1. ಮೊದಲ ಬಾರಿಗೆ ಭಾರತ ಮತ್ತು ಚೀನಾದ ದ್ವಿಪಕ್ಷೀಯ ಸೇನಾ ಮಾತುಕತೆ ಸಂದರ್ಭದಲ್ಲಿ ರಾಜತಾಂತ್ರಿಕ ಅಧಿಕಾರಿಗಳು ಭಾಗಿಯಾಗುವುದಕ್ಕೆ ಅನುಮತಿ ನೀಡಲಾಗಿದೆ. ಇದನ್ನು ದೇಶದ ಹೊಸ ರಾಜತಾಂತ್ರಿತ ನೀತಿ ಎಂದು ಕರೆಯಬಹುದು.
2. ಸಪ್ಟೆಂಬರ್.10ರಂದು ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರು ಭಾಗವಹಿಸಿದ್ದರು. ಈ ವೇಳೆ ಉಭಯ ರಾಷ್ಟ್ರಗಳು ಐದು ಪ್ರಮುಖ ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿದೆ. ಇದೀಗ ಸೋಮವಾರ ನಡೆದ ಆರನೇ ಹಂತದ ಕಾರ್ಪ್ ಕಮಾಂಡರ್ ಸಭೆಯು ಅಂದು ನಡೆದ ಸಭೆಯ ಮುಂದುವರಿದ ಭಾಗ ಎಂದು ಕರೆಯಬಹುದು.
3. ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವಿನ್ ಶ್ರೀವಾಸ್ತವ್ ಅವರು ಪ್ರಸ್ತುತ ಚೀನಾ ಡೆಸ್ಕ್ ಉಸ್ತುವಾರಿಯಾಗಿದ್ದಾರೆ. ಇಂಡೋ-ಚೀನಾ ಗಡಿ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದಾರೆ. ಅವರು ಸಭೆಯಲ್ಲಿ ಹಾಜರಾಗಿದ್ದರಿಂದ ಮುಂದಿನ ದಿನಗಳಲ್ಲಿ ಒಂದು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿದೆ. ಅಗತ್ಯಬಿದ್ದಲ್ಲಿ ತತ್ ಕ್ಷಣ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಸಹಕಾರಿಯಾಗಲಿದೆ.
4. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳನ್ನು ಕಾರ್ಪ್ ಕಮಾಂಡರ್ ಸಭೆಗೆ ಕಳುಹಿಸಿ ಕೊಡುವುದರ ಹಿಂದಿನ ಉದ್ದೇಶ ಭಾರತವು ಶಾಂತಿಪ್ರಿಯ ರಾಷ್ಟ್ರವಾಗಿದೆ. ಗಡಿಯಲ್ಲಿ ಈ ಹಿಂದಿದ್ದ ಯಥಾಸ್ಥಿತಿ ಕಾಯ್ದುಕೊಂಡು ಸಮಸ್ಯೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಭಾರತವು ಆಲೋಚಿಸುತ್ತಿದೆ.
5. ಸೋಮವಾರ ನಡೆದ ಸಭೆಯು ಭಾರತದ ವಿದೇಶಾಂಗ ಸಚಿವಾಲಯ ಮತ್ತು ಸೇನೆಯ ಜಂಟಿ ಪರಿಶ್ರಮದ ಫಲವಾಗಿದೆ. ಮುಂದಿನ ದಿನಗಳಲ್ಲಿ ಸಾಧ್ಯವಾದರೆ ರಾಜತಾಂತ್ರಿಕ ಸಭೆಗಳಲ್ಲಿ ಭಾರತೀಯ ಸೇನೆ ಕೂಡಾ ಭಾಗವಹಿಸುವ ಸಾಧ್ಯತೆಗಳನ್ನು ಕೂಡಾ ತಳ್ಳಿ ಹಾಕುವಂತಿಲ್ಲ.