ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ಸೇತುವೆ ನಿರ್ಮಾಣ; ಸರ್ಕಾರದ ಉತ್ತರ!
ನವದೆಹಲಿ, ಫೆಬ್ರವರಿ 04: ಭಾರತ ಮತ್ತು ಚೀನಾ ಗಡಿ ವಿವಾದ ಮುಂದುವರಿದಿದೆ. ಪೂರ್ವ ಲಡಾಖ್ನ ಪ್ಯಾಂಗಾಂಗ್ ತ್ಸೋ ಸರೋವರದ ಅಡ್ಡ ಚೀನಾ ಅಕ್ರಮವಾಗಿ ಹಿಡಿದಿರುವ ಪ್ರದೇಶದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಭಾರತೀಯ ಸರ್ಕಾರ ತಿಳಿಸಿದೆ.
ಶುಕ್ರವಾರ ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಇತರ ದೇಶಗಳು ಗೌರವಿಸಬೇಕೆಂದು ನಿರೀಕ್ಷಿಸುತ್ತದೆ ಎಂದು ಹೇಳಿದೆ. ಪ್ಯಾಂಗಾಂಗ್ ಸರೋವರದ ಮೇಲೆ ಚೀನಾ ನಿರ್ಮಿಸುತ್ತಿರುವ ಸೇತುವೆಯನ್ನು ಸರ್ಕಾರ ಗಮನಿಸಿದೆ. 1962 ರಿಂದ ಚೀನಾದ ಅಕ್ರಮ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ, "ಎಂದು ಸರ್ಕಾರವು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಗಲ್ವಾನ್ ಘರ್ಷಣೆಯಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆ ಬರೋಬ್ಬರಿ 42
"ಭಾರತ ಸರ್ಕಾರವು ಈ ಅಕ್ರಮವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸರ್ಕಾರ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದೆ. ಇತರ ದೇಶಗಳು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ, ಎಂದು ಸಂಸತ್ತಿಗೆ ತಿಳಿಸಿದೆ.
ಚೀನಾದ ಅಕ್ರಮ ಸೇತುವೆ ನಿರ್ಮಾಣ ಎಲ್ಲಿ?
ನಾರ್ತ್ ಬ್ಯಾಂಕ್ ಆಫ್ ಪ್ಯಾಂಗೊಂಗ್ನಲ್ಲಿರುವ ಚೀನಾದ ಸೈನ್ಯದ ಫೀಲ್ಡ್ ಬೇಸ್ನ ದಕ್ಷಿಣಕ್ಕೆ 8 ಮೀಟರ್ ಅಗಲವಿರುವ ಈ ಸೇತುವೆಯು ಇದೆ. 2020ರಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಘರ್ಷಣೆಯ ಸಮಯದಲ್ಲಿ ಚೀನಾದ ಆಸ್ಪತ್ರೆಗಳು ಮತ್ತು ಸೇನಾ ವಸತಿಗಳು ಕಂಡು ಬಂದಿದ್ದವು. ಚೀನಾದ ಈ ಸೇತುವೆ ನಿರ್ಮಾಣವು ಅಂದಿನಿಂದ ಶಾಂತತೆಯನ್ನು ಕಾಪಾಡಿಕೊಂಡು ಬಂದಿರುವ ಪ್ರದೇಶದಲ್ಲಿ ಸೂಕ್ಷ್ಮತೆಯನ್ನು ಹಾಳುಮಾಡುವ ಬೆದರಿಕೆ ಹಾಕುತ್ತಿದೆ.
ಗಲ್ವಾನ್ ಕಣಿವೆಯಲ್ಲಿ ಸೇನಾ ಸಂಘರ್ಷ:
ಕಳೆದ 2020ರ ಜೂನ್ 15 ಮತ್ತು 16ರ ರಾತ್ರಿ ಲಡಾಖ್ ಪೂರ್ವ ಗಡಿ ಪ್ರದೇಶದ ಗಾಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ರೌಡಿಗಳಂತೆ ವರ್ತಿಸಿದ ಚೀನಾ ಯೋಧರು ಮಾರಕಾಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, 70 ಯೋಧರು ಗಾಯಗೊಂಡಿದ್ದರು. ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ವಿರುದ್ಧ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡರು. ಭಾರತ ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ ಎಂದು ಹೇಳಲಾಗಿತ್ತು.
ಗಾಲ್ವಾನ್ ಕಣಿವೆ ಸಂಘರ್ಷದ ನಂತರದಲ್ಲಿ ಉಭಯ ಸೇನಾ ಗಡಿಗಳಲ್ಲಿ ಸೇನಾ ನಿಯೋಜನೆ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಪೂರ್ವ ಲಡಾಖ್ನಲ್ಲಿ ಉತ್ತರಕ್ಕೆ ಡೆಪ್ಸಾಂಗ್ ಬಯಲು ಪ್ರದೇಶದಿಂದ ದಕ್ಷಿಣಕ್ಕೆ ಡೆಮ್ಚೋಕ್ ಪ್ರದೇಶದವರೆಗೆ ಎರಡೂ ಕಡೆಗಳಲ್ಲಿ 50,000ಕ್ಕೂ ಹೆಚ್ಚು ಯೋಧರನ್ನು ನಿಯೋಜನೆ ಮಾಡಲಾಗಿದೆ. ಇದರ ಮಧ್ಯೆ ಗಡಿಯಲ್ಲಿ ಸೇನೆ ನಿಷ್ಕ್ರೀಯತೆ ಬಗ್ಗೆ ಭಾರತ ಮತ್ತು ಚೀನಾ ನಡುವೆ ಶಾಂತಿ ಮಾತುಕತೆ ನಡೆಯುತ್ತಲೇ ಇದೆ.
ಭಾರತ ಮತ್ತು ಚೀನಾ ಶಾಂತಿ ಮಾತುಕತೆ ಅಂಶಗಳು:
"ಭಾರತ ಮತ್ತು ಚೀನಾ ಸೇನಾ ಮುಖ್ಯಸ್ಥರ ಶಾಂತಿ ಮಾತುಕತೆಗಳಲ್ಲಿ ಮೂರು ಪ್ರಮುಖ ತತ್ವಗಳನ್ನು ಉಲ್ಲೇಖಿಸಲಾಗಿದೆ ಎಂಬುದರ ಬಗ್ಗೆ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ. ಆ ಪ್ರಮುಖ ಮೂರು ಅಂಶಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.
1. ಎರಡೂ ಕಡೆಯವರು ಗಡಿ ನಿಯಂತ್ರಣ ರೇಖೆ (LAC) ಅನ್ನು ಕಟ್ಟುನಿಟ್ಟಾಗಿ ಗೌರವಿಸಬೇಕು ಮತ್ತು ಗಮನಿಸಬೇಕು
2. ಎರಡೂ ಕಡೆಯವರು ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಪ್ರಯತ್ನಿಸಬಾರದು
3. ಎರಡು ಕಡೆಯ ನಡುವಿನ ಎಲ್ಲಾ ಒಪ್ಪಂದಗಳಿಗೆ ಸಂಪೂರ್ಣವಾಗಿ ಬದ್ಧವಾಗಿರಬೇಕು
ಈಶಾನ್ಯ ರಾಜ್ಯದ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗ:
ಭಾರತ ಮತ್ತು ಚೀನಾದ ಹಿರಿಯ ಕಮಾಂಡರ್ಗಳ ನಡುವಿನ ಕೊನೆಯ ಸುತ್ತಿನ ಮಾತುಕತೆ ಜನವರಿ 12 ರಂದು ನಡೆಯಿತು. ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿಯನ್ನು ಮರುಸ್ಥಾಪಿಸಲು, ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಎರಡೂ ಕಡೆಯವರು ಕೆಲಸ ಮಾಡುತ್ತಾರೆ ಎಂದು ಅವರು ಒಪ್ಪಿಕೊಂಡರು. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವ ವರದಿಗಳ ಬಗ್ಗೆ ಈಶಾನ್ಯ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸರ್ಕಾರ ಪುನರುಚ್ಚರಿಸಿದೆ.
"ಭಾರತದ ಅರುಣಾಚಲ ಪ್ರದೇಶದಲ್ಲಿ ಚೀನಾ ಕೆಲವು ಸ್ಥಳಗಳ ಮರುನಾಮಕರಣದ ವರದಿಗಳನ್ನು ಸರ್ಕಾರ ಗಮನಿಸಿದೆ. ಇದು ನಿರರ್ಥಕ ಕಸರತ್ತು, ಇದು ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬ ಅಂಶವನ್ನು ಬದಲಾಯಿಸುವುದಿಲ್ಲ," ಎಂದು ಸರ್ಕಾರ ಹೇಳಿದೆ.