ಕೋವಿಡ್ನಿಂದ ಅನಾಥರಾದ ಮಕ್ಕಳಿಗೆ ಆಸರೆ ಆಗ್ತೀವಿ ಅಂದ್ರೆ ನಂಬಬೇಡಿ
ಬೆಂಗಳೂರು, ಮೇ 15: ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ನಾವು ಆಸರೆಯಾಗುತ್ತೀವಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಪೋಸ್ಟ್ಗಳ ಬಗ್ಗೆ ಎಚ್ಚರದಿಂದಿರಿ.
ಹೌದು ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಕಡಿಮೆ ವಯಸ್ಸಿನವರೂ ಕೂಡ ಮೃತಪಡುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ತಂದೆ ತಾಯಿ ಇಬ್ಬರೂ ಮೃತಪಟ್ಟು ಮಕ್ಕಳು ಅನಾಥರಾಗುತ್ತಿದ್ದಾರೆ.
ಆಗ ಆ ಮಗುವನ್ನು ನೋಡಿಕೊಳ್ಳುತ್ತಿರುವವರು ಅನಾಥಾಶ್ರಮ ಸೇರಿ ಇನ್ನಿತರೆ ಆರೈಕೆ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ ಕೆಲವು ಆರೈಕೆ ಕೇಂದ್ರಗಳ ಹೆಸರು ಹೇಳಿಕೊಂಡು ದಂಧೆಗೆ ಇಳಿದಿದ್ದಾರೆ. ಮಕ್ಕಳನ್ನು ಭಿಕ್ಷಾಟನೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೋವಿಡ್ನಿಂದ ಪೋಷಕರು ಆಸ್ಪತ್ರೆ ಸೇರುವುದರಿಂದ ಮತ್ತು ಜೀವ ಕಳೆದುಕೊಳ್ಳುವುದರಿಂದ ಮಕ್ಕಳು ಅನಾಥರಾಗುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರುತ್ತಿರುವುದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಆದರೆ ಈ ಪರಿಸ್ಥಿತಿ ಅಕ್ರಮ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ ಎನ್ನುವುದು ಬಹಿರಂಗವಾಗಿದೆ.
ಕೋವಿಡ್ ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ದತ್ತು ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಅಂತಹ ಮಕ್ಕಳ ಆರೈಕೆಗಾಗಿ ದೇಣಿಗೆ ಸಂಗ್ರಹಣೆ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಅಂತಹ ಯಾವುದೇ ಪ್ರಕರಣ ಕಂಡುಬಂದರೂ ಸಾರ್ವಜನಿಕರು 1908 ಮಕ್ಕಳ ಸಹಾಯವಾಣಿ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಬೇಕು ಎಂದು ಐಸಿಪಿಎಸ್ ಹೇಳಿಕೆ ತಿಳಿಸಿದೆ.
ಮಗುವೊಂದನ್ನು ನೇರವಾಗಿ ದತ್ತು ತೆಗೆದುಕೊಳ್ಳುವುದು ಅಕ್ರಮ ಹಾಗೂ ಶಿಕ್ಷಾರ್ಹ ಅಪರಾಧ. ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆಯ ಮೂಲಕ ಮಾತ್ರವೇ ದತ್ತು ತೆಗೆದುಕೊಳ್ಳಲು ಅವಕಾಶವಿದೆ.
ಈಗ ಅಕ್ರಮ ದತ್ತು ಚಟುವಟಿಕೆಯ ಭೀತಿ ಉಂಟಾಗಿದೆ. ಈ ಮಕ್ಕಳಿಗೆ ಆರೈಕೆ ಹಾಗೂ ರಕ್ಷಣೆಯ ಅಗತ್ಯವಿದೆ. ಅವರ ಕುಟುಂಬದೊಂದಿಗಿನ ಯಾವುದೇ ಸಂಬಂಧವನ್ನು ನಾವು ತುಂಡರಿಸಬಾರದು. ಇದು ಬಿಕ್ಕಟ್ಟಿನ ಸನ್ನಿವೇಶ. ಇಲ್ಲಿ ನಾವು ಎರಡು ಗುಂಪುಗಳ ಮಕ್ಕಳನ್ನು ನೋಡುತ್ತೇವೆ.
ಕೋವಿಡ್ನಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ, ಅವರ ಆರೈಕೆ ಮಾಡಲು ಜನರು ಬಯಕೆ ಹೊಂದಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ. ಆದರೆ ಅಂತಹ ಪೋಸ್ಟ್ಗಳ ಜಾಲಕ್ಕೆ ಬೀಳದಂತೆ ಜನರಿಗೆ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.