ಭಾರತೀಯ ವಾಯು ಸೇನೆ, ನೌಕಾ ಸೇನೆ ಮುಖ್ಯಸ್ಥರಿಗೆ ಝೆಡ್-ಪ್ಲಸ್ ಭದ್ರತೆ
ಭಾರತೀಯ ವಾಯು ಸೇನೆ ಹಾಗೂ ನೌಕಾ ಸೇನೆ ಮುಖ್ಯಸ್ಥರಿಗೆ ಝೆಡ್-ಪ್ಲಸ್ ಭದ್ರತೆ ಒದಗಿಸಲಾಗಿದೆ. ಅವರಿಗೆ ಬೆದರಿಕೆ ಇರುವುದಾಗಿ ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಜತೆಗೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟ ನಂತರ, ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ನಂತರ ಭಾರತೀಯ ವಾಯು ಸೇನೆ ಮುಖ್ಯಸ್ಥ ಏರ್ ಮಾರ್ಷಲ್ ಬಿ.ಎಸ್.ಧನೋವಾ, ನೌಕಾ ಸೇನೆ ಮುಖ್ಯಸ್ಥ ಸುನೀಲ್ ಲನ್ಬ ಅವರಿಗೆ ಝೆಡ್-ಪ್ಲಸ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.
ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?
ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಈಗಾಗಲೇ ಝೆಡ್-ಪ್ಲಸ್ ಭದ್ರತೆ ಒದಗಿಸಲಾಗಿದೆ. ಸದ್ಯಕ್ಕಂತೂ ವಾಯು ಸೇನೆ ಹಾಗೂ ನೌಕಾ ಸೇನೆ ಮುಖ್ಯಸ್ಥರಿಗೆ ನೀಡಿದ ಭದ್ರತೆ ಮುಂದುವರಿಯಲಿದೆ.
ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದು, ಸಿಆರ್ ಪಿಎಫ್ ನ ನಲವತ್ತು ಸಿಬ್ಬಂದಿ ಸಾವನ್ನಪ್ಪಿದ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯದ ಸಂಬಂಧ ಹದಗೆಟ್ಟಿದೆ. ಆ ನಂತರ ಭಾರತೀಯ ವಾಯು ಸೇನೆಯಿಂದ ಪಾಕಿಸ್ತಾನದಲ್ಲಿ ಇರುವ ಬಾಲಕೋಟ್ ನ ಜೈಶ್-ಇ-ಮೊಹ್ಮದ್ ಉಗ್ರ ನೆಲೆ ಮೇಲೆ ಫೆಬ್ರವರಿ ಇಪತ್ತಾರರಂದು ದಾಳಿ ನಡೆದಿತ್ತು. ಅದರ ಮರುದಿನ ಪಾಕಿಸ್ತಾನ ಕೂಡ ತನ್ನ ಯುದ್ಧ ವಿಮಾನಗಳ ಮೂಲಕ ಭಾರತದ ದಾಳಿ ನಡೆಸಿತ್ತು.