ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಹಿಂದೆ ಬಿಪಿನ್ ರಾವತ್ ಚಾಣಾಕ್ಷತನ
ನವದೆಹಲಿ, ಡಿಸೆಂಬರ್ 8: ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿ ಒಟ್ಟು 13 ಜನರು ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ ಪತನಗೊಂಡ ಸ್ಥಳದಿಂದ ರಕ್ಷಿಸಲ್ಪಟ್ಟಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೇ.80 ಸುಟ್ಟ ಗಾಯಗಳಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
Recommended Video
ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ 63 ವರ್ಷದ ಬಿಪಿನ್ ರಾವತ್ ಹಲವು ಸೇನಾ ಕಾರ್ಯಾಚರಣೆ ನೇತೃತ್ವ ವಹಿಸಿಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ ದಿನಗಳ ನಂತರ, ಫೆಬ್ರವರಿ 2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಭಾರತವು ವೈಮಾನಿಕ ದಾಳಿ ನಡೆಸಿದಾಗ ಸೇನಾ ಮುಖ್ಯಸ್ಥರಾಗಿದ್ದು ಇದೇ ಬಿಪಿನ್ ರಾವತ್.
Bipin Rawat: ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ವ್ಯಕ್ತಿಚಿತ್ರ
2015ರಲ್ಲಿ ನೆರೆಯ ಮ್ಯಾನ್ಮಾರ್ನಲ್ಲಿ ಗಡಿಯಾಚೆಗಿನ ಪ್ರತಿ-ಬಂಡಾಯ ಕಾರ್ಯಾಚರಣೆಯನ್ನು ಮೇಲ್ವಿಚಾರಣೆಯನ್ನು ಬಿಪಿನ್ ರಾವತ್ ಮಾಡಿದ್ದರು. ಅದೇ ರೀತಿ ಹಲವು ಸೇನಾ ಕಾರ್ಯಾಚರಣೆ ಮತ್ತು ಕಾರ್ಯತಂತ್ರಗಳ ಹಿಂದಿದ್ದ ಒಂದೇ ಒಂದು ಹೆಸರು ಎಂದರೆ ಅದು ಬಿಪಿನ್ ರಾವತ್. ಅಂಥ ಸೇನಾ ಮುಖ್ಯಸ್ಥರನ್ನು ಇಂದು ಹೆಲಿಕಾಪ್ಟರ್ ದುರಂತದಲ್ಲಿ ಕಳೆದುಕೊಳ್ಳಲಾಗಿದೆ.
2016ರಲ್ಲಿ ಸರ್ಜಿಕಲ್ ಸ್ಟ್ರೈಕ್:
ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಈ ವೇಳೆ 19 ಯೋಧರು ಹುತಾತ್ಮರಾಗಿದ್ದರು. ಉಗ್ರರ ದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ನಲ್ಲಿ ಭಾರತವು ನಿಯಂತ್ರಣ ರೇಖೆ ಬಳಿಯುದ್ಧಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಅಂದು ಬಿಪಿನ್ ರಾವತ್ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದರು. ಸರ್ಜಿಕಲ್ ಸ್ಟ್ರೈಕ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದ್ದು, ದೆಹಲಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಕುರಿತು ಮೇಲ್ವಿಚಾರಣೆ ನಡೆಸಿದ್ದರು. ಇದಾಗಿ ಮೂರು ತಿಂಗಳ ನಂತರ, ಅವರು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.
ಪಾಕಿಸ್ತಾನಕ್ಕೆ ಕಠಿಣ ಸಂದೇಶ:
ಕಳೆದ ವರ್ಷ ದಾಳಿಗಳ ಕುರಿತು ಬಿಪಿನ್ ರಾವತ್ ಹೀಗೆ ಹೇಳಿದ್ದರು: "ಉರಿ ಭಯೋತ್ಪಾದನಾ ದಾಳಿಯ ನಂತರದ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ವೈಮಾನಿಕ ದಾಳಿಗಳು ಪಾಕಿಸ್ತಾನಕ್ಕೆ ಬಲವಾದ ಎಚ್ಚರಿಕೆಯನ್ನು ನೀಡಿವೆ. ಅದು ಇನ್ನು ಮುಂದೆ ಭಯೋತ್ಪಾದಕರನ್ನು ನಿಯಂತ್ರಣ ರೇಖೆಯ ಮೂಲಕ ಕಳುಹಿಸುವ ಆಟಗಳು ದೀರ್ಘಾವಧಿವರೆಗೂ ನಡೆಯುವುದಿಲ್ಲ ಎಂದು ಎಚ್ಚರಿಸಿದ್ದರು.
2015ರ ಅಪಘಾತದಲ್ಲಿ ಬದುಕುಳಿದಿದ್ದ ರಾವತ್:
ನಾಲ್ಕು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ಜನರಲ್ ರಾವತ್ ಯುದ್ಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಮಾಜಿ ಮುಖ್ಯಸ್ಥರ ಪ್ರಕಾರ ಸೇನೆಯಲ್ಲಿ ವಿವಿಧ ಕಾರ್ಯಕಾರಿ ಹಂತಗಳಲ್ಲಿ ಸೇವೆ ಸಲ್ಲಿಸಿದರು. ಅವರು ಆರು ವರ್ಷಗಳ ಹಿಂದೆ 2015 ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದಾಗ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದಿದ್ದರು. ಫೆಬ್ರವರಿ 3, 2015ರಂದು, ಅವರು ಪ್ರಯಾಣಿಸುತ್ತಿದ್ದ ಚೀತಾ ಹೆಲಿಕಾಪ್ಟರ್ ನಾಗಾಲ್ಯಾಂಡ್ನಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ಈ ವೇಳೆ ವಿಮಾನದಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು.
ಸೇನಾ ಹಿನ್ನೆಲೆ ಹೊಂದಿರುವ ಬಿಪಿನ್ ರಾವತ್:
ಜನರಲ್ ಬಿಪಿನ್ ರಾವತ್ ಹಲವಾರು ತಲೆಮಾರುಗಳಿಂದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಮಿಲಿಟರಿ ಕುಟುಂಬದಿಂದ ಬಂದವರು. ಅವರು 1978ರಲ್ಲಿ ಎರಡನೇ ಲೆಫ್ಟಿನೆಂಟ್ ಆಗಿ ಸೈನ್ಯಕ್ಕೆ ಸೇರಿದರು, ಮತ್ತು ಈ ಹಿಂದೆ ನಾಲ್ಕು ದಶಕಗಳ ಸೇವಾ ಅನುಭವವನ್ನು ಹೊಂದಿದ್ದರು. ಕಾಶ್ಮೀರ ಮತ್ತು ಚೀನಾದ ಗಡಿಯಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಪಡೆಗಳಿಗೆ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದರು.
ದೇಶದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ಜನರಲ್ ಬಿಪಿನ್ ರಾವತ್ 2017 ರಿಂದ 2019 ವರೆಗೆ ಸೇನಾ ಮುಖ್ಯಸ್ಥರಾಗಿದ್ದರು. ಭೂಸೇನೆ, ನೌಕಾ ಸೇನೆ ಮತ್ತು ವಾಯುಪಡೆಗಳ ನಡುವಿನ ಏಕೀಕರಣವನ್ನು ಸುಧಾರಿಸಲು ಮತ್ತು ಆಧುನೀಕರಣದಂತಹ ಸವಾಲುಗಳನ್ನು ಎದುರಿಸಲು ಮತ್ತು ಮಿಲಿಟರಿಯನ್ನು ಸಕ್ರಿಯಗೊಳಿಸಲು 2019ರಲ್ಲಿ ಈ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಸ್ಥಾನವನ್ನು ರಚಿಸಲಾಯಿತು. ಮೂರು ವರ್ಷಗಳ ಅವಧಿಯ ನಂತರ ಸೇನಾ ಮುಖ್ಯಸ್ಥರಾಗಿ ನಿವೃತ್ತರಾಗುವ ಒಂದು ದಿನದ ಮೊದಲು ಬಿಪಿನ್ ರಾವತ್ ಅವರನ್ನು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರ ಸ್ಥಾನಕ್ಕೆ ನೇಮಿಸಲಾಯಿತು.