ಮೋದಿ ಸರ್ಕಾರಕ್ಕೆ ಟ್ರಂಪ್ ಸ್ಫೂರ್ತಿ: ಚಿದಂಬರಂ ಟೀಕೆ
ನವದೆಹಲಿ, ಡಿಸೆಂಬರ್ 8: ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಕುರಿತಂತೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ಈ ಸರ್ಕಾರವು 'ಟ್ರಂಪಿಸಂ'ನಿಂದ ಸ್ಫೂರ್ತಿಗೊಂಡಿದೆ ಮತ್ತು ತಾನು ನಡೆದಿದ್ದೇ ದಾರಿ ಎನ್ನುವಂತಿದೆ ಎಂದು ಟೀಕಿಸಿದ್ದಾರೆ.
'ನಾನು ಕಾಣುವ ಒಂದೇ ಒಂದು ಅಹಂಕಾರವೆಂದರೆ ಅದು ನರೇಂದ್ರ ಮೋದಿ ಸರ್ಕಾರದ ಅಹಂಕಾರ. ನನ್ನ ದಾರಿ ಅಥವಾ ಹೆದ್ದಾರಿ. ನಾನು ಈ ಕಾಯ್ದೆ ಮಾಡಿದ್ದೇನೆ. ನನಗೆ ಬಹುಮತ ಇದೆ. ಅಷ್ಟೇ. ಅವರಿಗೆ ಡೊನಾಲ್ಡ್ ಟ್ರಂಪ್ ಸ್ಫೂರ್ತಿ' ಎಂದು ಕಿಡಿಕಾರಿದ್ದಾರೆ.
ಕೃಷಿ ವಲಯದ ಸುಧಾರಣೆ: ವೈರಲ್ ಆದ ಹಳೆಯ ಪತ್ರಕ್ಕೆ ಪವಾರ್ ಸ್ಪಷ್ಟನೆ
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, ಕೃಷಿ ಸುಧಾರಣೆಗಳ ಕುರಿತಂತೆ ಕಾಂಗ್ರೆಸ್ ಬೂಟಾಟಿಕೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದರು.
'ಈ ಸರ್ಕಾರದ ವರ್ತನೆ ಹೇಗೆಂದರೆ, ನಾನು ಯಾರನ್ನೂ ಕೇಳುವುದಿಲ್ಲ. ನಾನು ವಿರೋಧಪಕ್ಷದವರನ್ನು ಕೇಳುವುದಿಲ್ಲ. ನಾನು ಕಾನೂನು ಅಂಗೀಕರಿಸುತ್ತೇನೆ. ನೀವು ಮತ ಹಾಕುವಂತೆ ಒತ್ತಾಯಿಸಿದರೆ ನಾನು ಸದನದಲ್ಲಿ ಮತ ಚಲಾವಣೆಯಾಗದಂತೆ ನೋಡಿಕೊಳ್ಳುತ್ತೇನೆ. ರಾಜ್ಯಸಭೆಯಲ್ಲಿ ಮತದಾನ ನಡೆಯುವುದಿಲ್ಲ. ಇದು ಟ್ರಂಪಿಸಂ ಎಂದೇ ಗುರುತಿಸಿಕೊಂಡಿದೆ. ಮೋದಿ ಸರ್ಕಾರ ಮಾಡುತ್ತಿರುವುದನ್ನು ಟ್ರಂಪಿಸಂ ಪದ ವರ್ಣಿಸುತ್ತದೆ' ಎಂದು ಟೀಕಿಸಿದರು.
'ಇದು ರೈತ ವಿರೋಧಿ ಮಸೂದೆ. ಇದರಲ್ಲಿ ಬಿಂಬಿಸುತ್ತಿರುವಂತೆ ಮಾರುಕಟ್ಟೆ ಪರ ಮಸೂದೆ ಇಲ್ಲ. ಈ ಮಸೂದೆಯು ಕಾರ್ಪೊರೇಟ್ಗಳಿಗೆ ದಾರಿ ಮಾಡಿಕೊಡುತ್ತದೆ. ಎಪಿಎಂಸಿಯನ್ನು ದುರ್ಬಲಗೊಳಿಸುತ್ತದೆ. ಇದು ರೈತರ ಏಕೈಕ ಭದ್ರತೆಯನ್ನು ಕೂಡ ಕಸಿದುಕೊಳ್ಳುತ್ತದೆ. ಇದು ರೈತರಲ್ಲಿ ಭಯ ಮೂಡಿಸಿದೆ' ಎಂದು ಆರೋಪಿಸಿದರು.