ಛತ್ತೀಸ್ ಗಢ ಪ್ರವೇಶಿಸಲು ಕೊರೊನಾವೈರಸ್ ಪರೀಕ್ಷೆ ಕಡ್ಡಾಯ
ರಾಯಪುರ್, ಏಪ್ರಿಲ್ 19: ಛತ್ತೀಸ್ ಗಢದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಬೇರೆ ರಾಜ್ಯಗಳಿಂದ ಬರುವ ಪ್ರತಿಯೊಬ್ಬರ ಪ್ರಯಾಣಿಕರಿಗೆ ಕೊವಿಡ್-19 ಸೋಂಕು ತಪಾಸಣೆ ಮಾಡುವುದು ಕಡ್ಡಾಯ ಎಂದು ಸರ್ಕಾರ ಆದೇಶಿಸಿದೆ.
ರಾಜ್ಯದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರಾಜ್ಯದ ಗಡಿ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಕೊರೊನಾವೈರಸ್ ಸೋಂಕಿತ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು ಗೃಹ ಕಚೇರಿಯಲ್ಲಿ ಸಭೆ ನಡೆಸಿ 10 ಜಿಲ್ಲೆಗಳಲ್ಲಿನ ಕೊವಿಡ್-19 ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?
ಬೇರೆ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರಯಾಣಿಕರಿಂದ ಛತ್ತೀಸ್ ಗಢದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರಿಗೂ ಕೊವಿಡ್-19 ಸೋಂಕಿತ ತಪಾಸಣೆ ನಡೆಸಬೇಕು. ಇದರ ಜೊತಗೆ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾವೈರಸ್ ಸೋಂಕಿತ ತಪಾಸಣೆ ವೇಗ ಹೆಚ್ಚಿಸಬೇಕಿದೆ ಎಂದು ಸೂಚನೆ ನೀಡಲಾಗಿದೆ.
ವೈದ್ಯಕೀಯ ಸೌಲಭ್ಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ:
ರಾಜ್ಯದಲ್ಲಿ ಪ್ರತಿಯೊಬ್ಬ ವಲಸೆ ಕಾರ್ಮಿಕರನ್ನು ಅಗತ್ಯವಾಗಿ ಐಸೋಲೇಟ್ ಮಾಡುವುದು ಕಡ್ಡಾಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಕೊವಿಡ್-19 ಕೇಸ್ ಪತ್ತೆಯಾಗುತ್ತಿದ್ದು, ಪ್ರತಿಯೊಬ್ಬರಿಗೂ ಸೋಂಕಿನ ತಪಾಸಣೆ ನಡೆಸಬೇಕು. ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳು ಪಿಪಿಇ ಕಿಟ್, ತಪಾಸಣೆ ಕಿಟ್, ಆಕ್ಸಿಜನ್ ಸಿಲಿಂಡರ್, ರೆಮ್ಡಿಸಿವಿರ್ ಔಷಧಿಗಳ ಲಭ್ಯತೆ ಮೇಲೆ ನಿಗಾ ವಹಿಸಬೇಕು ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಛತ್ತೀಸ್ ಗಢದಲ್ಲಿ ಕೊರೊನಾವೈರಸ್:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 12345 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 170 ಜನರು ಪ್ರಾಣ ಬಿಟ್ಟಿದ್ದು, 128019 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.