ಕಾಂಗ್ರೆಸ್ ಅಧ್ಯಕ್ಷರದ್ದೇ ಒಂದು ದಾರಿ, ಉಳಿದವರದ್ದು ಇನ್ನೊಂದು ದಾರಿ!
ನಾಗಪುರ, ನವೆಂಬರ್ 22: ಛತ್ತೀಸ್ ಗಢ ಕಾಂಗ್ರೆಸ್ನಲ್ಲಿ ಸೀಟು ಹಂಚಿಕೆ ಸಂದರ್ಭದಲ್ಲಿ ಉಂಟಾದ ಗೊಂದಲವು ಪಕ್ಷ ಮೊದಲ ಬಾರಿಗೆ ಅಧಿಕಾರಕ್ಕೆ ಬರುವ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಈ ತಿಂಗಳ ಆರಂಭದಲ್ಲಿಯೇ ಕಾಂಗ್ರೆಸ್ ಪ್ರಕಟಿಸಿತ್ತು. ಆದರೆ, ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಕ್ಷೇತ್ರವನ್ನು ಬದಲಿಸುವಂತೆ ದುಂಬಾಲು ಬಿದ್ದಿದ್ದರು.
ರಫೇಲ್ ಜಪ ಮಾಡುತ್ತಿರುವ ರಾಹುಲ್ ಬಗ್ಗೆ ಕಾಂಗ್ರೆಸ್ ನಲ್ಲೇ ಬೇಸರ!
ತಮಗೆ ಕೊಟ್ಟಿರುವುದು ಸುಲಭವಾಗಿ ಗೆಲ್ಲುವಂತಹ ಕ್ಷೇತ್ರ. ಅದರ ಬದಲು ಹೆಚ್ಚು ಪ್ರತಿಷ್ಠೆಯ ಮತ್ತು ಸ್ಪರ್ಧಾತ್ಮಕ ಕ್ಷೇತ್ರವನ್ನು ನೀಡುವಂತೆ ಅವರು ಕೋರಿದ್ದರು. ಆದರೆ, ಕಾಂಗ್ರೆಸ್ ನಾಯಕತ್ವ ಅವರ ಬೇಡಿಕೆಯನ್ನು ತಿರಸ್ಕರಿಸಿತ್ತು.
ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ಕೆಲ ಸಮಯಕ್ಕೂ ಮುನ್ನ, ಛತ್ತೀಸ್ ಗಢ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಘೆಲ್ ಕರೆ ಮಾಡಿ, ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಸೂಚಿಸಿದ್ದರು.
ಇದರಿಂದ ಹತಾಶರಾದರೂ, ಪಕ್ಷ ಹೇಳಿದಂತೆ ಕೇಳುವುದಾಗಿ ಅಭ್ಯರ್ಥಿ ಪ್ರತಿಕ್ರಿಯೆ ನೀಡಿದ್ದರು.
ಛತ್ತೀಸ್ ಗಢ: ಎರಡನೆಯ ಹಂತದಲ್ಲಿ ಸುಮಾರು ಶೇ 72ರಷ್ಟು ಮತದಾನ
ಆದರೆ, ಬಳಿಕ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವುದು ಪಕ್ಷದ ಮೇಲೆ ಒತ್ತಡ ಹೆಚ್ಚಿಸಿತ್ತು. ಎರಡು ದಿನ ಯಾರ ಕೈಗೂ ಅವರು ಸಿಕ್ಕಿರಲಿಲ್ಲ. ಅವರ ಸಂಪರ್ಕದಲ್ಲಿ ಇರಲು ಬಯಸಿದ್ದವರು ಕಾರ್ನಲ್ಲಿ ಚಾಲಕನ ಮೂಲಕ ಸಂದೇಶ ರವಾನಿಸಬೇಕಾಗಿತ್ತು.
ಕೊನೆಗೂ ಆ ಅಭ್ಯರ್ಥಿಯ ಹಠವೇ ಗೆದ್ದಿತು. ಮುಖ್ಯಮಂತ್ರಿ ರಮಣ್ ಸಿಂಗ್ ಸಂಪುಟದ ಸಚಿವರೊಬ್ಬರು ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಅವರ ವಿರುದ್ಧ ಸ್ಪರ್ಧಿಸುವ ತಮ್ಮ ಆಸೆಯಂತೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.
ಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥ
ಆದರೆ, ಬಾಘೆಲ್ ಮತ್ತು ಅಭ್ಯರ್ಥಿಗಳ ನಡುವೆ ಸೀಟು ಹಂಚಿಕೆಯ ವಿವಾದಗಳು ಮುಂದುವರಿದಿವೆ. ಇದು ಮೂರು ಬಾರಿ ಸತತವಾಗಿ ಅಧಿಕಾರ ಗಿಟ್ಟಿಸಿಕೊಂಡಿದ್ದ ಬಿಜೆಪಿಯನ್ನು ಮಣಿಸಲು ಇದ್ದ ಅವಕಾಶಕ್ಕೆ ಹಿನ್ನಡೆ ಉಂಟುಮಾಡಿದೆ ಎನ್ನಲಾಗಿದೆ.
ಈಗ ಅಭ್ಯರ್ಥಿಯ ಆಯ್ಕೆ, ಪ್ರಚಾರ, ಮತದಾನ ಎಲ್ಲವೂ ಮುಗಿದಿದೆ. ಡಿ.11ರಂದು ಪ್ರಕಟವಾಗಲಿರುವ ಫಲಿತಾಂಶಕ್ಕಾಗಿ ಎಲ್ಲರೂ ಕಾಯ್ದಿದ್ದಾರೆ. ಈ ಬಾರಿ ಅಧಿಕಾರಕ್ಕೇರುವ ಆಸೆ ಹೊಂದಿದ್ದ ಕಾಂಗ್ರೆಸ್ನ ಒಳಜಗಳಗಳು ಪಕ್ಷಕ್ಕೆ ಮಾರಕವಾಗುವುದು ಖಚಿತ ಎನ್ನಲಾಗಿದೆ.
ಬಾಘೆಲ್ ಅವರೇ ತಮ್ಮ ಪಕ್ಷದ ಸಾಧ್ಯತೆಗಳನ್ನು ಸಾಯಿಸಿದ್ದಾರೆ ಎಂದು ಕಾಂಗ್ರೆಸ್ಸಿಗರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಘೆಲ್ ಮತ್ತು ಪಕ್ಷದ ಇತರೆ ನಾಯಕರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಬಾಘೆಲ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬೆಂಬಲ ದೊರೆತಿಲ್ಲ.
ಬಾಘೆಲ್ ಅವರನ್ನು ಮೂಲೆಗುಂಪು ಮಾಡುವ ಸಲುವಾಗಿಯೇ ಅವರು ಸೂಚಿಸಿದ್ದ ಅನೇಕ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸಲಾಗಿತ್ತು. ತಮ್ಮ ಶಿಫಾರಸಿನ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವುದು ಅನುಮಾನ ಎಂಬುದು ತಿಳಿದಾಗ ಅವರು ದೆಹಲಿಗೆ ತೆರಳಿದ್ದರು.
ಧಮತರಿ ಕ್ಷೇತ್ರದಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಗೆ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಬಾಘೆಲ್ ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದ್ದರು. ಇದರಿಂದ ಎಲ್ಲವೂ ಯಡವಟ್ಟಾಯಿತು. ಅಭ್ಯರ್ಥಿಗಳ ಆಯ್ಕೆಗೆ ಅವರ ಗೆಲ್ಲುವ ಸಾಮರ್ಥ್ಯವೇ ಮುಖ್ಯ ಮಾನದಂಡ. ಆದರೆ, ಅವರು ಶಿಫಾರಸು ಮಾಡಿದವರು ಅಷ್ಟೊಂದು ಸಮರ್ಥರಾಗಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.