ರಾಹುಲ್ ಗಾಂಧಿ ವಿರುದ್ಧದ ಸ್ಪರ್ಧಿ ತುಷಾರ್ ಯುಎಇಯಲ್ಲಿ ಬಂಧನ
ದುಬೈ, ಆಗಸ್ಟ್ 22: ಲೋಕಸಭೆ ಚುನಾವಣೆ 2019ರಲ್ಲಿ ಕೇರಳದ ವಯನಾಡ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತುಷಾರ್ ವೆಲ್ಲಪಳ್ಳಿ ಅವರನ್ನು ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧಿಸಲಾಗಿದೆ.
ಭಾರತ ಧರ್ಮ ಸೇನಾ (ಬಿಡಿಜೆಎಸ್) ಅಧ್ಯಕ್ಷ ತುಷಾರ್ ವಲ್ಲಪಳ್ಳಿ ಚೆಕ್ ಬೌನ್ಸ್ ಪ್ರಕರಣದಲ್ಲಿ 19 ಕೋಟಿ ರು ವಂಚನೆಯಾಗಿದೆ ಎಂಬ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೆಟ್ಸ್ ನ ಅಜ್ಮಾನ್ ನಲ್ಲಿ ಬಂಧಿಸಲಾಗಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.
ವಯನಾಡಿನಲ್ಲಿ ಮರು ಮತದಾನಕ್ಕೆ ಆಗ್ರಹಿಸಿದ ಎನ್ಡಿಎ ಅಭ್ಯರ್ಥಿ
ತುಷಾರ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ತನ್ನ ಜೊತೆ ಪಾಲುದಾರರಾಗಿರುವ ನಾಸ್ಸೀಲ್ ಅಬ್ದುಲ್ಲ ಎಂಬವರಿಗೆ ತುಷಾರ್ ನೀಡಿದ್ದ 19 ಕೋಟಿ ರೂ. ಮೊತ್ತದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಅಬ್ದುಲ್ಲ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತುಷಾರ್ ವೆಲ್ಲಪಳ್ಳಿಯನ್ನು ಬಂಧಿಸಿದ್ದಾರೆ. ಅವರು ಇದೀಗ ಅಜ್ಮಾನ್ ನ ಸೆಂಟ್ರಲ್ ಜೈಲ್ ನಲ್ಲಿದ್ದಾರೆ.
ಕೇರಳ ಮೂಲದ ಅಜ್ಮಾನ್ ಉದ್ಯಮಿ ನಾಸ್ಸೀಲ್ ಅಬ್ದುಲ್ಲ ಅವರಿಗೆ 19 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ತುಷಾರ್ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಮಾತುಕತೆ ನಡೆಸಿದರೂ ಫಲ ಕಾಣದಿದ್ದಾಗ, ತುಷಾರ್ ಅವರನ್ನು ಅಜ್ಮಾನ್ ಗೆ ಕರೆಸಿಕೊಂಡು, ಅಲ್ಲಿನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕೇರಳದ ಎನ್ ಡಿಎ ಸಂಚಾಲಕರಾಗಿರುವ ತುಷಾರ್ ಅವರು ಕೇರಳದ ಈಳವ ಸಮುದಾಯದ ಶ್ರೀ ನಾರಾಯಣ ಧರ್ಮಪಾಲನಾ ಯೋಗಮ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 15 ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ ಕೈಸುಟ್ಟಿಕೊಂಡಿದ್ದರು. ಈ ಸಂದರ್ಭದಲ್ಲಿ ಗುತ್ತಿಗೆದಾರರ ನೀಡಬೇಕಾದ ಬಾಕಿ ಮೊತ್ತ ಈಗ ಕೊರಳಿಗೆ ಬಂದಿದೆ.
ತುಷಾರ್ ಅವರ ಆರೋಗ್ಯದ ಬಗ್ಗೆ ಕಾಳಜಿ ತೋರಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗೆ ಪತ್ರ ಬರೆದು, ಈ ಬಗ್ಗೆ ಗಮನ ಹರಿಸುವಂತೆ ಕೋರಿದ್ದಾರೆ.