ಮೊನ್ನೆ ಸಾಮಾಜಿಕ ಮಾಧ್ಯಮ ದಿನ! ಇಂದು Whatsapp ಗೆ ಬೇಲಿ!
ನವದೆಹಲಿ, ಜುಲೈ 04: ಜೂನ್ 30 ರಂದು ವಿಶ್ವದಾದ್ಯಂತ 'ಸಾಮಾಜಿಕ ಮಾಧ್ಯಮ' ದಿನವನ್ನು ಆಚರಿಸಲಾಗಿದೆ. ಜಾಗತಿಕ ಸಂವಹನಕ್ಕೆ ಸೋಶಿಯಲ್ ಮೀಡಿಯಾ ನೀಡಿದ ಗಣನೀಯ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಪ್ರಭಾವಿ ಸಾಮಾಜಿಕ ಮಾಧ್ಯಮಗಳಲ್ಲೊಂದಾದ whatsappಗೆ ಬೇಲಿ ಹಾಕುವಂತೆ ಭಾರತದ ಮಾಹಿತಿ, ತಂತ್ರಜ್ಞಾನ ಇಲಾಖೆ ತಿಳಿಸಿದೆ.
'ಸುಳ್ಳು ಸುದ್ದಿಯನ್ನು ಕಳಿಸುವ ಮುನ್ನ ಪರಿಶೀಲಿಸಿ. ಸುಳ್ಳು ಸುದ್ದಿ ಎಲ್ಲೆಡೆ ಹರಡುವುದಕ್ಕೆ ಕಡಿವಾಣ ಹಾಕುವುದಕ್ಕೆ ಕ್ರಮ ಕೈಗೊಳ್ಳಿ' ಎಂದು ಫೇಸ್ ಬುಕ್ ಒಡೆತನದ ಸಾಮಾಜಿಕ ಮಾಧ್ಯಮ whatsappಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದ್ದು ಸ್ವಾಗತಾರ್ಹ.
ವದಂತಿಯ ಹರಿವಿಗೆ ಕಡಿವಾಣ: ವಾಟ್ಸಾಪ್ಗೆ ಕೇಂದ್ರ ಸರ್ಕಾರ ಸೂಚನೆ
ಮಾನವೀಯತೆಯ ಎಲ್ಲೆ ದಾಟುವಂಥ ಸನ್ನಿವೇಶವನ್ನು ಸೃಷ್ಟಿಸುವ ಸಂದೇಶಗಳನ್ನು ಹಂಚುವ ಮೂಲಕ Whatsapp ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥದ್ದಕ್ಕೆ ಅವಕಾಶ ನೀಡಬಾರದು ಎಂಬ ಕಳಕಳಿ ಈ ಮಾತಿನಲ್ಲಿ ವ್ಯಕ್ತವಾಗಿದೆ.
ಕಡಿವಾಣ ಏಕೆ?
ಮಕ್ಕಳ ಕಳ್ಳರ ಗುಂಪು ಎಂದು ಕೆಲವರ ಚಿತ್ರಗಳು whatsapp ನಲ್ಲಿ ಹರಿದಾಡುತ್ತಿದ್ದುದನ್ನು ನಂಬಿ, ಆ ವ್ಯಕ್ತಿಗಳನ್ನು ಹೋಲುವ 29 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೇ ತಿಂಗಳಿನಲ್ಲಿ ಒಬ್ಬ ವ್ಯಕ್ತಿಯನ್ನು ಮಕ್ಕಳ ಕಳ್ಳನೆಂದು ಆರೋಪಿಸಿ, ಜನರೇ ಕಲ್ಲಿನಿಂದ ಹೊಡೆದು ಸಾಯಿಸಿದ್ದರು. ನಂತರ ಮಹಾರಾಷ್ಟ್ರದಲ್ಲೂ ಇಂಥದೇ ಘಟನೆ ನಡೆದು ಐವರನ್ನು ಕೊಲ್ಲಲಾಗಿತ್ತು. ಇದೇ ರೀತಿ ದೇಶದ ನಾನಾ ರಾಜ್ಯಗಳಲ್ಲಿ ಸಾವಿಗೀಡಾದವರ ಸಂಖ್ಯೆ ಇದೀಗ 29 ಕ್ಕೆ ಏರಿದೆ.
ನಕಲಿ ವಿಡಿಯೋ ಸೃಷ್ಟಿಸಿದ ಆತಂಕ
ಆದರೆ ಅಸಲಿಗೆ ಮಕ್ಕಳನ್ನು ಅಪಹರಿಸುವವರ ವಿಡಿಯೋ ಪಾಕಿಸ್ತಾನದ ಕರಾಚಿಯದ್ದು, ಅದು ಭಾರತದ್ದಲ್ಲವೇ ಅಲ್ಲ. ಕೆಲ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಹಲವು ಅಮಾಯಕರು ಬಲಿಯಾಗಿದ್ದಾರೆ. ಮಾಹಿತಿಗಾಗಿ, ಭಾವನೆಗಳ ವಿನಿಮಯಕ್ಕಾಗಿ ಉಪಯೋಗವಾಗಬೇಕಾದ whatsapp ನಂಥ ಸಾಮಾಜಿಕ ಮಾಧ್ಯಮಗಳು ಇಂಥ ದುರಂತ ಸೃಷ್ಟಿಸಿದ್ದರ ಕುರಿತು ಕಳವಳ ವ್ಯಕ್ತಪಡಿಸಿದರು ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಕುರಿತು ಕೂಡಲೆ ಕ್ರಮ ಕೈಗೊಳ್ಳಬೇಕು. ಮತ್ತು ಸುಸಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದೆ.
|
ಮೊದಲು ಆರೋಪಿಗಳನ್ನು ಬಂಧಿಸಿ
ಕಲ್ಲು ಹೊಡೆದು ಸಾಯಿಸುವ ಕೃತ್ಯಕ್ಕೆ ಕೈಹಾಕಿದವರನ್ನು ಹಿಡಿದು ಶಿಕ್ಷಿಸುವ ಬದಲು whatsapp ಗೆ ಕಡಿವಾಣ ಹಾಕಲು ಹೊರಟಿದ್ದೀರಿ. ನಿಮ್ ಕರ್ತವ್ಯ ಮಾಡುವುದನ್ನು ಬಿಟ್ತು ಒಂದು ಮೆಸೆಂಜರ್ app ಅನ್ನು ಮುಗಿಸಲು ಹೊರಟಿರುವುದು ಎಷ್ಟು ಸರಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರವನ್ನು ಕೆಲವರು ಪ್ರಶ್ನಿಸಿದ್ದಾರೆ.
|
ಎತ್ತಿಗೆ ಜ್ವರ ಬಂದ್ರೆ....
'ಅಪರಾಧಿಯೊಬ್ಬ ಉತ್ತಮ ರಸ್ತೆಯಲ್ಲಿ ಓಡಿಹೋಗಿ ಪರಾರಿಯಾದರೆ ರಸ್ತೆಯನ್ನು ಚೆನ್ನಾಗಿ ಮಾಡಿದ್ದೇ ತಪ್ಪು ಎಂದು ದೂರುವುದಕ್ಕಾಗುತ್ತದೆಯೇ? ಇಂಥ ಘಟನೆಗಳು ನಡೆಯುವುದು ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಫಲವಾದಾಗ. ಅದಕ್ಕಾಗಿ whatsapp ಅನ್ನು ದೂರುವುದು ಸರಿಯೇ?' ಎಂದು ಟ್ವಿಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ದುರಂತ ಎಂದರೆ...
Whatsapp ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸಂದೇಶವೆಲ್ಲವೂ ಸತ್ಯವಲ್ಲ ಎಂಬುದು ಹಲವು ಸುಶಿಕ್ಷಿತರಿಗೂ ತಿಳಿಯದಿರುವುದು ದುರಂತ. ಯಾವ ಆಧಾರವಿಲ್ಲದೆ, ಲಂಗು-ಲಗಾಮಿಲ್ಲದೆ ಹರಿಯಬಿಡುವ ಎಷ್ಟೋ ಸುದ್ದಿಗಳು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿವೆ ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗಬೇಕಿದೆ. 'ಈ ಮಗುವಿಗೆ ಸಹಾಯ ಮಾಡಿ', 'ಉದ್ಯೋಗ ಬೇಕಿದ್ದರೆ ಈ ಸಂಖ್ಯೆಯನ್ನು ಸಂಪರ್ಕಿಸಿ', 'ಕೆಲವೇ ದಿನಗಳಲ್ಲಿ ಪ್ರಳಯವಾಗುತ್ತದೆ' ಎಂಬಿತ್ಯಾದಿ ಫೇಕ್ ಸುದ್ದಿಗಳು ಜನರಲ್ಲಿ ಆತಂಕ ಹುಟ್ಟಿಸುತ್ತದೆಯೇ ವಿನಃ ಇದರಿಂದ ಯಾವ ಪ್ರಯೋಜನವೂ ಇಲ್ಲ. ಇಂಥವನ್ನು ನಿರ್ಲಕ್ಷ್ಯಿಸುವ ಮನಸ್ಥಿತಿ ಮೂಡಿದರೆ ಇಂಥ ಘಟನೆಗಳು ನಡೆಯುವುದಿಲ್ಲ.