ವೈರಸ್ ಭೀತಿ ನಡುವೆ ಹಿಂದೂಗಳ ಪವಿತ್ರ ಯಾತ್ರೆ ಜುಲೈ 1ಕ್ಕೆ ಶುರು
ಡೆಹ್ರಾಡೂನ್, ಜೂನ್ 29: ಹಿಂದೂಗಳ ಪಾಲಿನ ಪವಿತ್ರ ಯಾತ್ರೆಗಳ ಪೈಕಿ ಮುಖ್ಯವಾಗಿರುವ ಚಾರ್ ಧಾಮ್ ಯಾತ್ರೆಗೆ ಜುಲೈ 1ರಿಂದ ಚಾಲನೆ ಸಿಗಲಿದೆ ಎಂದು ಉತ್ತರಾಖಂಡ್ ರಾಜ್ಯ ಪ್ರಕಟಿಸಿದೆ. ಕೊರೊನಾವೈರಸ್ ಸೋಂಕು ಭೀತಿ ನಡುವೆ ಪ್ರವಾಸಿಗರಿಗೆ, ಭಕ್ತಾದಿಗಳಿಗೆ ಅಗತ್ಯ ಸೂಚನೆ ನೀಡಲಾಗಿದ್ದು, ದೇಗುಲಗಳ ಆಡಳಿತ ಮಂಡಳಿಗಳು ಕೂಡಾ ಅಗತ್ಯ ಕ್ರಮ ಕೈಗೊಂಡಿವೆ ಎಂದು ಸರ್ಕಾರ ಹೇಳಿದೆ.
ಸದ್ಯಕ್ಕೆ ಹೊರ ರಾಜ್ಯರಿಂದ ಬರುವವರಿಗೆ ಯಾತ್ರೆ ಕೈಗೊಳ್ಳಲು ಅನುಮತಿ ನೀಡಿಲ್ಲ. ಈಗಾಗಲೇ ಉತ್ತರಾಖಂಡ್ ರಾಜ್ಯದಲ್ಲಿರುವವರು ಯಾತ್ರೆ ಕೈಗೊಳ್ಳಬಹುದು. ಕೇದಾರನಾಥ್, ಬದರಿನಾಥ್, ಗಂಗೋತ್ರಿ, ಯಮುನೋತ್ರಿ ನಾಲ್ಕು ಪವಿತ್ರ ತಾಣಗಳಿಗೆ ಹಿಂದೂಗಳು ಯಾತ್ರೆ ಕೈಗೊಳ್ಳಲು ಅನುಮತಿ ಸಿಕ್ಕಿದೆ ಎಂದಿ ಚಾರ್ ಧಾಮ್ ದೇವಸ್ಥಾನಂ ಮಂಡಳಿ ಕಾರ್ಯಕಾರಿ ಅಧಿಕಾರಿ ರವಿನಾಥ್ ರಮಣ್ ಹೇಳಿದ್ದಾರೆ.
ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?
ಯಾತಾರ್ಥಿಗಳು ಸ್ಥಳೀಯ ಜಿಲ್ಲಾಡಳಿತದಲ್ಲಿ ಯಾತ್ರೆ ಕೈಗೊಳ್ಳುವುದಕ್ಕೂ ಮುನ್ನ ನೋಂದಣಿ ಮಾಡಿಸಿಕೊಂಡು ಅನುಮತಿ ಪಡೆದುಕೊಳ್ಳಬೇಕು. ಕಂಟೇನ್ಮೆಂಟ್ ಜೋನ್ ನಲ್ಲಿರುವವರು ಯಾತ್ರೆ ಕೈಗೊಳ್ಳುವಂತಿಲ್ಲ. ರುದ್ರಪ್ರಯಾಗ್ (ಕೇದಾರನಾಥ್), ಉತ್ತರಕಾಶಿ(ಗಂಗೋತ್ರಿ, ಯಮುನೋತ್ರಿ) ಹಾಗೂ ಚಮೋಲಿ (ಬದರಿನಾಥ್) ಜಿಲ್ಲೆಗಳ ಅಧಿಕಾರಿಗಳ ಅನುಮತಿ ಅತ್ಯಗತ್ಯ.
ಕೇದರಾನಾಥಕ್ಕೆ 800, ಬದರಿನಾಥಕ್ಕ್ 1200, ಗಂಗೋತ್ರಿಗೆ 600 ಹಾಗೂ ಯಮುನೋತ್ರಿಗೆ 400 ಮಂದಿ ಯಾತ್ರಿಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 38 ಲಕ್ಷ ಮಂದಿ ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದರು.