370 ವಿಧಿ ರದ್ದು ವಿರುದ್ಧದ ಅರ್ಜಿ: ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಥವಾಗದ ಅಹವಾಲು
ನವದೆಹಲಿ, ಆಗಸ್ಟ್ 16: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪರಿಚ್ಛೇದ 370, 35A ರದ್ದು ಮಾಡಿದ ಕೇಂದ್ರ ಸರಕಾರದ ಕ್ರಮದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ (ಆಗಸ್ಟ್ 16) ಕೈಗೆತ್ತಿಕೊಂಡಿತು.
ಈ ಬಗ್ಗೆ ವಕೀಲ ಎಂ ಎಲ್ ಶರ್ಮಾ ಸಲ್ಲಿಸಿದ ಅರ್ಜಿಯನ್ನು ಅವಲೋಕಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, "ಸುಮಾರು ಮೂವತ್ತು ನಿಮಿಷದಿಂದ ನಿಮ್ಮ ಅರ್ಜಿಯನ್ನು ಓದುತ್ತಿದ್ದೇನೆ. ಆದರೆ ಅರ್ಜಿಯಲ್ಲಿ ಏನು ಬರೆದಿದ್ದೀರಾ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಮ್ಮು ಕಾಶ್ಮೀರದಲ್ಲಿ ಎಲ್ಲಾ ನಿರ್ಬಂಧ ತೆರವು: ಸುಪ್ರೀಂಗೆ ಕೇಂದ್ರ ಹೇಳಿದ್ದೇನು?
"ಇದ್ಯಾವ ರೀತಿಯ ಅರ್ಜಿ? ನನ್ನ ಕಷ್ಟ ಕಾಲದಲ್ಲಿ ಇದಕ್ಕಿಂತ ಚೆನ್ನಾಗಿ ನಾನು ವಾದ ಮಂಡಿಸುತ್ತಿದ್ದೆ. ಅರ್ಜಿಯಲ್ಲಿರುವ ಲೋಪ- ದೋಷಗಳನ್ನು ಮೊದಲು ಸರಿಪಡಿಸಿ. ವಿಚಾರಣೆಗೆ ಇನ್ನೊಂದು ದಿನ ನಿಗದಿ ಮಾಡಲಾಗುವುದು" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
"ಪ್ರಮುಖ ವಿಷಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸುವಾಗ ಸರಿಯಾಗಿ ಪರಿಶೀಲಿಸಬಾರದೇ? ಅರ್ಜಿಯಲ್ಲಿ ತೊಂದರೆ ಇರುವುದರಿಂದ ಇದನ್ನು ಅನೂರ್ಜಿತಗೊಳಿಸುತ್ತಿದ್ದೇನೆ" ಎಂದು ವಕೀಲ ಶರ್ಮಾಗೆ ಗೊಗೊಯಿ ಚಾಟಿ ಬೀಸಿದರು.
"ನನ್ನ ಬಲಗಣ್ಣಿನಲ್ಲಿ ತೊಂದರೆ ಇದ್ದಿದ್ದರಿಂದ ಅರ್ಜಿಯನ್ನು ಸರಿಯಾಗಿ ಅವಲೋಕಿಸಲು ಆಗಲಿಲ್ಲ. ತಿದ್ದುಪಡಿ ಮಾಡಿ ತರುತ್ತೇನೆ" ಎಂದು ಶರ್ಮಾ ಆವರು ಗೊಗೊಯಿ ಅವರಲ್ಲಿ ವಿನಂತಿಸಿಕೊಂಡರು.
ಕೇಂದ್ರ ಸರಕಾರದ ಪರವಾಗಿ ವಾದಿಸುತ್ತಿರುವ ಕೇವಿಯಟ್, ಬಿಮಲ್ ರಾಯ್, " ಲೋಪ- ದೋಷವಿರುವ ಅರ್ಜಿಯನ್ನು ಸಲ್ಲಿಸಿದ್ದಕ್ಕಾಗಿ, ಶರ್ಮಾ ಅವರಿಗೆ ಕೋರ್ಟ್ ದಂಡ ವಿಧಿಸಬೇಕು" ಎಂದು ಮುಖ್ಯ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಗೊಗೊಯಿ, "ಈಗಾಗಲೇ ಶರ್ಮಾ ಗಾಯ ಮಾಡಿಕೊಂಡಿದ್ದಾರೆ. ದಂಡ ವಿಧಿಸುವುದಿಲ್ಲ" ಎಂದು ಬಿಮಲ್ ರಾಯ್ ಗೆ ತಿಳಿಸಿದರು.