ಛಕ್ಕಾ ಜಾಮ್: ನಡುರಸ್ತೆಯಲ್ಲಿ ಸಿಲುಕಿದ ಜನರಿಗೆ ರೈತರಿಂದ ಆಹಾರ, ನೀರಿನ ವ್ಯವಸ್ಥೆ
ನವದೆಹಲಿ, ಫೆಬ್ರವರಿ.05: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ಫೆಬ್ರವರಿ.6ರಂದು ರಾಷ್ಟ್ರವ್ಯಾಪ್ತಿ "ಛಕ್ಕಾ ಜಾಮ್" (ರಾಷ್ಟ್ರೀಯ ಹೆದ್ದಾರಿ ತಡೆ) ನಡೆಸುವುದಕ್ಕೆ ರೈತ ಸಂಘಟನೆಗಳು ಕರೆ ನೀಡಿವೆ.
ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದ ಬಗ್ಗೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಮಾತನಾಡಿದ್ದಾರೆ. ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುತ್ತದೆ. ಈ ವೇಳೆ ರಸ್ತೆಗಳಲ್ಲಿ ಸಿಲುಕಿದ ಪ್ರಯಾಣಿಕರಿಗೆ ರೈತರೇ ಆಹಾರ ನೀರು ನೀಡಲಿದ್ದಾರೆ ಎಂದು ರಾಕೇಶ್ ತಿಕೈಟ್ ಹೇಳಿದ್ದಾರೆ.
ಕೇಂದ್ರದ ಎದೆಯಲ್ಲಿ ಭಯ: ರೈತರ ಬೆದರಿಸಲು ಶೌಚಾಲಯ, ನೀರು, ವಿದ್ಯುತ್ ವ್ಯತ್ಯಯ!?
ರೈತರ ಹೋರಾಟದಿಂದ ರಸ್ತೆಗಳಲ್ಲಿ ಸಿಲುಕುವ ಪ್ರಯಾಣಿಕರಿಗೆ ನೀರು ಆಹಾರ ನೀಡಲಾಗುತ್ತದೆ. ಅದರ ಜೊತೆಗೆ ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡಲು ಹೊರಟಿದೆ ಎನ್ನುವುದನ್ನು ಅವರಿಗೆ ತಿಳಿಸುವ ಪ್ರಯತ್ನವನ್ನು ರೈತರು ಮಾಡಲಿದ್ದಾರೆ. ದೆಹಲಿಯಲ್ಲಿ ಈ ಛಕ್ಕಾ ಜಾಮ್ ನಡೆಸುವುದಕ್ಕೆ ಸಾಧ್ಯವಾಗದೇ ಇರಬಹುದು. ಆದರೆ ದೇಶದ ಎಲ್ಲ ಕಡೆಗಳಲ್ಲಿ ದೆಹಲಿಯ ಹೊರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುತ್ತದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಹೇಳಿದ್ದಾರೆ.
ಛಕ್ಕಾ ಜಾಮ್ ನಡೆಸುವುದಕ್ಕೆ ಮುಖ್ಯ ಕಾರಣ
ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರಿಗೆ ನೀಡುತ್ತಿದ್ದ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಇಂಟರ್ ನೆಟ್ ಸೇವೆ, ನೀರು, ಶೌಚಾಲಯ, ಕನಿಷ್ಠ ವಿದ್ಯುತ್ ಸೌಲಭ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ. ರೈತರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿ ರೈತರು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಅಧಿಕಾರ ಕಳೆದುಕೊಳ್ಳುವ ಎಚ್ಚರಿಕೆ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು. ವಿವಾದಿತ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತರ ಪ್ರತಿಭಟನಾ ಪ್ರದೇಶದಲ್ಲಿ ಬ್ಯಾರಿಕೇಟ್, ಸರಪಳಿ
ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿನಿತ್ಯ ಬದುಕುವುದೇ ಕಷ್ಟ ಎನ್ನುವಂತಾ ವಾತಾವರಣ ಸೃಷ್ಟಿಯಾಗಿದೆ. ದೆಹಲಿಯ ಗಡಿಯಲ್ಲಿ ಪ್ರತಿಭಟನಾ ಸ್ಥಳ, ಸುತ್ತಮುತ್ತಲಿನ ರಸ್ತೆಗಳ ಚಿತ್ರಣ ಸಂಪೂರ್ಣ ಬದಲಾಗಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರನ್ನು ತಡೆಯುವುದಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಿಮೆಂಟ್ ರಸ್ತೆ ಮೇಲೆ ಕಬ್ಬಿಣದ ಸರಳು, ಕಾಂಕ್ರೀಟ್ ಗೋಡೆಗಳು, ಸಿಮೆಂಟ್ ರಸ್ತೆಗಳಲ್ಲಿ ತಲೆ ಎತ್ತಿರುವ ಮೊಳೆಗಳು ಇದರ ಜೊತೆಗೆ ಹಂತ ಹಂತವಾಗಿ ಬ್ಯಾರಿಕೇಡ್ ಹಾಕಲಾಗಿದೆ.
ಟ್ರ್ಯಾಕ್ಟರ್ ಜಾಥಾಗೆ ಹಿಂಸಾಚಾರದ ರೂಪ
ಕಳೆದ ಜನವರಿ.26ರಂದು ನಡೆದ 72ನೇ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ಜಾಥಾವನ್ನು ಪೊಲೀಸರು ತಡೆದಿದ್ದು, ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಯಿತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಮತ್ತು ಪೊಲೀಸರ ನಡುವೆ ತೀವ್ರ ಸಂಘರ್ಷ ನಡೆಯಿತು. ತದನಂತರ ಪ್ರತಿಭಟನಾನಿರತರಲ್ಲಿ ಕೆಲವರು ಖಡ್ಗ, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ ಘಟನೆ ನಡೆದಿತ್ತು. ಪ್ರತಿಭಟನಾಕಾರರ ಇನ್ನೊಂದು ಗುಂಪು ದೆಹಲಿ ಕೆಂಪುಕೋಟೆಗೆ ನುಗ್ಗಿ ರಾಷ್ಟ್ರ ಧ್ವಜದ ಎದುರಿಗೆ ಸಿಖ್ ಧ್ವಜವನ್ನು ಹಾರಿಸಿತು.