ದೇಶದಲ್ಲಿ ಶೀಘ್ರ ಹೊಸ ಸಹಕಾರ ನೀತಿ ಜಾರಿ: ಅಮಿತ್ ಶಾ
ನವದೆಹಲಿ, ಸೆಪ್ಟೆಂಬರ್ 25: ದೇಶದಲ್ಲಿ ಶೀಘ್ರ ಹೊಸ ಸಹಕಾರ ನೀತಿ ಜಾರಿಯಾಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ರಾಷ್ಟ್ರೀಯ ಸಹಕಾರಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈ ವರ್ಷದ ಜುಲೈನಲ್ಲಿ ಸಹಕಾರ ಸಚಿವಾಲಯವನ್ನು ರಚಿಸಲಾಯಿತು. ಸಹಕಾರಿ ವಲಯ ರಾಜ್ಯದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಏಕೆ ಈ ಹೊಸ ಸಚಿವಾಲಯವನ್ನು ರಚಿಸಿತು ಎಂದು ಕೆಲವರು ಆಶ್ಚರ್ಯ ಪಡುತ್ತಾರೆ. ಆದರೆ ಅದಕ್ಕೆ ಕಾನೂನಾತ್ಮಕ ಪ್ರತಿಕ್ರಿಯೆ ನೀಡುತ್ತೇವೆ. ಈ ಬಗ್ಗೆ ನಾನು ಹೆಚ್ಚು ವಾದ ಮಾಡಲು ಬಯಸುವುದಿಲ್ಲ ಎಂದರು.
6 ತಿಂಗಳಲ್ಲಿ 4 ಸಿಎಂಗಳಿಂದ ರಾಜೀನಾಮೆ ಪಡೆದುಕೊಂಡ ಬಿಜೆಪಿ ಹೈಕಮಾಂಡ್
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಹಕರಿಸುತ್ತದೆ ಮತ್ತು "ಯಾವುದೇ ಘರ್ಷಣೆ ಇರುವುದಿಲ್ಲ" ಎಂದು ಅಮಿತ್ ಶಾ ಒತ್ತಿ ಹೇಳಿದರು.
ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಸಹಕಾರಿ ನೀತಿಯನ್ನು ಹೊರತರಲಿದೆ ಮತ್ತು ಸಹಕಾರಿ ಚಳುವಳಿಯನ್ನು ಬಲಪಡಿಸಲು ರಾಜ್ಯಗಳ ಜೊತೆ ಕೆಲಸ ಮಾಡಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಈ ಸಮಾವೇಶದಲ್ಲಿ ವಿವಿಧ ಸಹಕಾರಿ ಸಂಘಗಳ 2,100 ಪ್ರತಿನಿಧಿಗಳು ಮತ್ತು ಸುಮಾರು 6 ಕೋಟಿ ಜನ ಆನ್ಲೈನ್ ಮೂಲಕ ಭಾಗವಹಿಸಿದ್ದರು.
ಮುಂದಿನ ಐದು ವರ್ಷಗಳಲ್ಲಿ ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರ ಸಂಘ(ಪಿಎಸಿ)ಗಳ ಸಂಖ್ಯೆಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ್ದಾರೆ. ಪ್ರಸ್ತುತ, ಸುಮಾರು 65,000 ಪಿಎಸಿಗಳಿವೆ.
ಈ ವರ್ಷದ ಆರಂಭದಲ್ಲಿ ಸಹಕಾರ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಈವರೆಗೆ ಸಹಕಾರ ಇಲಾಖೆಯು ಕೃಷಿ ಇಲಾಖೆಯ ಅಧೀನದಲ್ಲಿಯೇ ಇದ್ದ ಸಹಕಾರ ಇಲಾಖೆ ಪ್ರತ್ಯೇಕವಾಗಿ ಏಕೆ ಅವಶ್ಯಕವಿದೆ ಎಂದು ಅಮಿತ್ ತಿಳಿಸಿದ್ದಾರೆ. ಇದೇ ವೇಳೆ ಅವರು ಸರ್ಕಾರದ ನೂತನ ನಿರ್ಧಾರಗಳ ಬಗ್ಗೆ ತಿಳಿಸಿದ್ದು, ಹೊಸ ಸಹಕಾರ ನೀತಿಯನ್ನು ಈ ವರ್ಷ ತರಲಾಗುವುದು ಎಂದು ತಿಳಿಸಿದ್ದಾರೆ.
ಜೊತೆಗೆ ರಾಜ್ಯಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುವುದು. ಈ ಮೂಲಕ ಇಡೀ ದೇಶದ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ತರಲಾಗುವುದು ಎಂದು ಅವರು ನುಡಿದಿದ್ದಾರೆ. ಸಹಕಾರಿ ಅಧ್ಯಯನಕ್ಕಾಗಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಯನ್ನೂ ಅಮಿತ್ ಶಾ ತೆರೆದಿಟ್ಟಿದ್ದಾರೆ.
ಗ್ರಾಮೀಣ ಸಹಕಾರಿ ಬ್ಯಾಂಕುಗಳ ಸಮಸ್ಯೆ, ತೆರಿಗೆ ಸಮಸ್ಯೆ ಇವುಗಳು ನನಗೆ ತಿಳಿದಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಸಮಸ್ಯೆಗಳ ಕುರಿತಂತೆ ಪತ್ರ ಬರೆದು ನಮಗೆ ಕಳುಹಿಸಿ. ನಾನೇ ಬಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಅಮಿತ್ ಶಾ ನುಡಿದಿದ್ದಾರೆ.
ಭಾರತೀಯ ಸಹಕಾರ ಕ್ಷೇತ್ರವು ಒಳ್ಳೆಯ ಬೆಳವಣಿಗೆಗೆ ವೇದಿಕೆಯಾಗಲಿದೆ. ಜಾಗತಿಕ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಂಸ್ಥೆಯನ್ನು ನೀವೂ ಪ್ರಾರಂಭಿಸಬಹುದು ಎಂದು ಅಮಿತ್ ಶಾ ಕರೆ ನೀಡಿದ್ದಾರೆ.
ಸಣ್ಣ ಮೀನುಗಾರರಿಗೆ ತಾಂತ್ರಿಕ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಸಹಕಾರಿ ಸಂಘಗಳ ಮೂಲಕ ಸಹಾಯ ಮಾಡಲಾಗುವುದು. ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪಾರದರ್ಶಕತೆ ತರಬೇಕು. ಈ ಕುರಿತು ಮೋದಿ ಉತ್ಸುಕರಾಗಿದ್ದಾರೆ. ನಾವು ಅವರಿಗೆ ಕೈಜೋಡಿಸೋಣ.