ಕೊರೊನಾ ಏರಿಕೆ; ಹತ್ತು ರಾಜ್ಯಗಳಲ್ಲಿ ಪರಿಶೀಲನೆಗೆ ಮುಂದಾದ ಕೇಂದ್ರ
ನವದೆಹಲಿ, ಜುಲೈ 31: ದೇಶದಲ್ಲಿ ಕಳೆದ ಐದಾರು ದಿನಗಳಿಂದ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಈಗಾಗಲೇ ದೇಶ ಮೂರನೇ ಅಲೆಗೆ ಒಡ್ಡಿಕೊಂಡಿದೆಯೇ ಎಂಬ ಕುರಿತು ವೈದ್ಯಕೀಯ ವಲಯದಲ್ಲಿ ವಿಶ್ಲೇಷಣೆಗಳು ಆರಂಭವಾಗಿವೆ.
ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೇ ಏರಿಕೆಯಾಗುತ್ತಿದೆ. ಇನ್ನೊಂದೆಡೆ, ದೇಶದೆಲ್ಲೆಡೆ ಕೊರೊನಾ ಎರಡನೇ ಅಲೆ ಭೀಕರತೆ ತಗ್ಗಿದ ನಂತರವೂ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಸದ್ಯಕ್ಕೆ ದೇಶದ ಅರ್ಧದಷ್ಟು ಪ್ರಕರಣಗಳು ಕೇರಳ ಒಂದರಿಂದಲೇ ದಾಖಲಾಗುತ್ತಿದ್ದು, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹತ್ತು ರಾಜ್ಯಗಳ ಪರಿಸ್ಥಿರಿ ಪರಿಶೀಲನೆಗೆ ಕೇಂದ್ರ ಮುಂದಾಗಿದ. ಮುಂದೆ ಓದಿ...
ರಾಜ್ಯಗಳಿಗೆ ಈವರೆಗೆ ಕೇಂದ್ರದಿಂದ 48.78 ಕೋಟಿ ಕೊರೊನಾ ಲಸಿಕೆ ವಿತರಣೆ
ಈ ಹತ್ತು ರಾಜ್ಯಗಳಲ್ಲಿ ಕೇಂದ್ರದ ಪರಿಶೀಲನೆ
ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಅಸ್ಸಾಂ, ಮಿಝೋರಾಂ, ಮೇಘಾಲಯ ಹಾಗೂ ಮಣಿಪುರದಲ್ಲಿ ಕೊರೊನಾ ಪ್ರಕರಣಗಳು ಕೊಂಚ ಏರಿಕೆಯಾಗುತ್ತಿದ್ದು, ಈ ರಾಜ್ಯಗಳಲ್ಲಿನ ಕೊರೊನಾ ಪ್ರಕರಣಗಳು ಹಾಗೂ ನಿಯಂತ್ರಣ ಕ್ರಮಗಳ ಕುರಿತು ಶನಿವಾರ ಕೇಂದ್ರ ವಿಶ್ಲೇಷಣೆ ನಡೆಸಲಿರುವುದಾಗಿ ತಿಳಿದುಬಂದಿದೆ.
ಕೇರಳ, ತಮಿಳುನಾಡಲ್ಲಿ ಕೊರೊನಾ ಸೋಂಕು ಹೆಚ್ಚಳ: ಚಾಮರಾಜನಗರದಲ್ಲಿ ಕಟ್ಟುನಿಟ್ಟಿನ ತಪಾಸಣೆ
ಕೇರಳದಲ್ಲಿ ಆತಂಕ ಮೂಡಿಸಿರುವ ಕೊರೊನಾ
ಕೇರಳದಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕೇಂದ್ರದಿಂದ ತಜ್ಞರ ತಂಡವನ್ನು ಕಳುಹಿಸಿ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ನ ನಿರ್ದೇಶಕ ಡಾ. ಸುಜೀತ್ ಸಿಂಗ್ ನೇತೃತ್ವದ ತಂಡ ರಾಜ್ಯಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿದ್ದು, "ಎಲ್ಲಾ ರಾಜ್ಯಗಳಲ್ಲಿಯೂ ಕೊರೊನಾ ಪ್ರಕರಣಗಳ ಇಳಿಕೆಯಾಗಿದೆ. ಆದರೆ ಕೇರಳದಲ್ಲಿ ಕೊರೊನಾ ಹರಡುವಿಕೆ ಮುಂದುವರೆದಿದೆ" ಎಂದು ಹೇಳಿದ್ದಾರೆ. ಶುಕ್ರವಾರ ಕೇರಳದಲ್ಲಿ 20 ಸಾವಿರ ಪ್ರಕರಣಗಳು ದಾಖಲಾಗಿದ್ದು, ಸತತ ನಾಲ್ಕನೇ ದಿನ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ದೇಶದ ಅರ್ಧದಷ್ಟು ಪ್ರಕರಣಗಳು ಕೇರಳದ್ದೇ ಆಗಿದೆ. ಇಲ್ಲಿ ಪಾಸಿಟಿವಿಟಿ ದರ 13.61% ಆಗಿದೆ.
ಕೇರಳದಲ್ಲಿ ಸೋಂಕಿನ ಪುನರುತ್ಪತ್ತಿ ದರ ಹೆಚ್ಚಳ
ಕೇರಳ ಹಾಗೂ ಈಶಾನ್ಯ ರಾಜ್ಯಗಳ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಚೆನ್ನೈನಲ್ಲಿನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ತಿಳಿಸಿದೆ. ಕೇರಳದಲ್ಲಿ ಕೊರೊನಾ ಸೋಂಕಿನ ಪುನರುತ್ಪತ್ತಿ ದರ ಹೆಚ್ಚಿದ್ದು, 1.11 ದರ ಇರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿರುವುದು ಪ್ರಕರಣಗಳ ಅಂದಾಜು ಮಾಡುವುದು ಕಷ್ಟವಾಗಿದೆ ಎಂದು ಸಂಸ್ಥೆಯ ಸೀತಾಬ್ರ ಸಿನ್ಹಾ ಹೇಳಿದ್ದಾರೆ.
"ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಏರಿಕೆ"
ಭಾರತದಲ್ಲಿ ಲಾಕ್ಡೌನ್ ಸಡಿಲಿಕೆ ನಂತರದಲ್ಲಿ ಜನರು ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುದಿರುವುದು ಹಾಗೂ ಇತರೆ ನಿಯಮಗಳ ಉಲ್ಲಂಘನೆಯಿಂದಾಗಿಯೇ ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣ ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಶುಕ್ರವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
"ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೇಂದ್ರ ಸರ್ಕಾರದಿಂದ ಅಗತ್ಯ ತಂತ್ರಜ್ಞಾನ, ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ನೆರವು ನೀಡುವುದರ ಮೂಲಕ ಕೇಂದ್ರ ಸರ್ಕಾರವು ಕೊವಿಡ್-19 ನಿಯಂತ್ರಣಕ್ಕೆ ಸಹಕರಿಸಲಿದೆ," ಎಂದು ಹೇಳಿದ್ದರು.
ತಮಿಳುನಾಡಿನಲ್ಲಿ ಆಗಸ್ಟ್ 9ರವರೆಗೂ ಲಾಕ್ಡೌನ್
ಕೇರಳ ನಂತರ ತಮಿಳುನಾಡು, ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರ, ರಾಜ್ಯದಲ್ಲಿ ಆಗಸ್ಟ್ 9ರವರೆಗೂ ಲಾಕ್ಡೌನ್ ಮುಂದುವರೆಸುವುದಾಗಿ ಘೋಷಣೆ ಮಾಡಿದೆ. ಹಿಂದಿನ ಆದೇಶಕ್ಕೆ ಅನುಗುಣವಾಗಿ ಲಾಕ್ಡೌನ್ ಜಾರಿಯಲ್ಲಿರಲಿದೆ. ಕೊರೊನಾ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ತಿಳಿಸಿದೆ. ಜುಲೈ 16ರಂದು ಲಾಕ್ಡೌನ್ ಆದೇಶವನ್ನು ಹೊರಡಿಸಲಾಗಿತ್ತು. ರಾಜ್ಯದಲ್ಲಿ ಈಜುಕೊಳಗಳು, ಬಾರ್, ರೆಸ್ಟೋರೆಂಟ್ಗಳು, ಶಿಕ್ಷಣ ಸಂಸ್ಥೆಗಳು, ಮೃಗಾಲಯಗಳು ಹಾಗೂ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿರಲಿಲ್ಲ.