ಇಂದು ಲಡಾಖ್ ಸರ್ವಪಕ್ಷ ಸಭೆ: ಪ್ರಾದೇಶಿಕ ಪಕ್ಷಗಳಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಸಾಧ್ಯತೆ
ನವದೆಹಲಿ, ಜು.01: ಜಮ್ಮು ಮತ್ತು ಕಾಶ್ಮೀರದ ನಂತರ ಕೇಂದ್ರ ಸರ್ಕಾರ ಇಂದು ಲಡಾಖ್ ರಾಜಕೀಯ ಪಕ್ಷಗಳೊಂದಿಗೆ ಸರ್ವಪಕ್ಷ ಸಭೆ ನಡೆಸಲಿದೆ. ಈ ಸಭೆಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರತ್ಯೇಕ ರಾಜ್ಯ ಸ್ಥಾನಮಾನದ ಬೇಡಿಕೆ ಮುಂದಿಡಲು ಸಜ್ಜಾಗಿದೆ ಎಂದು ವರದಿಯಾಗಿದೆ.
ಸಭೆಗೆ ಮಾಜಿ ಸಂಸದರು ಮತ್ತು ಸಿವಿಲ್ ಸೊಸೈಟಿ ಸದಸ್ಯರನ್ನು ಆಹ್ವಾನಿಸಲಾಗಿದ್ದು, ಇದರ ಅಧ್ಯಕ್ಷತೆಯನ್ನು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ವಹಿಸಲಿದ್ದಾರೆ.
ಜಮ್ಮು- ಕಾಶ್ಮೀರದ ನಂತರ ಲಡಾಖ್ನಲ್ಲಿ ಸರ್ವಪಕ್ಷ ಸಭೆಗೆ ಕರೆ ನೀಡಿದ ಕೇಂದ್ರ
ಪ್ರಾದೇಶಿಕ ಪಕ್ಷಗಳು ಲಡಾಖ್ಗೆ ಪ್ರತ್ಯೇಕ ರಾಜ್ಯ ಸ್ಥಾನಮಾನದ ಒತ್ತಾಯ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 11 ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೂಡಾ ಟೈಮ್ಸ್ ನೌ ಗೆ ಮೂಲಗಳು ತಿಳಿಸಿದೆ.
ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಇದು ಸರ್ವಪಕ್ಷ ಸಭೆಗೆ ಆಹ್ವಾನವನ್ನು ಸ್ವೀಕರಿಸಿದೆ ಎಂದು ದೃಢಪಡಿಸಿದೆ. ಈ ಕೆಡಿಎ ಯು ''370 ಮತ್ತು 35 ಎ ವಿಧಿ ಪುನಃಸ್ಥಾಪನೆ ಹಾಗೂ ಇಡೀ ಲಡಾಖ್ಗೆ ರಾಜ್ಯತ್ವವನ್ನು ಕೋರಲಿದೆ,'' ಎಂದು ಹೇಳಿದೆ.
2019 ರ ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ನಾಯಕರನ್ನು ಒಳಗೊಂಡ ಮೊದಲ ಸರ್ವಪಕ್ಷ ಸಭೆಯನ್ನು ಕೇಂದ್ರವು ಜೂನ್ 24 ರಂದು ನಡೆಸಿದ್ದು ಈಗ ಲಡಾಖ್ನಲ್ಲಿ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ''ಜಮ್ಮು ಮತ್ತು ಕಾಶ್ಮೀರದ ಪ್ರಜಾಪ್ರಭುತ್ವ ಉಳಿಸಲು ಕೇಂದ್ರವು ಸಂಪೂರ್ಣವಾಗಿ ಬದ್ಧವಾಗಿದೆ. ಈ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಲಾಗುತ್ತದೆ,'' ಎಂದು ಹೇಳಿದ್ದರು.
ಡಿಲಿಮಿಟೇಶನ್, ವಿಧಾನಸಭಾ ಚುನಾವಣೆಗೆ ಒಂದು ಮಾರ್ಗಸೂಚಿ, ರಾಜ್ಯತ್ವವನ್ನು ಪುನಃಸ್ಥಾಪಿಸುವುದು ಮತ್ತು ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರುವುದು ಈ ಸಭೆಯಲ್ಲಿ ಚರ್ಚಿಸಲ್ಪಟ್ಟ ಇತರೆ ಪ್ರಮುಖ ವಿಚಾರಗಳಾಗಿದೆ.
ಏತನ್ಮಧ್ಯೆ, ಡಿಲಿಮಿಟೇಶನ್ ಆಯೋಗವು ಜುಲೈ 6-9 ರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನಾಲ್ಕು ದಿನಗಳ ಭೇಟಿಯನ್ನು ಪ್ರಾರಂಭಿಸಲಿದೆ. ರಾಜಕೀಯ ಪಕ್ಷಗಳು, ಅದರ ನಾಯಕರು ಮತ್ತು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದೆ.
ಜಮ್ಮು ಕಾಶ್ಮೀರದ ಸರ್ವಪಕ್ಷ ಸಭೆಯ ಮೊದಲು, ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಮತ್ತು ಲೇಹ್ ಮೂಲದ ಸಾಮಾಜಿಕ-ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಒಂದು ಗುಂಪು ಲಡಾಖ್ಗೆ ಪ್ರತ್ಯೇಕ ಶಾಸಕಾಂಗವನ್ನು ಕೋರಿತ್ತು. ನಮಗ್ಯಾಲ್ ಜೊತೆಗೆ, ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿ (ಎಲ್ಎಎಚ್ಡಿಸಿ) ಅಧ್ಯಕ್ಷ ತಾಶಿ ಗಯಾಲ್ಸನ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
370 ಮತ್ತು 35-ಎ ವಿಧಿಯನ್ನು ರದ್ದುಪಡಿಸಿದ ನಂತರ ಭೂಮಿ, ಉದ್ಯೋಗಗಳಿಗೆ ಮೀಸಲಾತಿ, ಸಂಸ್ಕೃತಿ, ಭಾಷೆ ಮತ್ತು ಪರಿಸರದ ಬಗ್ಗೆ ಜನರ ಕಳವಳವನ್ನು ಪರಿಹರಿಸಲು ಭಾರತೀಯ ಸಂವಿಧಾನದ 6 ನೇ ಪರಿಚ್ಛೇಧದಡಿಯಲ್ಲಿ ಸುರಕ್ಷತೆಗಾಗಿ ಒತ್ತಾಯಿಸುತ್ತಿದ್ದೇವೆ ಎಂದು ಸಭೆಯಲ್ಲಿ ಮಾಜಿ ಲಡಾಕ್ ಸಂಸದ ಥುಪ್ಸ್ತಾನ್ ಚೆವಾಂಗ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)