ಹೊಸ ವರ್ಷ ಸಂಭ್ರಮಾಚರಣೆಗಳ ಮೇಲೆ ನಿರ್ಬಂಧ: ರಾಜ್ಯಗಳಿಗೆ ಕೇಂದ್ರದ ಸಲಹೆ
ನವದೆಹಲಿ, ಡಿಸೆಂಬರ್ 30: ಬ್ರಿಟನ್ನಲ್ಲಿ ಕಾಣಿಸಿಕೊಂಡ ರೂಪಾಂತರಿ ವೈರಸ್ನ ತಳಿಗಳು ಭಾರತದಲ್ಲಿಯೂ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೊರೊನಾ ವೈರಸ್ ಸೋಂಕಿನ ಸ್ಫೋಟದ ಭೀತಿಯಿಂದಾಗಿ ಹೊಸ ವರ್ಷದ ಸಂಭ್ರಮಾಚರಣೆಗಳನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರಣಿ ನಿರ್ಬಂಧ ಸಲಹೆಗಳನ್ನು ನೀಡಿದೆ.
ಡಿಸೆಂಬರ್ 30, 31 ಮತ್ತು ಜನವರಿ 1ರಂದು ಸ್ಥಳೀಯ ಮಟ್ಟದ ಸನ್ನಿವೇಶಗಳನ್ನು ಮೌಲ್ಯಮಾಪನ ಮಾಡಿ ನಿರ್ಬಂಧಗಳನ್ನು ವಿಧಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಆದರೆ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.
ಇಂಗ್ಲೆಂಡ್ನಲ್ಲಿ ಬಂದವರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ
'ಭಾರತದಲ್ಲಿ ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಳೆದ ಮೂರೂವರೆ ತಿಂಗಳಿನಿಂದ ಸ್ಥಿರವಾಗಿ ಇಳಿಕೆಯಾಗುತ್ತಿದೆ. ಯುರೋಪ್ ಮತ್ತು ಅಮೆರಿಕಗಳಲ್ಲಿ ಹೊಸದಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ಗಮನದಲ್ಲಿರಿಸಿಕೊಂಡು, ನಮ್ಮ ದೇಶದೊಳಗೆ ಪರಿಣಾಮಕಾರಿ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಕಠಿಣ ಕಣ್ಗಾವಲನ್ನು ನಿರ್ವಹಿಸುವುದು ಈಗಲೂ ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ' ಎಂದು ರಾಜ್ಯಗಳಿಗೆ ಬರೆದ ಪತ್ರದಲ್ಲಿ ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಹೊಸ ವರ್ಷ ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿವಿಧ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಮತ್ತು ಪ್ರಸ್ತುತ ಚಳಿಗಾಲದ ಅವಧಿ ಇರುವುದರಿಂದ ವೇಗವಾಗಿ ಹರಡುವ ರೂಪಾಂತರ ವೈರಸ್ ಅನ್ನು ತಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಹೀಗಾಗಿ ಜನರು ಗುಂಪಾಗಿ ಸೇರುವಂತಹ ಎಲ್ಲ ಸ್ಥಳಗಳು ಹಾಗೂ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಬೇಕಿದೆ' ಎಂದು ಅವರು ಹೇಳಿದ್ದಾರೆ.
17 ರೂಪಾಂತರ ತಾಳಬಹುದು ವೈರಸ್; ಹೈದರಾಬಾದ್ ಸಂಸ್ಥೆ ವಾರ್ನಿಂಗ್
ಆದರೆ ರಾಜ್ಯಗಳ ನಡುವಿನ ಹಾಗೂ ರಾಜ್ಯದ ಒಳಗಿನ ಜನರು ಹಾಗೂ ಸರಕು ಸಾಗಣೆ ವಾಹನಗಳ ಓಡಾಟಗಳ ಮೇಲೆ ನಿರ್ಬಂಧ ವಿಧಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ.