ಭಾರತದಲ್ಲಿ ಕೊವಿಡ್-19 ಮೂರನೇ ಅಲೆ ನಿರ್ವಹಣೆಗೆ 3,631 ಆಕ್ಸಿಜನ್ ಘಟಕ
ನವದೆಹಲಿ, ಸೆಪ್ಟೆಂಬರ್ 16: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ನಡುವೆ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೆಚ್ಚಿಸುವುದರ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ಅಧಿಕೃತವಾಗಿ ಘೋಷಿಸಿದೆ.
"ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ 3,631 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ 4800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಅದರ ಪೈಕಿ ಶೇ.47ರಷ್ಟು ಅಂದರೆ 1595 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ," ಎಂದಿದ್ದಾರೆ.
ಲಸಿಕೆ ಲೆಕ್ಕಾಚಾರ: ಭಾರತದಲ್ಲಿ 76.49 ಕೋಟಿ ಮಂದಿಗೆ ಕೊವಿಡ್-19 ಲಸಿಕೆ!
ಕೇಂದ್ರ ಸರ್ಕಾರ ಒದಗಿಸಿದ ಮಾಹಿತಿ ಪ್ರಕಾರ, 4,751 ಮೆಟ್ರಿಕ್ ಟನ್ ಸಾಮರ್ಥ್ಯದ ಉತ್ಪಾದನೆಯೊಂದಿಗೆ ಮಂಜೂರಾದ ಒಟ್ಟು 3,651 PSA ಘಟಕಗಳಲ್ಲಿ, 2,281 ಮೆಟ್ರಿಕ್ ಟನ್ ನೊಂದಿಗೆ 1,491 ಕೇಂದ್ರಗಳನ್ನು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಸ್ಥಾಪಿಸಲಾಗುತ್ತದೆ. 2,289 ಮೆಟ್ರಿಕ್ ಟನ್ ಸಾಮರ್ಥ್ಯದ 2,140 ವೈದ್ಯಕೀಯ ಆಮ್ಲಜನಕ ಘಟಕವನ್ನು ರಾಜ್ಯ ಸರ್ಕಾರ, ನಗರ ಮತ್ತು ಸ್ಥಳೀಯ ಆಡಳಿತದ ಮೂಲಕ ಸ್ಥಾಪಿಸುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದಿಂದ ಆಮ್ಲಜನಕ ಉತ್ಪಾದನಾ ಘಟಕ:
ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂಲದಿಂದ 2,088 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಉತ್ಪಾದಿಸುವ 1595 ಘಟಕಗಳು ಹಾಗೂ 1024 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಉತ್ಪಾದಿಸುವ 731 ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎದುರಾದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ವೈದ್ಯಕೀಯ ಆಮ್ಲಜನಕವನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿತ್ತು.
ಕೇರಳ, ಮೀಜೋರಾಂನಲ್ಲಿ ಕೊರೊನಾವೈರಸ್ ದಾಖಲೆ:
ಭಾರತದಲ್ಲಿ ವರದಿಯಾಗುವ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಶೇ.68ರಷ್ಟು ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ಪತ್ತೆಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ದೇಶದಲ್ಲಿ ಪತ್ತೆಯಾಗುವ ಕೊವಿಡ್-19 ಪ್ರಕರಣಗಳಲ್ಲಿ ಶೇ.68ರಷ್ಟು ಕೇರಳದಲ್ಲಿ ವರದಿಯಾಗುತ್ತಿವೆ ಎಂದರು. ಕೇರಳವೊಂದರಲ್ಲೇ 1.99 ಲಕ್ಷ ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ. ಮಿಜೋರಾಂ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 10,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಕಳೆದ 11 ವಾರಗಳಲ್ಲಿ ಪಾಸಿಟಿವಿಟಿ ದರ ಶೇ.3ರಷ್ಟಿದೆ. 64 ಜಿಲ್ಲೆಗಳಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಹೆಚ್ಚಿಸುವುದು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ," ಎಂದು ಹೇಳಿದ್ದಾರೆ.
ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಆದ್ಯತೆ ಇಲ್ಲ:
"ವೈಜ್ಞಾನಿಕ ಮತ್ತು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದಾಗಿ ಬೂಸ್ಟರ್ ಡೋಸ್ ಲಸಿಕೆ ನೀಡುವುದು ಕೇಂದ್ರ ಸರ್ಕಾರದ ಗುರಿಯಲ್ಲ. ಎರಡೂ ಡೋಸ್ ಕೊವಿಡ್-19 ಲಸಿಕೆ ನೀಡುವುದುಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಪ್ರತಿಕಾಯದ ಮಟ್ಟವನ್ನು ಅಳೆಯಬಾರದು ಎಂದು ಹಲವಾರು ಏಜೆನ್ಸಿಗಳು ಶಿಫಾರಸು ಮಾಡಲಾಗಿದೆ," ಐಸಿಎಂಆರ್ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ. "ಮುಂಬರುವ 2-3 ತಿಂಗಳಲ್ಲಿ, ನಾವು ಯಾವುದೇ ಕೋವಿಡ್ ಪ್ರಕರಣಗಳ ಏರಿಕೆಯ ವಿರುದ್ಧ ಜಾಗರೂಕರಾಗಿರಬೇಕು. ಮುಂದಿನ ತ್ರೈಮಾಸಿಕದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿರಲು ನಾವು ವಿನಂತಿಸುತ್ತೇವೆ. ಕೇರಳದಲ್ಲಿ ಸಹ ಪ್ರಕರಣಗಳ ಸಂಖ್ಯೆಯನ್ನು ಸ್ಥಿರಗೊಳಿಸುವುದನ್ನು ನೋಡಿ ನಮಗೆ ಸಂತೋಷವಾಗಿದೆ" ಎಂದು ನೀತಿ ಆಯೋಗದ ಸದಸ್ಯ ಡಾ ವಿ ಕೆ ಪೌಲ್ ತಿಳಿಸಿದ್ದಾರೆ.
ದೇಶದಲ್ಲಿ 77.17 ಕೋಟಿ ಮಂದಿಗೆ ಕೊರೊನಾ ಲಸಿಕೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮೂರನೇ ಅಲೆ ನಡುವೆ ಬೂಸ್ಟರ್ ಡೋಸ್ ನೀಡಬೇಕೇ ಬೇಡವೇ ಎನ್ನುವರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರ ಮಧ್ಯೆ ದೇಶದಲ್ಲಿ ಮೊದಲ ಎರಡು ಡೋಸ್ ಲಸಿಕೆ ವಿತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 244 ದಿನಗಳಾಗಿದ್ದು, ಗುರುವಾರ ರಾತ್ರಿ 7 ಗಂಟೆ ವೇಳೆಗೆ 57,11,488 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 74,25,94,875 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಭಾರತದಲ್ಲಿ ಈವರೆಗೂ 77,17,36,406 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದ್ದು, ದೇಶದಲ್ಲಿ ಇದುವರೆಗೂ 58,21,13,634 ಮಂದಿಗೆ ಮೊದಲ ಡೋಸ್ ಹಾಗೂ 18,96,22,772 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.