'ಆಕ್ಸಿಜನ್ ಕೊರತೆಯಿಂದ ಸಾವಿನ ಬಗ್ಗೆ ಕೇಂದ್ರ ಮಾಹಿತಿಯೇ ಕೇಳಿಲ್ಲ': ಛತ್ತೀಸ್ಗಢ ಆರೋಗ್ಯ ಸಚಿವ
ರಾಯ್ಪುರ್, ಜು.24: ''ದೇಶಾದ್ಯಂತ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ ಬಗ್ಗೆ ರಾಜ್ಯಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವು ದಾರಿ ತಪ್ಪಿಸುತ್ತಿದೆ. ನಿಜವಾಗಿ ಹೇಳಬೇಕಾದರೆ, ಈ ಸಾವುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈವರೆಗೆ ರಾಜ್ಯ ಸರ್ಕಾರಗಳಿಂದ ಯಾವುದೇ ಅಂಕಿಅಂಶಗಳನ್ನು ನೀಡಿ ಎಂದು ಕೇಳಿಲ್ಲ,'' ಎಂದು ಛತ್ತೀಸ್ಗಢ ಆರೋಗ್ಯ ಸಚಿವ ಟಿ ಎಸ್ ಸಿಂಗ್ ಡಿಯೊ ಹೇಳಿದ್ದಾರೆ.
''ಛತ್ತೀಸ್ಗಢದ ಆಮ್ಲಜನಕ ಹೆಚ್ಚುವರಿಯಾಗಿರುವ ರಾಜ್ಯವಾಗಿದೆ. ಆದರೂ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ರೋಗಿಗಳು ಬಲಿಯಾಗುತ್ತಾರೆಯೇ ಎಂದು ಕಂಡುಹಿಡಿಯಲು ಎರಡನೇ ಅಲೆಯ ಸಂದರ್ಭದಲ್ಲಿ ಈವರೆಗೂ ದಾಖಲಾಗಿರುವ ಸಾವುಗಳ ಮರು ಲೆಕ್ಕಪರಿಶೋಧನೆಯನ್ನು ರಾಜ್ಯ ಸರ್ಕಾರ ನಡೆಸುತ್ತಿದೆ,'' ಎಂದು ಕೂಡಾ ಈ ಸಂದರ್ಭದಲ್ಲೇ ಆರೋಗ್ಯ ಸಚಿವ ಟಿ ಎಸ್ ಸಿಂಗ್ ಡಿಯೊ ತಿಳಿಸಿದ್ದಾರೆ.
ಛತ್ತೀಸ್ಗಢ: 1,600 ರು. ಮೌಲ್ಯದ 800 ಕೆಜಿ ಗೋವಿನ ಸಗಣಿ ಕಳವು! - ಪ್ರಕರಣ ದಾಖಲು
ಮಾನ್ಸೂನ್ ಅಧಿವೇಶನ ಆರಂಭವಾದ ಬಳಿಕ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಜನರ ಸಂಖ್ಯೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಹಿಂದೆ ಎರಡನೇ ಅಲೆಯ ಪ್ರಾರಂಭದಲ್ಲಿ ಹಲವಾರು ರಾಜ್ಯಗಳಲ್ಲಿ ಆಮ್ಲಜನಕ ಕೊರತೆಯಿಂದ ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಆದರೆ ಮಾನ್ಸೂನ್ ಅಧಿವೇಶನದಲ್ಲಿ ಈ ಸಾವಿನ ಬಗ್ಗೆ ಚರ್ಚೆಯಾದಾಗ ಈ ಲೆಕ್ಕಾಚಾರದ ಬಗ್ಗೆ ಯಾವುದೇ ರಾಜ್ಯಗಳು ಮಾಹಿತಿ ನೀಡಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಈ ಹಿನ್ನೆಲೆ ಇನ್ನು ಛತ್ತೀಸ್ಗಢ ಮಾತ್ರವಲ್ಲದೇ, ರಾಜಸ್ತಾನ ಸರ್ಕಾರವೂ ಕೂಡಾ ''ಆಕ್ಸಿಜನ್ ಕೊರತೆಯಿಂದ ಉಂಟಾಗಿರುವ ಸಾವಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಮಾಹಿತಿ ಕೇಳಿಲ್ಲ,'' ಎಂದು ಹೇಳಿಕೊಂಡಿದೆ. ಹಾಗೆಯೇ ರಾಜಸ್ತಾನ ಆರೋಗ್ಯ ಸಚಿವ ರಘು ಶರ್ಮಾ ಮಾತನಾಡಿ, ರಾಜ್ಯದಲ್ಲಿ ಎರಡನೇ ಅಲೆಯಲ್ಲಿ ಸಂಭವಿಸಿದ ಸಾವುಗಳಲ್ಲಿ ಹೆಚ್ಚಿನವು ಆಮ್ಲಜನಕದ ಕೊರತೆಯಿಂದಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಗಳೇ ವರದಿ ನೀಡಿಲ್ಲ
ಜುಲೈ 20 ರಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಹಾಗೂ ನಿರ್ದಿಷ್ಟವಾಗಿ ಕೋವಿಡ್ -19 ರ ಎರಡನೇ ಅಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಮ್ಲಜನಕದ ಕೊರತೆಯಿಂದ ಉಂಟಾದ ಸಾವಿನ ಬಗ್ಗೆ ವರದಿ ನೀಡಿಲ್ಲ ಎಂದು ಹೇಳಿದೆ. ಕೇಂದ್ರ ಸರ್ಕಾರದ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ಟೀಕೆ ಮಾಡಿದೆ.
ಕೇಂದ್ರ ಸರ್ಕಾರವೇ ಲೆಕ್ಕ ಕೇಳಿಲ್ಲ
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಛತ್ತೀಸ್ಗಢ ಆರೋಗ್ಯ ಸಚಿವಸಿಂಗ್ ಡಿಯೊ, ''ಭಾರತ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ನಿರಂತರ ಮಾಹಿತಿ ನೀಡಲಾಗಿದೆ. ಆದಾಗ್ಯೂ ಕೇಂದ್ರ ಸರ್ಕಾರವು ಆಮ್ಲಜನಕದ ಕೊರತೆಯಿಂದ ಉಂಟಾಗುವ ಸಾವುಗಳ ಬಗ್ಗೆ ರಾಜ್ಯಗಳು ಭರ್ತಿ ಮಾಡಬೇಕಾದ ಪ್ರತ್ಯೇಕ ಅಂಕಣವನ್ನು ದಾಖಲೆ ಭರ್ತಿ ಮಾಡುವ ವೇಳೆ ಕೇಳಿಲ್ಲ. ಆದರೆ ಈಗ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಡೇಟಾವನ್ನು ನೀಡಿಲ್ಲ ಎಂದು ಹೇಳುತ್ತಿದೆ. ಇದು ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರದ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ,'' ಎಂದು ಹೇಳಿದ್ದಾರೆ.
ಮೋದಿ ಬದಲು ಸಿಎಂ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್ಗಢ ಸರ್ಕಾರ
ಛತ್ತೀಸ್ಗಢದಲ್ಲಿ ಆಕ್ಸಿಜನ್ ಕೊರತೆಯಿಂದ ಉಂಟಾದ ಸಾವಿನ ಲೆಕ್ಕಾಚಾರ
''ಛತ್ತೀಸ್ಗಢ ಒಂದು ಆಮ್ಲಜನಕ ಹೆಚ್ಚುವರಿಯಾಗಿರುವ ರಾಜ್ಯವಾಗಿದೆ. ಆದ್ದರಿಂದ ನಾವು ಯಾವುದೇ ಆಮ್ಲಜನಕದ ಕೊರತೆಗೆ ಸಂಬಂಧಿಸಿದ ಸಾವನ್ನು ದಾಖಲಿಸಿಲ್ಲ. ಆದರೆ ಮೊಂಡುತನದ ಬದಲು, ನಾವು ಜನರು ಮತ್ತು ಇತರ ಪಾಲುದಾರರನ್ನು ಕೇಳಲು ಸಿದ್ಧರಿದ್ದೇವೆ. ಎಲ್ಲಾ ಸಾಧ್ಯತೆಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಪರಿಶೀಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಕೋವಿಡ್ -19 ಸಂಬಂಧಿತ ಸಾವುಗಳ ಲೆಕ್ಕಪರಿಶೋಧನೆಯನ್ನು ನಾವು ಈಗಾಗಲೇ ರಾಜ್ಯದಲ್ಲಿ ನಡೆಸುತ್ತಿದ್ದೇವೆ,'' ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. "ರಾಜ್ಯದಲ್ಲಿ ಕೋವಿಡ್ -19 ರ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ಅಥವಾ ಹೊರಗಿನ ಯಾವುದೇ ಸಾವಿನ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಲು ನಾವು ನಮ್ಮ ಸಾರ್ವಜನಿಕ ಲೆಕ್ಕಪರಿಶೋಧನೆಯನ್ನು ವಿಸ್ತರಿಸುತ್ತಿದ್ದೇವೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಪಾರದರ್ಶಕತೆ ವಿಚಾರದಲ್ಲಿ ಕಾಂಗ್ರೆಸ್ ಬದ್ಧತೆ
ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಕೊರೊನಾ ಸೋಂಕಿತರ ಸಾವು ಸಂಭವಿಸಿದಲ್ಲಿ ಸರ್ಕಾರಕ್ಕೆ ತಿಳಿಸುವಂತೆ ಎನ್ಜಿಒಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜ್ಯದ ಪತ್ರಕರ್ತರಿಗೆ ಸಚಿವರು ಮನವಿ ಮಾಡಿದರು. "ಪಾರದರ್ಶಕತೆ ಪ್ರಜಾಪ್ರಭುತ್ವದಿಂದ ಚುನಾಯಿತವಾದ ಸರ್ಕಾರದ ಒಂದು ಪ್ರಮುಖ ಅಂಶವಾಗಿದೆ ಮತ್ತು ನಾವು ಪಾರದರ್ಶಕತೆ ವಿಚಾರದಲ್ಲಿ ಕಾಂಗ್ರೆಸ್ ಬದ್ಧತೆಯನ್ನು ಅನುಸರಿಸುತ್ತೇವೆ," ಎಂದು ಹೇಳಿದ್ದಾರೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. "ದೂರುಗಳು ವಿರಳವಾಗಿ ಬಂದಿದೆ, ಆದರೆ ಅವುಗಳಲ್ಲಿ ಆಧಾರವಿಲ್ಲ. ಎಲ್ಲಾ ಅನುಮಾನಗಳನ್ನು ಹೋಗಲಾಡಿಸಲು ನಾವು ಮತ್ತೆ ಸಾವುಗಳನ್ನು ಲೆಕ್ಕಪರಿಶೋಧಿಸುತ್ತೇವೆ," ಎಂದು ಹೇಳಿದ್ದಾರೆ.
ಹಾಗೆಯೇ ದೇಶಾದ್ಯಂತ ಇದೇ ರೀತಿಯ ಸಾವುಗಳ ಲೆಕ್ಕಪರಿಶೋಧನೆ ನಡೆಸಬೇಕೆಂದು ಸಿಂಗ್ ಡಿಯೋ ಕೇಂದ್ರವನ್ನು ಒತ್ತಾಯಿಸಿದರು. "ಯಾವುದೇ ಪುರಾವೆಗಳಿಲ್ಲದೆ ಲಸಿಕೆ ವ್ಯರ್ಥವಾಗಿದೆಯೆಂದು ಕೇಂದ್ರದ ಸರ್ಕಾರವು ಛತ್ತೀಸ್ಗಢದ ಮೇಲೆ ಆರೋಪ ಮಾಡಬಹುದಾದರೆ, ದೇಶಾದ್ಯಂತ ತಮ್ಮ ತಂಡಗಳನ್ನು ಕಳುಹಿಸುವ ಮೂಲಕ ಎಷ್ಟು ಸಾವುಗಳು ಸಂಭವಿಸಿವೆ ಎಂಬುದನ್ನು ನಿರ್ಣಯಿಸಲು ಸಾಧ್ಯವಾಗದೇ," ಎಂದು ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ.
ಕೋವಿಡ್ ಹೆಚ್ಚಳ: ಆರು ರಾಜ್ಯಗಳಿಗೆ ತಂಡ ಕಳುಹಿಸಿದ ಕೇಂದ್ರ ಸರ್ಕಾರ
ರಾಜ್ಯದ ಆಮ್ಲಜನಕದ ಉತ್ಪಾದನಾ ಸಾಮರ್ಥ್ಯ 388.87 ಮೆಟ್ರಿಕ್ ಟನ್ ಆಗಿದ್ದರೆ, ಏಪ್ರಿಲ್ 26 ರಂದು ಗರಿಷ್ಠ ಬಳಕೆ 180 ಮೆ.ಟನ್ ಆಗಿದೆ ಎಂದು ಈ ಸಂದರ್ಭದಲ್ಲಿ ಡಿಯೋ ಮಾಹಿತಿ ನೀಡಿದ್ದಾರೆ. ಇನ್ನು ಎಡರನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಛತ್ತೀಸ್ಗಢ ರಾಜ್ಯದಲ್ಲಿ ಕೊರೊನಾ ವೈರಲ್ ಸೋಂಕಿನಿಂದ 9,617 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
(ಒನ್ಇಂಡಿಯಾ ಸುದ್ದಿ)