ಬಾಬಾ ರಾಮ್ ದೇವ್, ಅಮೃತಾನಂದ ಮಯಿಯ ವಿಐಪಿ ಭದ್ರತೆಗೆ ಕುತ್ತು?
ವಿಐಪಿಗಳ ಭದ್ರತೆ ಪುನರ್ ಪರಿಶೀಲನೆ ಮಾಡಲು ನಿಂತ ಕೇಂದ್ರ ಗೃಹ ಇಲಾಖೆ. ಲಾಲು, ಬಾಬಾ ರಾಮ್ ದೇವ್, ಮಾತಾ ಅಮೃತಾನಂದ ಮಯಿ ಮುಂತಾದವರ ಭದ್ರತೆ ಪುನರ್ ಪರಿಶೀಲನೆ.
ನವದೆಹಲಿ, ಸೆಪ್ಟೆಂಬರ್ 16: ಬಾಬಾ ರಾಮ್ ದೇವ್, ಮಾತಾ ಅಮೃತಾನಂದಮಯಿ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರಿಗೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ನೀಡಲಾಗಿರುವ ವಿಐಪಿ ಭದ್ರತಾ ಸಿಬ್ಬಂದಿಯನ್ನು ಕಡಿತಗೊಳಿಸುವ ಬಗ್ಗೆ ಕೇಂದ್ರ ಗೃಹ ಇಲಾಖೆ ಚಿಂತನೆ ನಡೆಸಿದೆ.
ಕೆಲವು ವಿಐಪಿಗಳಂತೂ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ ಜಿ) ಹಾಗೂ ಅರೆಸೇನಾ ಯೋಧರ ಭದ್ರತೆಯನ್ನು ಪಡೆದಿದ್ದು, ಇಂಥವರ ಭದ್ರತಾ ಸಿಬ್ಬಂದಿಯ ಸಂಖ್ಯೆ 475ಕ್ಕೇರಿರುವುದನ್ನು ಗಮನಿಸಿರುವ ಗೃಹ ಇಲಾಖೆ ಹೌಹಾರಿದೆ. ಹಾಗಾಗಿ, ಇಷ್ಟು ಪ್ರಮಾಣದ ಭದ್ರತೆ ನಿಜಕ್ಕೂ ಅವಶ್ಯಕತೆ ಇರುವ ವ್ಯಕ್ತಿಗಳನ್ನು ಹೊರತುಪಡಿಸಿ, ಉಳಿದವರಿಗೆ ನೀಡಲಾಗಿರುವ ಗರಿಷ್ಠ ಮಟ್ಟದ ವಿಐಪಿ ಭದ್ರತೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಕಾರ್ಯೋನ್ಮುಖರಾಗಿದೆ ಎಂದು ಹೇಳಲಾಗಿದೆ.
ಲಾಲುಗೆ ಸೇರಿದ 165 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಇಲಾಖೆಯ ಅಧಿಕಾರಿಯೊಬ್ಬರು, ಹೆಚ್ಚುವರಿ ಭದ್ರತಾ ಸಿಬ್ಬಂದಿ ಕಡಿತ ವಿಚಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಉದಾಹರಣೆಯಾಗಿ ತೋರುತ್ತಾರೆ.
ಲಾಲು ಪ್ರಸಾದ್ ಯಾದವ್ ಅವರು ಈಗ ಜನಪ್ರತಿನಿಧಿಯಲ್ಲ. ಆದರೂ, ಅವರಿಗೆ ಹಿಂದೆ ನೀಡಲಾಗಿದ್ದ ಎನ್ಎಸ್ ಜಿ ಹಾಗೂ ಸಿಆರ್ ಪಿಎಫ್ ಯೋಧರ ಕಾವಲನ್ನು ಮುಂದುವರಿಸಲಾಗಿದೆ. ಆದರೆ, ಬದಲಾದ ಇಂದಿನ ಸನ್ನಿವೇಶಗಳಲ್ಲಿ ಇದು ಎಷ್ಟರ ಮಟ್ಟಗೆ ಸರಿಯ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಲಾಲು ಜೀ ಈಗ ಹೆಚ್ಚು ಪ್ರವಾಸ ಮಾಡೋದಿಲ್ಲ
ಲಾಲು ಅವರು ಇತ್ತೀಚೆಗೆ ಪ್ರವಾಸ ಮಾಡುವುದು ಬಹುತೇಕ ಕಡಿಮೆಯಾಗಿದೆ. ಹಾಗಿರುವಾಗ, ಲಾಲೂಜೀ ಅವರಿಗೆ ನೀಡಲಾಗಿರುವ ಭದ್ರತಾ ಸಿಬ್ಬಂದಿಯ ಕಡಿತದ ಬಗ್ಗೆ ಆಲೋಚಿಸುವುದು ಕೇಂದ್ರಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಕರುಣಾನಿಧಿ ಝಡ್ ಪ್ಲಸ್ ಬಗ್ಗೆ ಪರಿಶೀಲಿಸಬೇಕಿದೆ!
ಅದೇ ರೀತಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೂ ಈಗ 93 ವರ್ಷ ವಯಸ್ಸಾಗಿದ್ದು ಮನೆಯಿಂದ ಆಚೆ ಬರುವುದೇ ಅಪರೂಪ ಎಂಬಂತಾಗಿದೆ. ಹಾಗಾಗಿ, ಅವರಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆ ಬಗ್ಗೆಯೂ ಮತ್ತೊಮ್ಮೆ ಪರಿಶೀಲಿಸಬೇಕಿದೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.
ಗೃಹ ಇಲಾಖೆಗೆ ಚಿಂತೆಗೀಡು ಮಾಡಿರುವ ಭದ್ರತೆ
ಅದರಂತೆ, ಬಾಬಾ ರಾಮ್ ದೇವ್, ಮಾತಾ ಅಮೃತಾನಂದ ಮಯಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಛತ್ತೀಸ್ ಗಢದ ರಮಣ ಸಿಂಗ್ ಸೇರಿದಂತೆ ಹಲವಾರು ಗಣ್ಯರ ಭದ್ರತಾ ಸಿಬ್ಬಂದಿ ವಿಚಾರವನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯತೆಯನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಗತ್ಯವಿದ್ದರೆ ಮಾತ್ರ ಪರಿಶೀಲನೆ
ಸದ್ಯಕ್ಕೆ ಅಧಿಕಾರದಲ್ಲಿರುವ ರಾಜಕೀಯ ವ್ಯಕ್ತಿಗಳಿಗೆ, ಗಣ್ಯರಿಗೆ ಅವರ ಅಗತ್ಯತೆಗೆ ತಕ್ಕಂತೆ ಭದ್ರತೆ ನೀಡಲಾಗುವುದು. ಅನವಶ್ಯಕವಾಗಿ ಇರುವ ಸಿಬ್ಬಂದಿಯನ್ನಷ್ಟೇ ಹಿಂಪಡೆಯಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.