ಹರಿದ್ವಾರ ಕುಂಭಮೇಳ 2021: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಡೆಹ್ರಾಡೂನ್,ಜನವರಿ 24: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುವ 2021ರ ಕುಂಭ ಮೇಳಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಮಾರ್ಗಸೂಚಿಯ ಪ್ರಕಾರ ಕುಂಭ ಮೇಳಕ್ಕೆ ಬರುವ ಭಕ್ತರೆಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು. ಕುಂಭ ಮೇಳದಲ್ಲಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಇರಲಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕುಂಭ ಮೇಳಕ್ಕೆ ಬರುವ ಭಕ್ತಾದಿಗಳೆಲ್ಲರೂ ಅನಿವಾರ್ಯವಾಗಿ ನೋಂದಣಿ ಮಾಡಿಸಬೇಕು. ಹಾಗೆಯೇ ಕೊರೊನಾ ಸರ್ಟಿಫಿಕೇಟ್ ಇರಬೇಕು, ಕೊರೊನಾ ವರದಿ ನೆಗೆಟಿವ್ ಇದ್ದರೆ ಮಾತ್ರ ಕುಂಭಮೇಳದಲ್ಲಿ ಪಾಲ್ಗೊಳ್ಳಬಹುದು.
ಹಾಗೆಯೇ ಮಾರ್ಗಸೂಚಿಯಲ್ಲಿ ಗರ್ಭಿಣಿಯರು, 65 ವರ್ಷಕ್ಕಿಂತ ಮೇಲ್ಪಟ್ಟವರು, 10 ವರ್ಷಕ್ಕಿಂತ ಕಡಿಮೆ ಇರುವವರು ಪಾಲ್ಗೊಳ್ಳಲು ಅವಕಾಶವಿಲ್ಲ. ಹಾಗೆಯೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಕೂಡ ಕುಂಭಮೇಳದಲ್ಲಿ ಪಾಲ್ಗೊಳ್ಳುವಂತಿಲ್ಲ.
ಹರಿದ್ವಾರದಲ್ಲಿ ಮಹಾಕುಂಭಾಭಿಷೇಕದ ತಯಾರಿ ನಡೆಯುತ್ತಿದೆ. ಫೆಬ್ರವರಿ 27 ರಿಂದ ಕುಂಭಮೇಳ ಆರಂಭವಾಗಲಿದೆ. ಒಂದೇ ಒಂದು ತಿಂಗಳು ಸಮಯವಿದ್ದು, ಸಾಕಷ್ಟು ಕಾರ್ಯಗಳು ಬಾಕಿ ಉಳಿದಿವೆ. ಸಂತ ಮಹಾತ್ಮರಿಗಾಗಿ ಟೆಂಡ್ ವ್ಯವಸ್ಥೆ ಮಾಡಲಾಗುತ್ತಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಈ ವರ್ಷ ಕುಂಭಮೇಳವು ಮೂರೂವರೆ ತಿಂಗಳ ಬದಲು ಹರಿದ್ವಾರದಲ್ಲಿ 48 ದಿನಗಳ ಕಾಲ ನಡೆಯಲಿದೆ. ಮಹಾ ಕುಂಭವನ್ನು ನಾಲ್ಕು ನದಿತೀರದ ಯಾತ್ರಾ ಸ್ಥಳಗಳಲ್ಲಿ 12 ವರ್ಷಗಳ ಚಕ್ರದಲ್ಲಿ ಆಚರಿಸಲಾಗುತ್ತದೆ. ಮೇಳ ಏಪ್ರಿಲ್ 27 ರಂದು ಮುಕ್ತಾಯಗೊಳ್ಳಲಿದೆ.