ಹುಷಾರ್: ಭಾರತದ 11 ರಾಜ್ಯಗಳಲ್ಲಿ ಡೆಂಗ್ಯೂ ರೋಗದ ಹೊಸ ತಳಿ!
ನವದೆಹಲಿ, ಸಪ್ಟೆಂಬರ್ 19: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಅತಿಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಡೆಂಗ್ಯೂ ಸೋಂಕಿನ ಪ್ರಕರಣಗಳು ದೇಶದ 11 ರಾಜ್ಯಗಳಲ್ಲಿ ವರದಿಯಾಗಿವೆ. ಈ ಹೊಸ ಸೋಂಕಿತ ಪ್ರಕರಣಗಳ ಪತ್ತೆಗೆ ಜ್ವರ ಪತ್ತೆ ಸಹಾಯವಾಣಿ, ಪರೀಕ್ಷಾ ಕಿಟ್ ಹಾಗೂ ಅಗತ್ಯ ಔಷಧಿಗಳನ್ನು ಸಿದ್ಧಪಡಿಸಿಕೊಳ್ಳಿರಿ ಎಂದು ಕೇಂದ್ರ ತಂಡ ಎಚ್ಚರಿಕೆ ನೀಡಿದೆ.
ಕೊವಿಡ್-19 ಸೋಂಕಿನ ಕುರಿತು ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಂಕಿನ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆ ಸಾರ್ವಜನಿಕವಾಗಿ ಜನರು ಒಂದು ಕಡೆ ಸೇರದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಹಣ ಕಟ್ಟಿದರಷ್ಟೇ ಚಿಕಿತ್ಸೆ: ವೈದ್ಯರ ಧನದಾಹಕ್ಕೆ ಹೋಯ್ತಾ ಮಗುವಿನ ಪ್ರಾಣ!?
ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ರವಾನಿಸುವಂತೆ ಡೆಂಗ್ಯೂ ರೋಗದ ಹೊಸ ತಳಿಯು ವರದಿಯಾದ ರಾಜ್ಯಗಳು ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾಪಿಸಿವೆ. ಸೆರೋಟೈಪ್-2 ತಳಿಯ ಡೆಂಗ್ಯೂ ಜ್ವರವು ಹೊಸ ರೀತಿಯ ಅಪಾಯ ಮತ್ತು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಚ್ಚರಿಸಿದೆ. ಇದರ ಮಧ್ಯೆ ಡೆಂಗ್ಯೂ ರೋಗದ ಲಕ್ಷಣಗಳು, ರೋಗ ಹರಡುವಿಕೆ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಚಾರ ಮಾಡುವಂತೆ ರಾಜ್ಯಗಳಿಗೂ ಸೂಚಿಸಲಾಗಿದೆ.
11 ರಾಜ್ಯಗಳಲ್ಲಿ ಹೊಸ ಡೆಂಗ್ಯೂ ಜ್ವರದ ಪ್ರಕರಣ
ಭಾರತದ 11 ರಾಜ್ಯಗಳಲ್ಲಿ ಸೆರೋಟೈಪ್-2 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆಂಧ್ರ ಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಈ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೊದಲ ಆಗಸ್ಟ್ ಹಾಗೂ ಸೆಪ್ಟೆಂಬರ್ 10ರಂದು ಈ ರಾಜ್ಯಗಳಿಗೆ ರೋಗ ನಿಯಂತ್ರಿಸಲು ಸಲಹಾ ಸೂಚನೆಗಳನ್ನು ಹೊರಡಿಸಿತ್ತು.
15 ರಾಜ್ಯಗಳಲ್ಲಿ ಕೊರೊನಾವೈರಸ್ ಪ್ರಕರಣಗಳು
ದೇಶದಲ್ಲಿ ಪತ್ತೆಯಾಗುವ ಕೊವಿಡ್-19 ಪ್ರಕರಣಗಳಲ್ಲಿ ಶೇ.68ರಷ್ಟು ಕೇರಳದಲ್ಲಿ ವರದಿಯಾಗುತ್ತಿವೆ ಎಂದರು. ಕೇರಳವೊಂದರಲ್ಲೇ 1.99 ಲಕ್ಷ ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ. ಮಿಜೋರಾಂ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 10,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ದೇಶದ 15 ರಾಜ್ಯಗಳಲ್ಲಿ ಕೊರೊನಾವೈರಸ್ ಪಾಸಿಟಿವಿಟಿ ದರ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಕಳೆದ 11 ವಾರಗಳಲ್ಲಿ ಪಾಸಿಟಿವಿಟಿ ದರ ಶೇ.3ರಷ್ಟಿದೆ. 64 ಜಿಲ್ಲೆಗಳಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾಗಿದೆ. 15 ರಾಜ್ಯಗಳ 70 ಜಿಲ್ಲೆಗಳಲ್ಲಿ ನಿರಂತರವಾಗಿ ಪಾಸಿಟಿವಿಟಿ ದರವು ಶೇ.5ಕ್ಕಿಂತ ಹೆಚ್ಚಾಗಿದೆ. ಅಲ್ಲದೇ 34 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇ.10ಕ್ಕಿಂತ ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಹೆಚ್ಚಿಸುವುದು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ," ಎಂದು ಹೇಳಿದ್ದಾರೆ.
ಕೊರೊನಾವೈರಸ್ ಮಾರ್ಗಸೂಚಿ ಪಾಲನೆಗೆ ಶಿಸ್ತುಕ್ರಮ
"ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಶಿಸ್ತುಬದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಮಾಲ್ಗಳು, ಸ್ಥಳೀಯ ಮಾರುಕಟ್ಟೆಗಳು ಮತ್ತು ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್ ಸೂಕ್ತ ವರ್ತನೆ (ಸಿಎಬಿ) ಮತ್ತು ಕೋವಿಡ್ ಸುರಕ್ಷಿತ ಹಬ್ಬಗಳ ಪ್ರಚಾರಕ್ಕಾಗಿ ಪರಿಣಾಮಕಾರಿ ಕೈಗೊಳ್ಳಲು ಒತ್ತಾಯಿಸಲಾಗಿದೆ. ಎಲ್ಲಾ ಜಿಲ್ಲೆಗಳು ಪ್ರತಿದಿನವೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಗುರುತಿಸಲು ಮತ್ತು ನಿರ್ಬಂಧಗಳನ್ನು ಹೇರುವುದನ್ನು ಮತ್ತು ಸಿಎಬಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು," ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಕೊವಿಡ್-19 ಸೋಂಕಿತ ಪ್ಪಕರಣಗಳ ಬಗ್ಗೆ ತಿಳಿಯೋಣ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30,773 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 38,945 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 309 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,34,48,163ಕ್ಕೆ ಏರಿಕೆಯಾಗಿದೆ. ಇದುವರೆಗೂ 3,26,71,167 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಬಲಿಯಾದವರ ಸಂಖ್ಯೆ 4,44,838ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 3,32,158 ಸಕ್ರಿಯ ಪ್ರಕರಣಗಳು ವರದಿಯಾಗಿವೆ.