ಕಳಪೆ ಮಟ್ಟದಲ್ಲಿ ಲಸಿಕೆ ಅಭಿಯಾನ; ಎರಡು ರಾಜ್ಯಗಳಿಗೆ ಕೇಂದ್ರದ ತರಾಟೆ
ನವದೆಹಲಿ, ಜನವರಿ 19: ಕೊರೊನಾ ಲಸಿಕಾ ಅಭಿಯಾನವನ್ನು ಸೂಕ್ತವಾಗಿ ನಿಭಾಯಿಸಲಿಲ್ಲ ಎಂಬ ಕಾರಣಕ್ಕೆ ಎರಡು ರಾಜ್ಯಗಳನ್ನು ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ.
ಪರಿಶೀಲನಾ ಸಭೆಯಲ್ಲಿ ಕೊರೊನಾ ಲಸಿಕೆ ಅಭಿಯಾನದ ನಿರ್ವಹಣೆಗೆ ಸಂಬಂಧಿಸಿದಂತೆ ತಮಿಳುನಾಡು, ಕೇರಳವನ್ನು ಕೇಂದ್ರ ತರಾಟೆಗೆ ತೆಗೆದುಕೊಂಡಿದೆ. ಕೊರೊನಾ ಲಸಿಕೆ ಅಭಿಯಾನದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದ್ದು, ಈ ಎರಡು ರಾಜ್ಯಗಳಲ್ಲಿ ಶೇ.25ಕ್ಕೂ ಕಡಿಮೆ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದಾರೆ. ಲಸಿಕೆ ಕುರಿತು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಈ ಮಾರ್ಗವನ್ನು ಸೂಕ್ತವಾಗಿ ನಿರ್ವಹಿಸಬೇಕೆಂದು ಕೇಂದ್ರ ಈ ರಾಜ್ಯಗಳಿಗೆ ತಿಳಿಸಿದೆ.
ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?
ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರತಿದಿನವೂ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಲಾಗುತ್ತಿದ್ದು, ತಮಿಳುನಾಡು ಹಾಗೂ ಕೇರಳ ರಾಜ್ಯಗಳು, ಹಲವು ಆರೋಗ್ಯಕಾರ್ಯಕರ್ತರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದಾಗಿ ತಿಳಿಸಿವೆ.
ಲಸಿಕೆ ಪ್ರಯೋಜನಗಳ ಕುರಿತು ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕು ಎಂದು ಕೇಂದ್ರ ಸೂಚಿಸಿದ್ದು, ಪಂಜಾಬ್ ಹಾಗೂ ಛತ್ತೀಸ್ ಗಡದಲ್ಲೂ ಕಳಪೆ ನಿರ್ವಹಣೆ ಮಾಡಿದ್ದಾಗಿ ತಿಳಿಸಿದೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಅಭಿಯಾನ 70% ಯಶಸ್ವಿಯಾಗಿದೆ. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಲಸಿಕೆ ನೀಡುವ ಸ್ಥಳದಲ್ಲಿಯೇ ಆರೋಗ್ಯ ಇಲಾಖೆಯ ಅಧಿಕಾರಿಗಳು ವೈದ್ಯಕೀಯ ಉಸ್ತುವಾರಿ, ನಿರ್ದೇಶಕ, ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲರೊಂದಿಗೆ ಕುಳಿತು ಲಸಿಕೆಯ ಕುರಿತು ಅರಿವು ಮೂಡಿಸಿದ್ದಾರೆ. ಈ ಅಂಶಗಳು ಲಸಿಕೆ ಬಗ್ಗೆ ಆತ್ಮವಿಶ್ವಾಸ ತುಂಬಿವೆ ಎಂದು ತಿಳಿಸಿದೆ.
ಲಸಿಕಾ ಅಭಿಯಾನದ ಮೊದಲ ದಿನ ತಮಿಳುನಾಡಿನಲ್ಲಿ 161 ಸೆಷನ್ ಗಳಲ್ಲಿ 2945 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಕೇರಳದಲ್ಲಿ 133 ಸೆಷನ್ ಗಳಲ್ಲಿ 8062, ಛತ್ತೀಸ್ ಗಡದಲ್ಲಿ 97 ಸೆಷನ್ ಗಳಲ್ಲಿ 5592 ಹಾಗೂ ಪಂಜಾಬ್ ನಲ್ಲಿ 59 ಸೆಷನ್ ಗಳಲ್ಲಿ 1319 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು.