ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಧಿಕೃತವಾಗಿ ಜಾರಿ
ನವದೆಹಲಿ, ಜೂನ್ 2: ಕಾವೇರಿ ನೀರು ಹಂಚಿಕೆಯನ್ನು ಸುಸೂತ್ರವಾಗಿ ನಡೆಸುವ ಸಂಬಂಧ ರಚಿಸಲಾಗಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಭಾರತ ಸರ್ಕಾರದ ಗೆಜೆಟ್ನಲ್ಲಿ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ.
ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ನಡುವೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಇದ್ದ ಗೊಂದಲವನ್ನು ನಿವಾರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಮಳೆ ಪರಿಣಾಮದಿಂದ 74 ಅಡಿ ತಲುಪಿದ ಕೆಆರ್ ಎಸ್ ನೀರಿನ ಮಟ್ಟ
ಕರ್ನಾಟಕ ಚುನಾವಣೆ ಪೂರ್ಣಗೊಳ್ಳುವವರೆಗೂ ಈ ಕಾರ್ಯವನ್ನು ಮುಂದೂಡಿದ್ದ ಕೇಂದ್ರ ಸರ್ಕಾರ, ಈಗ ಪ್ರಾಧಿಕಾರವನ್ನು ಅಧಿಕೃತವಾಗಿ ಗೆಜೆಟ್ನಲ್ಲಿ ಸೇರ್ಪಡೆ ಮಾಡಿದೆ.
ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಜಲಸಂಪನ್ಮೂಲ ಇಲಾಖೆ, ಅಧ್ಯಕ್ಷರು ಹಾಗೂ 8 ಸದಸ್ಯರ ಸಮಿತಿಯನ್ನು ರಚಿಸಿದೆ. ಎಂಟು ಸದಸ್ಯರ ಪೈಕಿ ನಾಲ್ವರು ಕಾಯಂ ಸದಸ್ಯರಾಗಿರುತ್ತಾರೆ. ಉಳಿದವರು ತಾತ್ಕಾಲಿಕ ಸದಸ್ಯತ್ವ ಪಡೆದುಕೊಂಡಿರುತ್ತಾರೆ.
ಈ ಸದಸ್ಯರು ಜಲವಿವಾದ ವ್ಯಾಪ್ತಿಯಲ್ಲಿರುವ ನಾಲ್ಕು ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ.
ಕಾವೇರಿ ನದಿ ತೀರದ ರಾಜ್ಯಗಳಿಗೆ ಇರುವ ನೀರಿನ ಅಗತ್ಯತೆ, ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹದ ಪ್ರಮಾಣ ಮತ್ತು ರಾಜ್ಯಗಳ ಅವಶ್ಯಕತೆಗೆ ಅನುಗುಣವಾಗಿ ಆಯಾ ರಾಜ್ಯಗಳಿಗೆ ನೀರಿನ ಬಿಡುಗಡೆ ಮಾಡಿಸುವ ಕಾರ್ಯವನ್ನು ಈ ಪ್ರಾಧಿಕಾರ ನಿರ್ವಹಿಸಲಿದೆ.
ಕಾವೇರಿ ನ್ಯಾಯಾಧಿಕರಣ ಅಂತಿಮ ತೀರ್ಪನ್ನು ಸಮಿತಿ ಜಾರಿಗೆ ತರಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಅಥವಾ ಪುದುಚೆರಿಗಳು ತನ್ನ ಕಾರ್ಯನಿರ್ವಹಣೆಗೆ ಅಗತ್ಯ ಸಹಕಾರ ನೀಡದೆಯೇ ಇದ್ದರೆ ಪ್ರಾಧಿಕಾರ ಕೇಂದ್ರ ಸರ್ಕಾರದ ಮೊರೆ ಹೋಗಬಹುದು.
ಕಾವೇರಿ ನಿರ್ವಹಣಾ ಸ್ಕೀಂ ಕರಡಿಗೆ ಸುಪ್ರೀಂಕೋರ್ಟ್ ಒಪ್ಪಿಗೆ
ತನ್ನ ನಿರ್ದೇಶನದಂತೆ ನೀರು ಬಿಡುಗಡೆ ಮಾಡದೆ ಇದ್ದರೆ ಆ ರಾಜ್ಯದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಅಲ್ಲದೆ, ಕಾವೇರಿ ನದಿ ಪಾತ್ರದಲ್ಲಿರುವ ಅಣೆಕಟ್ಟುಗಳ ಮೇಲ್ವಿಚಾರಣೆಯನ್ನು ಸಮಿತಿ ನಿರ್ವಹಿಸಲಿದೆ.
ಬಿಡುಗಡೆಯಾದ ನೀರಿನ ಪ್ರಮಾಣ, ಬಿಡುಗಡೆಯಾದ ಬಳಿಕ ಶೇಖರಣೆಯಾದ ನೀರಿನ ಪ್ರಮಾಣವನ್ನು ಈ ಪ್ರಾಧಿಕಾರ ಮಾಪನ ಮಾಡಲಿದೆ.
ಮಂಡಳಿ ರಚನೆ ಕುರಿತು ಗೆಜೆಟ್ನಲ್ಲಿ ಪ್ರಕಟಿಸುವಂತೆ ಗೆಜೆಟ್ ಮುದ್ರಣ ವಿಭಾಗದ ಹಿರಿಯ ಜಂಟಿ ಆಯುಕ್ತ ಆರ್.ಕೆ. ಕನೋಡಿಯಾ ಅವರು ಭಾರತ ಸರ್ಕಾರಿ ಮುದ್ರಣದ ವ್ಯವಸ್ಥಾಪಕರಿಗೆ ಶುಕ್ರವಾರ ನಿರ್ದೇಶನ ನೀಡಿದರು. ಅದರಂತೆ ಗೆಜೆಟ್ ಮುದ್ರಣವಾಗಿದೆ.