ನಿವೃತ್ತ ಸರ್ಕಾರಿ ನೌಕರ ಕುಟುಂಬ ಸದಸ್ಯರಿಂದಲೇ ಕೊಲೆಯಾದರೆ ಪಿಂಚಣಿ ಯಾರಿಗೆ?: ನಿಯಮ ತಿದ್ದುಪಡಿ
ನವದೆಹಲಿ, ಜೂನ್ 30: ನಿವೃತ್ತ ಸರ್ಕಾರಿ ನೌಕರ ಸಾವನ್ನಪ್ಪಿದ ನಂತರ ಪಿಂಚಣಿ ಹಣ ಆತನ ಕುಟುಂಬ ಸದಸ್ಯರಿಗೆ ದೊರೆಯುತ್ತದೆ. ಆದರೆ ಕುಟುಂಬ ಸದಸ್ಯರೊಬ್ಬರಿಂದಲೇ ಆತ ಕೊಲೆಯಾದ ಪಕ್ಷದಲ್ಲಿ ಆ ಪಿಂಚಣಿ ಹಣ ಯಾರಿಗೆ ನೀಡಬಹುದು? ಆ ಕೊಲೆ ಆರೋಪದ ಕುರಿತು ತೀರ್ಪು ಬರುವವರೆಗೂ ಪಿಂಚಣಿ ಹಣ ಸ್ಥಗಿತಗೊಳಿಸದೇ ಇರಲು ಸಾಧ್ಯವೇ? ಈ ಕುರಿತ 50 ವರ್ಷಗಳ ಹಿಂದಿನ ನಿಯಮವನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.
ಜೂನ್ 16ರಂದು ಈ ಪಿಂಚಣಿ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದ್ದು, 1972ರಿಂದ ಇರುವ ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಈ ಹೊಸ ನಿಯಮ ಏನು ಹೇಳುತ್ತಿದೆ? ಮುಂದಿದೆ ವಿವರ...
ಕೊಲೆ ಆರೋಪ ಬಂದರೆ ಪಿಂಚಣಿ ಹಣ ಸ್ಥಗಿತ
ಮೃತ ಸರ್ಕಾರಿ ನೌಕರನ ಕೊಲೆ ಆರೋಪ ಆತನ ಕುಟುಂಬ ಸದಸ್ಯರ ಮೇಲಿದ್ದರೆ ಅಂಥ ಸಂದರ್ಭದಲ್ಲಿ ಪಿಂಚಣಿ ಹಣಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗುತ್ತಿತ್ತು. ಆರೋಪದಿಂದ ಮುಕ್ತವಾದರೆ ಮಾತ್ರ ಪಿಂಚಣಿ ಹಣ ಮತ್ತೆ ಆ ಸದಸ್ಯನಿಗೆ ಹೋಗುತ್ತದೆ. ಕೊಲೆ ಸಾಬೀತಾದರೆ ಮತ್ತೊಬ್ಬ ಕುಟುಂಬ ಸದಸ್ಯನಿಗೆ ಪಿಂಚಣಿ ವರ್ಗವಾಗುತ್ತದೆ. ಅಲ್ಲಿಯವರೆಗೂ ಪಿಂಚಣಿ ಸ್ಥಗಿತಗೊಂಡಿರುತ್ತದೆ. ಆದರೆ ಈ ಪ್ರಕ್ರಿಯೆ ದೀರ್ಘಕಾಲದ್ದಾಗಿರುತ್ತದೆ. ಅರಿಯರ್ಸ್ನಂತೆ ಒಟ್ಟಿಗೆ ಆ ಪಿಂಚಣಿ ಹಣ ನೀಡಲಾಗುತ್ತದೆ. 1972ರಿಂದ ಇದೇ ನಿಯಮ ಮುಂದುವರೆದಿದೆ.
NACH ನಿಯಮ ಬದಲಾವಣೆ; ಇನ್ನು ವಾರಾಂತ್ಯ, ರಜಾ ದಿನಗಳಲ್ಲೂ ಸಿಗಲಿದೆ ವೇತನ, ಪಿಂಚಣಿ
ಅರ್ಹ ಕುಟುಂಬ ಸದಸ್ಯರಿಗೆ ತಕ್ಷಣವೇ ಪಿಂಚಣಿ ವರ್ಗ
ಇದೀಗ ಈ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಪ್ರಕಾರ ಮೃತ ಸರ್ಕಾರಿ ನೌಕರನ ಕೊಲೆ ಆರೋಪ ಹೊತ್ತ ಕುಟುಂಬ ಸದಸ್ಯ ಆರೋಪ ಮುಕ್ತನಾಗುವವರೆಗೂ ಪಿಂಚಣಿ ಸ್ಥಗಿತಗೊಳ್ಳುವುದಿಲ್ಲ. ಬೇರೆ ಅರ್ಹ ಕುಟುಂಬ ಸದಸ್ಯರಿಗೆ ಕೂಡಲೇ ಪಿಂಚಣಿ ವರ್ಗವಾಗುತ್ತದೆ. ಒಂದು ವೇಳೆ ಕೊಲೆ ಆರೋಪಿ ಖುಲಾಸೆಗೊಂಡರೆ ಪಿಂಚಣಿ ಮರಳಿ ಸಿಗುತ್ತದೆ. ಜೂನ್ 16ರಂದು ಪಿಂಚಣಿ ನಿಯಮದಲ್ಲಿ ಈ ತಿದ್ದುಪಡಿ ಮಾಡಲಾಗಿದೆ.
ಬೇರೆ ಅರ್ಹ ಸದಸ್ಯನಿಗೆ ಪಿಂಚಣಿ ನಿರಾಕರಣೆ ಸಲ್ಲದು
ಕೊಲೆ ಪ್ರಕರಣವೊಂದು ಇತ್ಯರ್ಥವಾಗಲು ಹಲವು ವರ್ಷಗಳನ್ನೇ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಮೃತ ನೌಕರನ ಕುಟುಂಬದ ಬೇರೆ ಅರ್ಹ ಸದಸ್ಯನಿಗೂ ಪಿಂಚಣಿ ನಿರಾಕರಣೆ ಮಾಡುವುದು ಸರಿಯಲ್ಲ ಎಂದು ಸಿಬ್ಬಂದಿ ಖಾತೆ ಸಚಿವಾಲಯ ಆದೇಶದಲ್ಲಿ ತಿಳಿಸಲಾಗಿದೆ. ಆರೋಪಿ ನಂತರ ಪಿಂಚಣಿ ಪಡೆಯಲು ಅರ್ಹವಾಗಿರುವ ವ್ಯಕ್ತಿ ಅಪ್ರಾಪ್ತರಾಗಿದ್ದರೆ, ಆರೋಪಿಯೇತರ ಪ್ರಾಪ್ತ ವಯಸ್ಸಿನ ಕುಟುಂಬದ ಇತರೆ ವ್ಯಕ್ತಿ ಅವರ ಗಾರ್ಡಿಯನ್ ಆಗಿ, ಪಿಂಚಣಿ ಹಣದ ಜವಾಬ್ದಾರಿ ಪಡೆಯಬೇಕಾಗುತ್ತದೆ ಎಂದು ನೂತನ ಪಿಂಚಣಿ ನಿಯಮ ಹೇಳುತ್ತದೆ.
"ನಿವೃತ್ತ ನೌಕರನ ಕುಟುಂಬಕ್ಕೆ ತೊಂದರೆಯಾಗಬಾರದು"
ನಿವೃತ್ತ ಸರ್ಕಾರಿ ನೌಕರ ಕೊಲೆಯಾದರೆ ಆತನ ಕುಟುಂಬಕ್ಕೆ ಪಿಂಚಣಿ ಹಣವನ್ನು ಸ್ಥಗಿತಗೊಳಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಸರ್ಕಾರ ನಿಯಮ ಬದಲಿಸಿದೆ. ಕಾನೂನು ವ್ಯವಹಾರಗಳ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಈ ಪಿಂಚಣಿ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ತಿಳಿಸಿದೆ.