ಕೋವಿಡ್ ಹೊಸ ರೂಪಾಂತರ: ಈ 3 ದೇಶದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್
ನವದೆಹಲಿ, ನವೆಂಬರ್ 25: ಕೊರೊನಾ ವೈರಸ್ ಸೋಂಕಿನ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನೆಯಿಂದಾಗಿ ಕೇಂದ್ರ ಸರ್ಕಾರವು ದಕ್ಷಿಣ ಆಫ್ರಿಕಾ, ಹಾಂಗ್ಕಾಂಗ್, ಬೋಟ್ಸ್ವಾನದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್ ನಡೆಸಲು ಸೂಚನೆ ನೀಡಿದೆ. ಈ ದೇಶಗಳಲ್ಲಿ ಹೊಸ ಕೋವಿಡ್ ರೂಪಾಂತರವು ಕಾಣಿಸಿಕೊಂಡಿದ್ದು, ಕೊರೊನಾ ವೈರಸ್ ಸೋಂಕು ಏರಿಕೆ ಆಗುತ್ತಿದೆ.
ಕೇಂದ್ರ ಸರ್ಕಾರವು ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿದ್ದಾರೆ. ಕೋವಿಡ್ ಇರುವ ಪ್ರಯಾಣಿಕರ ಮಾದರಿಗಳನ್ನು ತಕ್ಷಣವೇ ಗೊತ್ತುಪಡಿಸಿದ ಜೀನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಪತ್ರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದಾರೆ.
ವರ್ಷಾಂತ್ಯದೊಳಗೆ ಅಂತಾರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ: ಕೇಂದ್ರ
"ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಈ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕಗಳನ್ನು ನಿಕಟವಾಗಿ ಟ್ರ್ಯಾಕ್ ಮಾಡಬೇಕು ಹಾಗೂ ಅವರನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸಬೇಕು," ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದರು.
ಯಾವುದು ಹೊಸ ಕೋವಿಡ್ ರೂಪಾಂತರ?
ಕೋವಿಡ್ನ ಹೊಸ ರೂಪಾಂತರವಾದ B.1.1.529 ದಕ್ಷಿಣ ಆಫ್ರಿಕಾ, ಹಾಂಗ್ಕಾಂಗ್, ಬೋಟ್ಸ್ವಾನದಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಿಂದಾಗಿ ಆ ದೇಶದಿಂದ ಆಗಮಿಸುವ ಜನರ ಮೇಲೆ ಹಲವಾರು ದೇಶಗಳು ಹೆಚ್ಚು ನಿಗಾ ವಹಿಸಲು ಆರಂಭ ಮಾಡಿದೆ. ಭಾರತ ದೇಶವು ಕೂಡಾ ಈ ಸುರಕ್ಷಿತ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. "ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್ಸಿಡಿಸಿ) ವರದಿಗಳ ಪ್ರಕಾರ ಕೋವಿಡ್ನ ಹೊಸ ರೂಪಾಂತರವಾದ B.1.1.529 ದಕ್ಷಿಣ ಆಫ್ರಿಕಾದಲ್ಲಿ ಆರು ಪ್ರಕರಣ, ಬೋಟ್ಸ್ವಾನದಲ್ಲಿ ಮೂರು ಪ್ರಕರಣ, ಹಾಂಗ್ಕಾಂಗ್ನಲ್ಲಿ ಒಂದು ಪ್ರಕರಣ ದಾಖಲು ಆಗಿದೆ," ಎಂದು ಮಾಹಿತಿ ನೀಡಿದರು.
ಕೊರೊನಾ 3ನೇ ಅಲೆ ಸರ್ವೇ: ಇನ್ನೆರಡು ತಿಂಗಳು ಮದುವೆ ಸೀಸನ್, ಎಚ್ಚರ
"ಈ ರೂಪಾಂತರದಿಂದಾಗಿ ಹಲವಾರು ಕೋವಿಡ್ ತಳಿಗಳು ರೂಪುಗೊಳ್ಳುವ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮ ಕೈಗೊಳ್ಳಬೇಕಾಗಿದೆ. ಇತ್ತೀಚೆಗೆ ವೀಸಾ ನಿರ್ಬಂಧಗಳು ಸಡಿಲಿಕೆ ಮತ್ತು ಅಂತರರಾಷ್ಟ್ರೀಯ ಪ್ರಯಾಣವನ್ನು ತೆರೆಯುವ ನಿರ್ಧಾರ ಮಾಡಲಾಗಿದೆ, ಈ ಇದು ದೇಶಕ್ಕೆ ಗಂಭೀರವಾದ ಸಾರ್ವಜನಿಕ ಆರೋಗ್ಯ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಅತ್ಯಗತ್ಯ," ಎಂದು ತಿಳಿಸಿದರು.
"ಕೋವಿಡ್ ಸೋಂಕಿನ ಹೊಸ ರೂಪಾಂತರಗಳು ಕಾಣಿಸಿಕೊಂಡಿರುವ ಹಿನ್ನೆಲೆಯಿಂದಾಗಿ ದಕ್ಷಿಣ ಆಫ್ರಿಕಾ, ಹಾಂಗ್ಕಾಂಗ್, ಬೋಟ್ಸ್ವಾನದಿಂದ ಪ್ರಯಾಣ ಮಾಡುವ ಜನರಿಗೆ ಹಾಗೂ ಪರಿಷ್ಕೃತ ಮಾರ್ಗಸೂಚಿಯನ್ನು ಸೂಚಿಸಿರುವ ಇತರೆ ಎಲ್ಲಾ ಅಪಾಯವಿರುವ ದೇಶಗಳಿಂದ ಬರುವ ಜನರಿಗೆ ಸೂಚಿಸಲಾದ ಎಲ್ಲಾ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು. 11.11.2021 ರಂದು ಈ ಸಚಿವಾಲಯವು ಹೊರಡಿಸಿದ ಅಂತರರಾಷ್ಟ್ರೀಯ ಆಗಮನದ ಮಾರ್ಗಸೂಚಿಯಲ್ಲಿ ಕಠಿಣ ಸ್ಕ್ರೀನಿಂಗ್ ಮತ್ತು ಪರೀಕ್ಷೆಗೆ ಒಳಪಡಿಸುವುದಕ್ಕೆ ಅಧಿಕ ಒತ್ತು ನೀಡಲಾಗಿದೆ. ಈ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಪರ್ಕಗಳನ್ನು ಸಹ ಮಾರ್ಗಸೂಚಿಗಳ ಪ್ರಕಾರ ನಿಕಟವಾಗಿ ಟ್ಯ್ರಾಕ್ ಮಾಡಬೇಕು ಮತ್ತು ಅವರನ್ನು ಕೂಡಾ ಪರೀಕ್ಷೆಗೆ ಒಳಪಡಿಸಬೇಕು," ಎಂದು ಮಾರ್ಗಸೂಚಿಯು ಹೇಳುತ್ತದೆ.
ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ವ್ಯಕ್ತಪಡಿಸಿದ್ದ ಕೇಂದ್ರ
"ಈ ವರ್ಷದ ಕೊನೆಯಾಗುವಷ್ಟರಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ," ಎಂದು ಇತ್ತೀಚೆಗೆ ಕೇಂದ್ರ ವಾಯುಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಹೇಳಿದ್ದಾರೆ. ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, "ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಆರಂಭ ಮಾಡಿದೆ," ಎಂದು ತಿಳಿಸಿದ್ದರು. "ಸರ್ಕಾರವು ಈಗ ಪರಿಸ್ಥಿತಿಯನ್ನು ಸಹಜತೆಗೆ ಮರಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕೊರೊನಾ ವೈರಸ್ ಸೋಂಕಿನ ಹೊಸ ಅಲೆಯಿಂದ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ," ಎಂದು ಕೂಡಾ ತಿಳಿಸಿದ್ದರು.
ಕೋವಿಡ್ ವೇಳೆ ನಿರ್ಬಂಧ ಸಡಿಲಿಕೆ ಮಾಡಿ ಗರಿಷ್ಠ 33 ಪ್ರತಿಶತದಷ್ಟು ಕಾರ್ಯ ನಿರ್ವಹಣೆ ಮಾಡಲು ಅನುಮತಿ ನೀಡಲಾಗಿತ್ತು. ಆ ಬಳಿಕ ಕಳೆದ ವರ್ಷ ಡಿಸೆಂಬರ್ನಲ್ಲಿ ಈ ಮಿತಿಯನ್ನು ಶೇಕಡ 80 ಕ್ಕೆ ಏರಿಕೆ ಮಾಡಲಾಯಿತು. ಆ ನಂತರ ದೇಶದಲ್ಲಿ ಕೊರೊನಾ ವೈರಸ್ ಸೋಂಖಿನ ಎರಡನೇ ಅಲೆಯು ಕಾಣಿಸಿಕೊಂಡಿತು. ಈ ವರ್ಷದ ಜೂನ್ನಲ್ಲಿ ಈ ದರವನ್ನು ಮತ್ತೆ ಶೇಕಡ 50 ಕ್ಕೆ ಇಳಿಕೆ ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)