ರಾಮಸೇತು ಮೂಲ ಪತ್ತೆಹಚ್ಚುವ ಸಂಶೋಧನೆಗೆ ಕೇಂದ್ರ ಸರ್ಕಾರ ಒಪ್ಪಿಗೆ
ನವದೆಹಲಿ, ಜನವರಿ 26: ರಾಮ ಸೇತುವಿನ ಮೂಲ ಕಂಡುಹಿಡಿಯುವ ನೀರಿನ ಆಳದ ಸಂಶೋಧನೆಯ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ 48 ಕಿಮೀ ಉದ್ದದ ಈ ದಿಣ್ಣೆಯ ಭಾಗದಲ್ಲಿ ಸಂಶೋಧನೆಗಳು ನಡೆಯಲಿವೆ.
ಈ ಸಂಶೋಧನೆಯ ಗುರಿಯ ಬಗ್ಗೆ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ವೈಜ್ಞಾನಿಕ ಸಂಶೋಧನೆಯ ಆಧಾರದಲ್ಲಿ ರಾಮ ಸೇತುವಿನ ಬಗ್ಗೆ ಜಗತ್ತು ತಿಳಿಯುವಂತಾಗಬೇಕು ಎಂದಿದ್ದಾರೆ.
ಭಾರತೀಯ ಪುರತತ್ವ ಇಲಾಖೆ (ಎಎಸ್ಐ) ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುವ ಪುರತತ್ವದ ಕೇಂದ್ರೀಯ ಸಲಹಾ ಮಂಡಳಿ ನೀರಿನ ಅಡಿಯಲ್ಲಿನ ಸಂಶೋಧನಾ ಯೋಜನೆಗೆ ಒಪ್ಪಿಗೆ ನೀಡಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (ಸಿಎಸ್ಐಆರ್) ಮತ್ತು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ (ಎನ್ಐಒ) ಗೋವಾಗಳು ಜಂಟಿಯಾಗಿ ಈ ಸಂಶೋಧನೆ ನಡೆಸಲಿದ್ದು, ರಾಮ ಸೇತು ಸೃಷ್ಟಿ ಹಿಂದಿನ ಪ್ರಕ್ರಿಯೆಯನ್ನು ಮತ್ತು ಈ ರಚನೆಯ ಸುತ್ತಲೂ ಮಾನವವಸತಿ ಚಟುವಟಿಕೆಗಳು ನಡೆದಿತ್ತೇ ಎಂಬುದನ್ನು ಅರಿತುಕೊಳ್ಳುವ ಉದ್ದೇಶ ಹೊಂದಿವೆ.
ರಾಮ ಸೇತು ಸ್ಥಳದಲ್ಲಿ ಲಭ್ಯವಾಗುವ ಪಳೆಯುಳಿಕೆಗಳು ಮತ್ತು ಇತರೆ ವಸ್ತುಗಳ ಆಧಾರದಲ್ಲಿ ಅಧ್ಯಯನ ನಡೆಸಿ ಅದರ ವಯಸ್ಸು ಅರಿಯುವ ಮೂಲಕ, ರಾಮಾಯಣ ನಡೆದ ಕಾಲಮಾನದೊಂದಿಗೆ ಹೋಲಿಸುವ ಪ್ರಯತ್ನ ನಡೆಯಲಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವರ್ಷವೇ ಈ ಸಂಶೋಧನೆ ಕೂಡ ಆರಂಭವಾಗಲಿದೆ.
ನೀರಿನ ಮಟ್ಟದಿಂದ 30-40 ಅಡಿ ಆಳದಲ್ಲಿರುವ ರಾಡಿಯ ಮಾದರಿಗಳನ್ನು ಸಂಗ್ರಹಿಸಲು ಸಿಂಧು ಸಾಧನಾ ಎಂಬ ಹಡಗನ್ನು ಬಳಸಿಕೊಳ್ಳಲಾಗುತ್ತದೆ. ಸಿಂಧು ಸಾಧನಾ ಎಂಬ ಸ್ವದೇಶಿ ನಿರ್ಮಿತ ಹಡಗು ಸಂಶೋಧನೆಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ಅದು ನೀರಿನಾಳದಲ್ಲಿ 45 ದಿನಗಳವರೆಗೂ ಇರಬಲ್ಲದು.