ಕೇಂದ್ರ ಇಂಧನ ಇಲಾಖೆಯ ಸಾಧನೆಯ ಪಥ ಬಿಚ್ಚಿಟ್ಟ ಪಿಯೂಶ್ ಗೋಯೆಲ್
ಕೇಂದ್ರ ಇಂಧನ ಸಚಿವಾಲಯದ ಯಶಸ್ಸಿನ ಗಾಥೆ ವಿವರಿಸಿದ ಪಿಯೂಶ್ ಗೋಯೆಲ್. ಉಜಾಲಾದಿಂದ ಉಚಿತ ಬಲ್ಪುಗಳ ವಿತರಣೆಯಿಂದ ದೇಶಕ್ಕೆ ಗ್ರಾಹಕರಿಗೆ ಲಾಭ. ಮುಚ್ಚುವ ಹಂತದಲ್ಲಿದ್ದ ಕಲ್ಲಿದ್ದಲು ಗಣಿಗಳಿಗೆ ಪುನಶ್ಚೇತನ. ಮುಂತಾದ ಯೋಜನೆಗಳನ್ನು ವಿವರಿಸಿರುವ ಗೋಯ
ನವದೆಹಲಿ, ಆಗಸ್ಟ್ 16: ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಇಂಧನ ಸಚಿವಾಲಯ ಸಾಧಿಸಿದ ಮಹತ್ವದ ಬೆಳವಣಿಗೆಯನ್ನು ಇಂಧನ ಸಚಿವ ಪಿಯೂಶ್ ಗೋಯೆಲ್ ಅವರು ಅಂಕಿ, ಅಂಶಗಳ ಸಮೇತ ಬಹಿರಂಗಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯ ಮೇರೆಗೆ ಇಂಧನ, ಕಲ್ಲಿದ್ದಲು, ನವೀನ ಹಾಗೂ ನವೀಕರಿಸಲ್ಪಡಬಹುದಾ ಇಂಧನ ಹಾಗೂ ಗಣಿಗಾರಿಕೆ ಇಲಾಖೆಗಳು ಸಮರ್ಥವಾಗಿ ಆಡಳಿತ ನಡೆಸಿ ದೇಶದ ಪ್ರಗತಿಗೆ ಕಾರಣವಾಗಿದ್ದನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ ಗೋಯೆಲ್.
ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ''2014ರಲ್ಲಿ ಕಲ್ಲಿದ್ದಲು ಹಗರಣದ ನಂತರ, ಇಲಾಖೆಗೆ ಆಗಿದ್ದ ನಷ್ಟವನ್ನು ಸಮರ್ಥವಾಗಿ ತುಂಬುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ಬಡವರ ಮನೆಗೂ ವಿದ್ಯುತ್ ಸೌಲಭ್ಯ ಕಲ್ಪಿಸುವಂಥ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ'' ಬಗ್ಗೆ ಗೋಯೆಲ್, ವಿವರಣೆ ನೀಡಿದ್ದಾರೆ.
ಮೊದಲಿಗೆ, ಉಜಾಲಾ ಮಿತ್ರ ಯೋಜನೆ ಮೂಲಕ ಹಲವಾರು ಮನೆಗಳಿಗೆ ಎಲ್ ಇಡಿ ಬಲ್ಬುಗಳನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ವಿದ್ಯುತ್ ನ ಮಹಾ ಉಳಿತಾಯಕ್ಕೆ ನಾಂದಿ ಹಾಡಲಾಗಿತ್ತು. ಇದರಿಂದ, ಗ್ರಾಹಕರ ವಿದ್ಯುತ್ ಬಿಲ್ ಅನ್ನೂ ಇಳಿಸುವ ಮೂಲಕ, ಜನರಿಗೆ ಆರ್ಥಿಕ ಉಳಿತಾಯದ ಅವಕಾಶವನ್ನೂ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.
ಅವರು ವಿವರಿಸಿರುವ ವಿಚಾರಗಳ ಆಯ್ದ ಭಾಗ ಇಲ್ಲಿದೆ:
- ಕಳೆದ ಯುಪಿಎ ಸರ್ಕಾರದಲ್ಲಿ ನಡೆದಿದ್ದ ಕಲ್ಲಿದ್ದಲು ಹಗರಣದಿಂದಾಗಿ 2014ರ ಹೊತ್ತಿಗೆ ಮುಚ್ಚುವ ಹಂತ ತಲುಪಿದ್ದ 29 ಕಲ್ಲಿದ್ದಲು ಗಣಿಗಾರಿಕೆಗಳಿಗೆ ಕಾಯಕಲ್ಪ ನೀಡಿ ಸುಮಾರು 1.22 ಲಕ್ಷ ಕೋಟಿ ರು. ಆದಾಯ ತಂದುಕೊಡುವಂಥ ಆ ಕಲ್ಲಿದ್ದಲು ಗಣಿಗಾರಿಕೆಗಳನ್ನು ಪುನಶ್ಚೇತನಗೊಳಿಸಲಾಗಿದೆ.
- ಕಲ್ಲಿದ್ದಲು ಗಣಿಗಾರಿಕೆಯ ಸಾಧಕ- ಬಾಧಕಗಳನ್ನು, ಅವುಗಳ ಅಭಿವೃದ್ಧಿ ಪಥವನ್ನು ಅರಿಯಲು ಹಾಗೂ ವಿದ್ಯುತ್ ಸರಬರಾಜಿನ ಕ್ರಮಗಳು, ವಿದ್ಯುತ್ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ತಮ್ರಾ ಹಾಗೂ ತರಂಗ್ ಎಂಬ ಆ್ಯಪ್ ಗಳ ಮೂಲಕ ಜನಸಾಮಾನ್ಯರಿಗೂ ಸರ್ಕಾರಿ ಯೋಜನೆಗಳ ಮಾಹಿತಿಗಳು ಲಭ್ಯವಾಗುವಂತಾಗಿ, ಇಲಾಖೆಯಲ್ಲಿ ಆಡಳಿತಕ್ಕೆ ಹೆಚ್ಚಿನ ಪಾರದರ್ಶಕತೆ ತರಲಾಯಿತು.
-2015ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ವಾಗ್ದಾನದಂತೆ, 1000 ದಿನದಲ್ಲಿ ಯಾವುದೇ ಸಂಪರ್ಕವಿರದ ಅತಿ ದೂರದ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ನೀಡಲಾಯಿತು. ಇವಿಷ್ಟೇ ಅಲ್ಲದೆ, ಆರಂಭಿಕ ಹೆಜ್ಜೆಯಲ್ಲಿ 18,452 ಹಳ್ಳಿಗಳಲ್ಲಿ 13,511 ಹಳ್ಳಿಗಳಿಗೆ ವಿದ್ಯುತ್ ಯೋಜನೆಗಳನ್ನು ನೀಡಲಾಯಿತು ಎಂದು ತಿಳಿಸಿದರು.
'ವೇಗ, ಕೌಶಲ್ಯ ಹಾಗೂ ಮಾನದಂಡ' - ಈ ಮಂತ್ರದೊಂದಿಗೆ, ಜನರ ಮುಂದೆ ಮತ್ತಷ್ಟು, ಮಗದಷ್ಟು ಪಾರದರ್ಶಕವಾಗಿ ಇಂಧನ ಇಲಾಖೆಯು ಕೆಲಸ ಮಾಡಿದೆ.