ವಿದ್ಯಾರ್ಥಿಗಳ ತಂಟೆಗೆ ಬಂದ್ರೆ ಹುಷಾರ್ ಎಂದ ಕೇಜ್ರಿವಾಲ್!
ನವದೆಹಲಿ, ಫೆಬ್ರವರಿ, 23: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕೇಂದ್ರ ಸರ್ಕಾರದ ಸಚಿವರೇ ನೇರ ಹೊಣೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯ ಜಂತರ್ ಮಂತರ್ ನಲ್ಲಿ ವೇಮುಲಾ ಆತ್ಮಹತ್ಯೆಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮಂಗಳವಾರ ಸಾಥ್ ನೀಡಿದ ಕೇಜ್ರಿವಾಲ್ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದರು.[ಹೈದ್ರಾಬಾದ್ ನಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ?]
ರೋಹಿತ್ ಸಾವಿಗೆ ಕೇಂದ್ರ ಸಚಿವರೇ ಕಾರಣ ಮತ್ತು ಆತ್ಮಹತ್ಯೆಗೆ ಪರೋಕ್ಷವಾಗಿ ಒತ್ತಡ ಹೇರಿದ್ದರು ಎಂದು ಆರೋಪಿಸಿದರು. ಸಚಿವರ ವಿರುದ್ಧ ಕೇಸ್ ದಾಖಲಿಸಿದ್ದರೂ, ಇದುವರೆಗೂ ಯಾರನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದು ಪ್ರಶ್ನೆ ಮಾಡಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಸರ್ಕಾರಗಳು ಇದಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.[ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ ಎಂದ ನರೇಂದ್ರ ಮೋದಿ]
ನರೇಂದ್ರ ಮೋದಿ ಮತ್ತು ಅವರ ಸರ್ಕಾರ ವಿದ್ಯಾರ್ಥಿಗಳ ಧ್ವನಿ ಅಡಗಿಸಲು ನಿರಂತರ ಯತ್ನ ಮಾಡುತ್ತಿದೆ. ನೀವು ವಿದ್ಯಾರ್ಥಿಗಳ ಮಾತಿಗೆ ಬೆಲೆ ಕೊಡಿ ಇಲ್ಲವಾದರೆ ನಿಮ್ಮ ಕುರ್ಚಿಯೇ ಅಲುಗಾಡಬಹುದು ಎಂದು ಕೇಜ್ರಿವಾಲ್ ಅಬ್ಬರಿಸಿದರು.
ಜನವರಿ 17 ರಂದು ಹೈದ್ರಾಬಾದ್ನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ಮೇಲೆ ದೇಶದ ತುಂಬೆಲ್ಲ ಪ್ರತಿಭಟನೆಗಳು ಆರಂಭವಾಗಿದ್ದು ಘಟನೆಗೆ ಇನ್ನು ತಾರ್ಕಿಕ ಅಂತ್ಯ ಸಿಕ್ಕಿಲ್ಲ.