ಇವರೇ, 20ವರ್ಷದ ಇತಿಹಾಸದಲ್ಲಿ ಬಂಧನಕ್ಕೊಳಗಾದ 3 ಕೇಂದ್ರ ಸಚಿವರು
ಕೇಂದ್ರದ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರು ಬಂಧನಕ್ಕೊಳಗಾದ ಉದಾಹರಣೆಗಳು ದೇಶದ ಇತಿಹಾಸದಲ್ಲಿ ವಿರಳ. ಸುಮಾರು ಇಪ್ಪತ್ತು ವರ್ಷಗಳ ನಂತರ ಕೇಂದ್ರದ ಸಚಿವರೊಬ್ಬರು ಮಹಾರಾಷ್ಟ್ರದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಇದಾದ ಮೇಲೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾ ಆಘಾಡಿ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ಆವೇಶದಿಂದ ಅಸಂವಿಧಾನಿಕ ಪದಪ್ರಯೋಗ ಮಾಡಿದ್ದಕ್ಕಾಗಿ ಕೇಂದ್ರ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಇಲಾಖೆಯ ಸಚಿವ ನಾರಾಯಣ ರಾಣೆಯವರನ್ನು ರಾಜ್ಯದ ರತ್ನಗಿರಿ ಪೊಲೀಸರು ಬಂಧಿಸಿದ್ದರು.
Explained: ಭಾರತದಲ್ಲಿ ಕೇಂದ್ರ ಸಂಪುಟ ಸಚಿವರ ಬಂಧನಕ್ಕೆ ನಿಯಮಗಳೇನು?
ನಾರಾಯಣ ರಾಣೆಯವರ ಹೇಳಿಕೆಯನ್ನು ಬಿಜೆಪಿ ಬೆಂಬಲಿಸುವುದಿಲ್ಲ, ಆದರೆ ನೂರಕ್ಕೆ ನೂರು ಅವರ ಪರವಾಗಿ ನಿಲ್ಲುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ರಾಣೆ ಬಂಧನ ಪ್ರಕರಣವು, ಬಿಜೆಪಿ ಮತ್ತು ಶಿವಸೇಯ ನಡುವೆ ಭಾರೀ ರಾಜಕೀಯ ಮೇಲಾಟಕ್ಕೆ ಕಾರಣವಾಗಲಿದೆ.
ನೇರವಾಗಿ ಮೋದಿ ಸರಕಾರದ ವಿರುದ್ದ ತೊಡೆತಟ್ಟಿದ ಉದ್ಧವ್ ಠಾಕ್ರೆ!
ಇಪ್ಪತ್ತು ವರ್ಷಗಳ ಹಿಂದೆ ಅಂದರೆ, 2001ರಲ್ಲಿ ಇದೇ ರೀತಿ ಕೇಂದ್ರದ ಇಬ್ಬರು ಸಚಿವರ ಬಂಧನವಾಗಿತ್ತು. ಆ ವೇಳೆ, ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ ಕಾರ್ಯನಿರ್ವಹಿಸುತ್ತಿದ್ದರೆ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕರುಣಾನಿಧಿ ಇದ್ದರು.
ಠಾಕ್ರೆ ಭಾಷಣ ಮಾಡುವ ವೇಳೆ, ವೇದಿಕೆಯಲ್ಲಿ ನಾನಿದ್ದರೆ, ಕಪಾಳಕ್ಕೆ ಬಾರಿಸುತ್ತಿದ್ದೆ ಎಂದಿದ್ದ ರಾಣೆ
ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದ ವೇಳೆ, ದೇಶಕ್ಕೆ ಯಾವ ಇಸವಿಯಲ್ಲಿ ಸ್ವಾತಂತ್ರ್ಯ ಬಂದು ಎನ್ನುವ ವಿಚಾರ ನೆನಪಾಗದೇ ತಮ್ಮ ಹಿಂದೆ ಇದ್ದವರನ್ನು ಮಹಾ ಸಿಎಂ ಠಾಕ್ರೆ ಕೇಳಿದ್ದರು. ಈ ವಿಚಾರವನ್ನು ಇಟ್ಟುಕೊಂಡು ರಾಣೆ, ಸಿಎಂ ಠಾಕ್ರೆ ವಿರುದ್ದ ಜನಾಶೀರ್ವಾದ ಯಾತ್ರೆಯ ವೇಳೆ ಗುಡುಗಿದ್ದರು. ಠಾಕ್ರೆ ಭಾಷಣ ಮಾಡುವ ವೇಳೆ, ವೇದಿಕೆಯಲ್ಲಿ ನಾನಿದ್ದರೆ ಅವರಿಗೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ರಾಣೆ ಹೇಳಿದ್ದರು. ಈ ವಿಚಾರದಲ್ಲಿ ಅವರ ಬಂಧನವಾಗಿ, ಮಂಗಳವಾರ (ಆ 24) ತಡರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ರೀತಿ ಕೇಂದ್ರ ಸಚಿವರ ಬಂಧನವಾಗುತ್ತಿರುವುದು ಇದು ಮೂರನೆಯ ಬಾರಿ.
ಶ್ರೀಪೆರಂಬುದೂರು ಲೋಕಸಭಾ ಕ್ಷೇತ್ರದ ಹಾಲೀ ಸದಸ್ಯರಾಗಿರುವ ಟಿ.ಆರ್.ಬಾಲು
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರಕಾರ 10.10.1999ರಲ್ಲಿ ಅಧಿಕಾರಕ್ಕೇರಿತ್ತು. ಹದಿನಾರು ಪಕ್ಷಗಳ ಮಹಾಮೈತ್ರಿ ಕೂಟದ ಸರಕಾರ ಇದಾಗಿತ್ತು. ಇದರಲ್ಲಿ ತಮಿಳುನಾಡಿನ ಎಐಎಡಿಎಂಕೆ, ಪಿಎಂಕೆ, ಮೂಪನಾರ್ ಕಾಂಗ್ರೆಸ್, ಡಿಎಂಕೆ ಕೂಡಾ ಪಾಲುದಾರ ಪಕ್ಷವಾಗಿತ್ತು. ಶ್ರೀಪೆರಂಬುದೂರು ಲೋಕಸಭಾ ಕ್ಷೇತ್ರದ ಹಾಲೀ ಸದಸ್ಯರಾಗಿರುವ ಟಿ.ಆರ್.ಬಾಲು ಅವರು ಅಟಲ್ ಸರಕಾರದಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯ ಸಚಿವರಾಗಿದ್ದರು. ಇವರನ್ನು ಜೂನ್ 30, 2001ರಲ್ಲಿ ಚೆನ್ನೈನಲ್ಲಿ ಬಂಧಿಸಲಾಗಿತ್ತು.
ಕೇಂದ್ರದ ಇನ್ನೊಬ್ಬರು ಸಚಿವರಾಗಿದ್ದ ಮುರುಸೋಳಿ ಮಾರನ್ ಬಂಧನ ಕೂಡಾ ನಡೆದಿತ್ತು
ಇದೇ ವೇಳೆ, ಕೇಂದ್ರದ ಇನ್ನೊಬ್ಬರು ಸಚಿವರಾಗಿದ್ದ ಮುರುಸೋಳಿ ಮಾರನ್ ಅವರ ಬಂಧನ ಕೂಡಾ ನಡೆದಿತ್ತು. ಮಾರನ್ ಅವರು ವಾಜಪೇಯಿ ಸರಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಚಿವರಾಗಿದ್ದರು. ಡಿಎಂಕೆ ಪಕ್ಷವನ್ನು ಪ್ರತಿನಿಧಿಸುವ ಇವರನ್ನು ಕೂಡಾ ಚೆನ್ನೈನಲ್ಲಿ ಜೂನ್ 2001ರಲ್ಲಿ ಬಂಧಿಸಲಾಗಿತ್ತು. ತಡರಾತ್ರಿ ಸಿಎಂ ಆಗಿದ್ದ ಕರುಣಾನಿಧಿ, ಮುರುಸೋಳಿ ಮಾರನ್ ಮತ್ತು ಟಿ.ಆರ್.ಬಾಲು ಬಂಧನವಾಗಿತ್ತು. ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾಕ್ಕೆ ಇದು ಕಾರಣವಾಗಿತ್ತು.
ಕರುಣಾನಿಧಿ, ಮಾರನ್ ಮತ್ತು ಬಾಲು ಅವರ ಬಂಧನವಾಗಿತ್ತು
12 ಕೋಟಿ ಫ್ಲೈ ಓವರ್ ಹಗರಣಕ್ಕೆ ಸಂಬಂಧಿಸಿದಂತೆ ಕರುಣಾನಿಧಿ, ಮಾರನ್ ಮತ್ತು ಬಾಲು ಅವರ ಬಂಧನವಾಗಿತ್ತು. ಈ ವೇಳೆ ನಡೆದ ಭಾರೀ ಗದ್ದಲದಲ್ಲಿ ಗಾಯಗೊಂಡು ಮುರುಸೋಳಿ ಮಾರನ್ ಆಸ್ಪತ್ರೆಗೆ ದಾಖಲಾಗಿದ್ದರು. ವಾರಂಟ್ ತೋರಿಸದೇ, ಕೇಂದ್ರ ಸಚಿವರೂ ಅನ್ನದೇ ಚೆನ್ನೈ ಪೊಲೀಸರು ಮೂವರನ್ನು ಹೀನಾಯವಾಗಿ ನಡೆಸಿಕೊಂಡರು ಎನ್ನುವ ಆಪಾದನೆ ಆ ವೇಳೆ ಕೇಳಿ ಬಂದಿತ್ತು. ಡಿಎಂಕೆ ಪಕ್ಷ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು.