ಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 4: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಗೆ ಸಂಬಂಧಿಸಿದಂತೆ ಐದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರುವ ಶನಿವಾರ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಕೇರಳ, ಕರ್ನಾಟಕ, ಒಡಿಶಾ, ತಮಿಳುನಾಡು, ಮಿಜೋರಾಂ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊವಿಡ್-19 ಸೋಂಕಿತ ಮತ್ತು ಸಾವಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸ ರೂಪಾಂತರ ಓಮಿಕ್ರಾನ್ ಹರಡುವಿಕೆ ಭೀತಿ ನಡುವಿನ ಈ ಬೆಳವಣಿಗೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ದೇಶದ ಮೂರನೇ ಓಮಿಕ್ರಾನ್ ಪ್ರಕರಣ ಗುಜರಾತ್ನಲ್ಲಿ ಪತ್ತೆ
ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರವಾಸಿಗರ ಮೇಲೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚು ವರದಿ ಆಗುತ್ತಿರುವ ಸ್ಥಳಗಳನ್ನು ಗುರುತಿಸಬೇಕು. ಎಲ್ಲ ಕೊರೊನಾವೈರಸ್ ಸೋಂಕಿತರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸುವುದಕ್ಕಾಗಿ ರವಾನಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ.
ಹೊಸ ಪ್ರಕರಣಗಳ ಸಂಖ್ಯೆ ಶೇ.727ರಷ್ಟು ಹೆಚ್ಚಳ
ಕಳೆದ ನವೆಂಬರ್ 26 ರಿಂದ ಡಿಸೆಂಬರ್ 2ರ ನಡುವಿನ ಒಂದು ವಾರದ ಅವಧಿಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. ಜಮ್ಮು ಕಾಶ್ಮೀರದಲ್ಲಿ ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಶೇ.727ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.152ರಷ್ಟು ಏರಿಕೆಯಾಗಿದೆ . ಮೀಜೋರಾಂನ ಸೈಹಾದಲ್ಲಿ ಶೇ.237ರಷ್ಟು ಹೆಚ್ಚಳವಾಗಿದ್ದು, ಒಡಿಶಾದ ಧೆಂಕಾನಲ್ ಪ್ರದೇಶದಲ್ಲಿ ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಶೇ.667ರಷ್ಟು ಏರಿಕೆಯಾಗಿದೆ.
ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿನಲ್ಲಿ ಏರಿಕೆ
ಭಾರತದಲ್ಲಿ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕೊರೊನಾವೈರಸ್ ಸೋಂಕು ತಗುಲಿದ ರೋಗಿಗಳ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಕೇರಳದಲ್ಲಿ ಕೊವಿಡ್-19 ಸಂಬಂಧಿತ ಸಾವಿನ ಪ್ರರಣ ಏರಿಕೆ ಆಗುತ್ತಿರುವುದರ ಬಗ್ಗೆಯೂ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ನವೆಂಬರ್ 19 ರಿಂದ 25ರ ಅವಧಿಯಲ್ಲಿ ಥ್ರಿಸ್ಸುರ್ ಜಿಲ್ಲೆಯು 12 ಕೊವಿಡ್-19 ಸಾವಿನ ಪ್ರಕರಣಗಳನ್ನು ವರದಿ ಮಾಡಿತ್ತು. ಅದರ ಮರು ವಾರವೇ ಈ ಸಾವಿನ ಸಂಖ್ಯೆಯು 128ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ 70 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರೆ, ಮರು ವಾರವೇ ಈ ಸಾವಿನ ಸಂಖ್ಯೆಯು 109ಕ್ಕೆ ಏರಿಕೆಯಾಗಿದೆ.
ಓಮಿಕ್ರಾನ್ ಸೋಂಕು ಮೂರು ಪಟ್ಟು ಅಪಾಯಕಾರಿ
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಜಗತ್ತಿನ 38 ರಾಷ್ಟ್ರಗಳಲ್ಲಿ ಈವರೆಗೂ 674 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಈ ಹಿಂದೆ ಅಪಾಯಕಾರಿ ಎಂದು ತಜ್ಞರು ಹೇಳಿದ್ದ ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಓಮಿಕ್ರಾನ್ ಡೇಂಜರ್ ಎಂದು ಹೇಳಲಾಗುತ್ತಿದೆ. ಓಮಿಕ್ರಾನ್ ರೂಪಾಂತರವು ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ಭಾರತದಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ಕೊರೊನಾವೈರಸ್ ಮಾರ್ಗಸೂಚಿ ಪಾಲಿಸಲು ಆದೇಶ
ಭಾರತದಲ್ಲಿ ಕೊರೊನಾವೈರಸ್ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣ ವರದಿಯಾಗುತ್ತಿದ್ದಂತೆ, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಕೊವಿಡ್-19 ನಿಯಮಗಳನ್ನು ಪಾಲಿಸುವಂತೆ ಉಲ್ಲೇಖಿಸಲಾಗಿದೆ. ಜನ ನಿಬಿಡ ಪ್ರದೇಶಗಳಿಂದ ಅಂತರ ಕಾಯ್ದುಕೊಳ್ಳುವುದು, ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲಿಸುವುದು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದರ ಮೂಲಕ ಓಮಿಕ್ರಾನ್ ಸೇರಿದಂತೆ ಎಲ್ಲ ಕೊವಿಡ್-19 ತಳಿಗಳಿಂದ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.
Recommended Video