5 ಸಾವಿರ ಟನ್ ತೊಗರಿ ಬೇಳೆ ಆಮದಿಗೆ ಕೇಂದ್ರ ನಿರ್ಧಾರ
ನವದೆಹಲಿ, ಜನವರಿ , 06: ಬೇಳೆ ಕಾಳು ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅನೇಕ ಕ್ರಮ ತೆಗೆದುಕೊಂಡಿದ್ದರೂ ಗಣನೀಯ ಪ್ರಮಾಣದ ಇಳಿಕೆಯಾಗಿಲ್ಲ. ಈ ವರ್ಷವೂ ತೊಗರಿ ಇಳುವರಿಯಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 5,000 ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಆಮದು ಮಾಡಿಕೊಂಡ ಬೇಳೆಯನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಿದೆ. ಇನ್ನೊಂದೆಡೆ ವಿವಿಧ ರಾಜ್ಯಗಳಲ್ಲಿನ ಜಪ್ತಿ ಮಾಡಿಕೊಂಡಿದ್ದ 1.31 ಲಕ್ಷ ಟನ್ ಬೇಳೆ ಕಾಳು ಗಳಲ್ಲಿ 1.12 ಲಕ್ಷ ಟನ್ಗಳಷ್ಟನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದ್ದು ಉಳಿದವನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ.[ಆಯುಧ ಪೂಜೆ ಕುಂಬ್ಳಕಾಯಿ ತಲೆ ಮೇಲೆ ಒಡೆದಂಗಾಯ್ತು!]
ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ತೊಗರಿ ಮತ್ತು ಉದ್ದಿನ ಬೇಳೆ ಪ್ರತಿ ಕೆ.ಜಿಗೆ 200ರು. ಗಡಿ ಮೀರಿದ್ದವು. ದರ ನಿಯಂತ್ರಣಕ್ಕೆ ಸರ್ಕಾರ ತೆಗೆದು ಕೊಂಡ ಹಲವು ಕಠಿಣ ಕ್ರಮಗಳ ಪರಿಣಾಮ ಇದೀಗ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 160-170 ರು. ಆಸುಪಾಸಿನಲ್ಲಿದೆ. [ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ದೇಶಿ ಮಾರುಕಟ್ಟೆಯ ಬೇಡಿಕೆ ಪೂರೈಕೆ, ಬೆಲೆ ನಿಯಂತ್ರಣ ಮತ್ತು ಗ್ರಾಹಕರ ಮೇಲಿನ ಹೊರೆ ತಪ್ಪಿಸಲು ಸರ್ಕಾರ ಈ ನಿರ್ಧಾರ ತಳೆದಿದೆ. ಕಳೆದ ವರ್ಷವೂ ಇದೇ ಪ್ರಮಾಣದ ತೊಗರಿ ಬೇಳೆ ಆಮದು ಮಾಡಿಕೊಳ್ಳಲಾಗಿತ್ತು. ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆ ಜಾಗತಿಕ ಟೆಂಡರ್ ಕರೆಯಲಿದ್ದು ಇದೇ 18ರಿಂದ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದ್ದು ಫೆಬ್ರುವರಿ 7ರಿಂದ ಮಾರ್ಚ್ 15ರ ಒಳಗೆ ಸಂಪೂರ್ಣ ಪ್ರಮಾಣದಲ್ಲಿ ಮ್ಯಾನ್ಮಾರ್, ಮಲಾವಿ, ಮೊಜಾಂಬಿಕ್ ನಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಬೇಳೆ ಕಾಳು ದರ ತೀವ್ರ ತೆರೆನಾದ ಏರಿಕೆಗೆ ಮಾರುಕಟ್ಟೆಯಲ್ಲಿನ ಕೃತಕ ಅಭಾವ ಸೃಷ್ಟಿಯೇ ಕಾರಣ ಎಂಬುದನ್ನು ಅರಿತ ಕೇಂದ್ರ ಸರ್ಕಾರ ದೇಶದ ಎಲ್ಲೆಡೆ ಗೋದಾಮುಗಳ ಮೇಲೆ ದಾಳಿ ನಡೆಸಿತ್ತು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ದರ ಇಳಿಕೆಯಾಗದ ಹಿನ್ನೆಲೆಯಲ್ಲಿ ಇದೀಗ ಅನಿವಾರ್ಯವಾಗಿ ಆಮದು ಮಾಡುಕೊಳ್ಳಲು ಮುಂದಾಗಿದ್ದು ಟೆಂಡರ್ ಕರೆದಿದೆ. ಜತೆಗೆ ಜಪ್ತಿ ಮಾಡಿದ್ದ ಬೇಳೆ ಕಾಳುಗಳನ್ನು ಹರಾಜು ಹಾಕುತ್ತಿದೆ.