ಅಸ್ಸಾಂ ಪ್ರವಾಹಕ್ಕೆ ನಲುಗಿದ ಜನ: ಪ್ರಧಾನಿ ಮೋದಿ ಪರಿಹಾರದ ಭರವಸೆ
ನವದೆಹಲಿ, ಜೂನ್23: ಪ್ರವಾಹ ಪೀಡಿತ ಅಸ್ಸಾಂಗೆ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭರವಸೆ ನೀಡಿದ್ದಾರೆ ಮತ್ತು ಪ್ರವಾಹದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ತಂಡಗಳು ಅಸ್ಸಾಂನಲ್ಲಿವೆ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿನ ಪ್ರವಾಹದಲ್ಲಿ ಸಿಲುಕಿದವರನ್ನು ಸ್ಥಳಾಂತರಿಸಲು ಭಾರತೀಯ ವಾಯುಪಡೆಯು 250 ಬಾರಿ ಹಾರಾಟ ನಡೆಸಿದೆ ಎಂದು ಟ್ವಿಟರ್ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಅಸ್ಸಾಂ ಪ್ರವಾಹ ಪರಿಸ್ಥಿತಿ ಚಿಂತಾಜನಕ: ಇದುವರೆಗೆ 55 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತ
"ಕಳೆದ ಕೆಲವು ದಿನಗಳಿಂದ, ಭಾರಿ ಮಳೆಯಿಂದಾಗಿ ಅಸ್ಸಾಂನ ಕೆಲವು ಭಾಗಗಳಲ್ಲಿ ಪ್ರವಾಹ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಅಸ್ಸಾಂನ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲಾ ನೆರವು ನೀಡಲು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆ ಮತ್ತು ಎನ್ಡಿಆರ್ಎಫ್ ತಂಡಗಳು ಸಂತ್ರಸ್ತರನ್ನು ಸ್ಥಳಾಂತರಿಸಲು ಕಾರ್ಯಾಚರಣೆ ನಡೆಸುತ್ತಿವೆ ಮತ್ತು ಸಂತ್ರಸ್ತರಿಗೆ ಸಹಾಯ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. "ತೆರವು ಪ್ರಕ್ರಿಯೆಯ ಭಾಗವಾಗಿ ವಾಯುಪಡೆಯು 250 ಕ್ಕೂ ಹೆಚ್ಚು ಬಾರಿ ಹಾರಾಟ ನಡೆಸಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ವೈರಲ್ ವಿಡಿಯೋ; ಅಸ್ಸಾಂ ಪ್ರವಾಹ, ಮಗು ರಕ್ಷಿಸಿ ಬುಟ್ಟಿಯಲ್ಲಿ ಸಾಗಣೆ
ಪ್ರವಾಹದಿಂದ ಈವರೆಗೆ 101 ಜನ ಸಾವು
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳಿಂದ ಇದುವರೆಗೆ 17,500 ಜನರನ್ನು ರಕ್ಷಿಸಲಾಗಿದೆ. ಈ ಪೈಕಿ ಗುರುವಾರ ಸುಮಾರು 900 ಜನರನ್ನು ರಕ್ಷಿಸಲಾಗಿದೆ. ಏಜೆನ್ಸಿ ಪ್ರಕಾರ, ಪ್ರವಾಹ ಪೀಡಿತ ರಾಜ್ಯಗಳ 14 ಜಿಲ್ಲೆಗಳಲ್ಲಿ ಎನ್ಡಿಆರ್ಎಫ್ನ 26 ತಂಡಗಳನ್ನು ನಿಯೋಜಿಸಲಾಗಿದೆ.
ಗುರುವಾರದವರೆಗೆ ಅಸ್ಸಾಂನಲ್ಲಿ 54.5 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ. ರಾಜ್ಯಾದ್ಯಂತ 12 ಹೊಸ ಸಾವು ದಾಖಲಾಗಿದ್ದು, ಇದುವರೆಗೆ ಸಾವಿನ ಸಂಖ್ಯೆ 101 ಕ್ಕೆ ಏರಿದೆ.
ಹಸಾವೋ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ
ದಿಮಾ ಹಸಾವೊ ಜಿಲ್ಲೆಯ ಬೆಥನಿ ಗ್ರಾಮದಲ್ಲಿ ಭೂಕುಸಿತಗಳು ವರದಿಯಾಗಿವೆ ಮತ್ತು ಕರೀಮ್ಗಂಜ್ನ ಬರ್ತಾಲ್ನಲ್ಲಿ ವಿವಿಧ ಸ್ಥಳಗಳಲ್ಲಿ 19 ಮನೆಗಳಿಗೆ ಹಾನಿಯಾಗಿದೆ.
ಕಾಮ್ರೂಪ್ ಜಿಲ್ಲೆಯಲ್ಲಿ ಪ್ರವಾಹವು 218 ರಸ್ತೆಗಳು ಮತ್ತು 20 ಸೇತುವೆಗಳನ್ನು ಹಾನಿಗೊಳಿಸಿದೆ, ಜೊತೆಗೆ ಎರಡು ಕೆರೆ ಏರಿಗಳು ಒಡೆದಿವೆ. 99,026 ಹೆಕ್ಟೇರ್ ಬೆಳೆ ಮತ್ತು 33,17,086 ಪ್ರಾಣಿಗಳು ಪ್ರವಾಹದಿಂದ ಬಾಧಿತವಾಗಿದೆ. ಬಕ್ಸಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ಧುಬ್ರಿ, ಕೊಕ್ರಜಾರ್, ಲಖಿಂಪುರ, ಮಜುಲಿ, ಮೋರಿಗಾಂವ್, ನಲ್ಬರಿ ಮತ್ತು ಉದಲ್ಗುರಿಗಳಲ್ಲಿಯೂ ಭೂಕುಸಿತದ ವರದಿಯಾಗಿದೆ.
ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳ
ಕೇಂದ್ರ ಜಲ ಆಯೋಗದ ಪ್ರಕಾರ ಕೊಪಿಲಿ ನದಿ ನಾಗಾಂವ್ ಜಿಲ್ಲೆಯ ಕಂಪುರ, ಶಿವಸಾಗರದ ದಿಸಾಂಗ್ ನದಿ, ನಿಮತಿಘಾಟ್ನಲ್ಲಿ ಬ್ರಹ್ಮಪುತ್ರ, ತೇಜ್ಪುರ, ಗೋಲ್ಪಾರಾ ಮತ್ತು ಧುಬ್ರಿ, ಕರೀಂಗಂಜ್ನಲ್ಲಿ ಬರಾಕ್ ನದಿ, ಕ್ಯಾಚಾರ್ ಮತ್ತು ಹೈಲಕಂಡಿ ಜಿಲ್ಲೆ ಮತ್ತು ಕುಶಿಯಾರಾದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೆಲವು ಸ್ಥಳಗಳಲ್ಲಿ ಪ್ರವಾಹದ ನೀರು ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಸಿಲ್ಚಾರ್ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು ಮತ್ತು ಆಹಾರ ಪದಾರ್ಥಗಳು, ನೀರಿನ ಬಾಟಲಿಗಳು ಮತ್ತು ಅಗತ್ಯ ವಸ್ತುಗಳನ್ನು ಹೊಂದಿರುವ ಪ್ಯಾಕೆಟ್ಗಳನ್ನು ಹೆಲಿಕಾಪ್ಟರ್ಗಳ ಮೂಲಕ ಗುರುವಾರ ಸರಬರಾಜು ಮಾಡಲಾಗಿದೆ ಎಂದು ಹೇಳಿದರು.
"ಸಾಮಾನ್ಯ ಪರಿಹಾರದ ಹೊರತಾಗಿ ಮುಂದಿನ ದಿನಗಳಲ್ಲಿ ಪ್ರವಾಹದಲ್ಲಿ ಸಿಕ್ಕಿಬಿದ್ದ ಜನರಿಗೆ ಇದೇ ರೀತಿ ಆಹಾರ ಸಾಮಗ್ರಿಗಳಲ್ಲಿ ಒದಗಿಸಲು ಯೋಚಿಸಿದ್ದೇವೆ. ನಮ್ಮ ಸರ್ಕಾರ ಬರಾಕ್ ಕಣಿವೆಯ ಜನರ ಜೊತೆ ಇರುತ್ತದೆ." ಎಂದು ಹೇಳಿದ್ದಾರೆ.
Recommended Video