ಷರತ್ತುಗಳು ಅನ್ವಯ: ಭಾರತದಿಂದ ಗೋಧಿ ರಫ್ತಿಗೆ ಕೇಂದ್ರದ ನಿರ್ಣಯ
ನವದೆಹಲಿ, ಮೇ 17: ಭಾರತದಲ್ಲೇ ಆಹಾರ ಪೂರೈಕೆ ಕೊರತೆ ಸೃಷ್ಟಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರವು ಗೋಧಿ ರಫ್ತುವಿನ ಮೇಲೆ ನಿರ್ಬಂಧ ವಿಧಿಸಿತ್ತು. ಆದರೆ ಈಗ ಅದೇ ನಿರ್ಬಂಧವನ್ನು ಕೊಂಚ ಸಡಿಲಗೊಳಿಸಲು ಸರ್ಕಾರ ನಿರ್ಧರಿಸಿದೆ.
ಕಳೆದ ಮೇ 13ರಂದು ಅಥವಾ ಅದಕ್ಕೂ ಪೂರ್ವದಲ್ಲಿ ಕಸ್ಟಮ್ಸ್ ಪರೀಕ್ಷೆಗಾಗಿ ನೀಡಿದ ಗೋಧಿಯ ಸರಕು ಅಥವಾ ರವಾನೆಗಾಗಿ ಈಗಾಗಲೇ ಹಸ್ತಾಂತರಿಸಲಾಗಿರುವ ಹಾಗೂ ಅದರ ವ್ಯವಸ್ಥೆಯಡಿ ನೋಂದಾಯಿಸಲಾಗಿರುವ ಗೋಧಿ ಸರಕನ್ನು ರಫ್ತು ಮಾಡುವುದಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.
ಜಗತ್ತಿಗೆ ಗೋಧಿ ರಫ್ತು ಮಾಡಲ್ಲ ಎಂದಿದ್ದೇಕೆ ಭಾರತ; ಅಸಲಿ ಗುಟ್ಟು ರಟ್ಟು?
ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆ ಜಗತ್ತಿನಲ್ಲಿ ಗೋಧಿ ಮತ್ತು ಬಾರ್ಲಿ ರಫ್ತು ಕೊರತೆ ಸೃಷ್ಟಿಯಾಗಿದೆ. ಇದರ ಮಧ್ಯೆ ಭಾರತೀಯರಿಗೆ ಅಗತ್ಯ ಪ್ರಮಾಣದಷ್ಟು ಗೋಧಿ ಪೂರೈಸುವ ಉದ್ದೇಶದಿಂದಾಗಿ ವಿದೇಶಗಳಿಗೆ ರಫ್ತು ಮಾಡುವುದರ ಮೇಲೆ ಮೇ 13ರಂದು ನಿರ್ಬಂಧ ವಿಧಿಸಲಾಗಿತ್ತು. ಆದರೆ ಈಗ ಕೆಲವು ಮಾನದಂಡಗಳ ಅಡಿಯಲ್ಲಿ ಗೋಧಿ ರಫ್ತು ರದ್ದು ಕ್ರಮದಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ. ಈ ಕುರಿತು ಮುಂದೆ ಓದಿ ತಿಳಿಯಿರಿ.
ಗೋಧಿ ರಫ್ತು ನಿರ್ಬಂಧದಲ್ಲಿ ಯಾವೆಲ್ಲ ನಿಯಮ ಸಡಿಲಿಕೆ?
* ಮೇ 13ರಂದು ಅಥವಾ ಅದಕ್ಕೂ ಮೊದಲು ಕಸ್ಟಮ್ಸ್ ಇಲಾಖೆಯ ಪರೀಕ್ಷೆಗಾಗಿ ರವಾನೆ ಆಗಿದ್ದಲ್ಲಿ ಅಂಥ ಗೋಧಿಯನ್ನು ರಫ್ತು ಮಾಡಲು ಅನುಮತಿಸಲಾಗುತ್ತದೆ.
* ಗುಜರಾತ್ನ ಕಾಂಡ್ಲಾ ಬಂದರಿನಲ್ಲಿ ಲೋಡ್ ಆಗುತ್ತಿರುವ ಗೋಧಿಯನ್ನು ಈಜಿಪ್ಟ್ಗೆ ರಫ್ತು ಮಾಡಲಾಗುತ್ತಿದೆ. ಈ ರಫ್ತಿಗೆ ಅವಕಾಶ ನೀಡುವಂತೆ ಈಜಿಪ್ಟ್ ಸರ್ಕಾರ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.
* ಲೆಟರ್ ಆಫ್ ಕ್ರೆಡಿಟ್ ಮೂಲಕ ಪೂರ್ವ ಬದ್ಧತೆಯನ್ನು ಮಾಡಿದ್ದರೆ ಅವಕಾಶ ನೀಡಲಾಗುತ್ತದೆ.
* ಆಯಾ ದೇಶಗಳ ಸರ್ಕಾರಗಳ ಕೋರಿಕೆಯ ಮೇರೆಗೆ ಭಾರತ ಸರ್ಕಾರವು ಪೂರ್ವಾನುಮತಿ ನೀಡಿದ್ದರೆ, ಅಂಥ ರಾಷ್ಟ್ರಗಳಿಗೆ ಗೋಧಿ ರವಾನೆ ಮಾಡಲಾಗುತ್ತದೆ.
ದೇಶದಿಂದ ಗೋಧಿ ರಫ್ತು ನಿರ್ಬಂಧಿಸಿದ ಸರ್ಕಾರ
ಕಳೆದ ಮೇ 13, 2022ರಂದು ಭಾರತದ ವಿದೇಶಿ ವ್ಯಾಪಾರ ನಿರ್ದೇಶನಾಲಯವು ವಿದೇಶಗಳಿಗೆ ಗೋಧಿಯನ್ನು ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಘೋಷಣೆ ಮಾಡಿತು. ಆದರೆ ಈ ಬಾರಿ ಗೋಧಿ ರಫ್ತು ನಿರ್ಬಂಧವು ಶಾಶ್ವತವಾಗಿ ಇರುವುದಿಲ್ಲ. ಭಾರತದಲ್ಲಿ ಗೋಧಿ ಉತ್ಪಾದನೆಯು ಪಾತಾಳಕ್ಕೆ ಕುಸಿಯುವಷ್ಟೇನೂ ಕಡಿಮೆಯಾಗಿಲ್ಲ. ಆದರೆ ಏರಿಕೆ ಆಗುತ್ತಿರುವ ಬೆಲೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ವಿದೇಶಗಳಿಗೆ ಗೋಧಿ ಮಾರಾಟವನ್ನು ನಿರ್ಬಂಧಿಸಲಾಗುತ್ತಿದೆ. ಗೋಧಿ ರಫ್ತು ನಿಷೇಧವು ಶಾಶ್ವತವಾಗಿರುವುದಿಲ್ಲ. ಇದನ್ನು ಪರಿಷ್ಕರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಧಿ ರಫ್ತು ಮಾಡುವುದಿಲ್ಲವೇಕೆ ಭಾರತ?
ಭಾರತದಲ್ಲಿ ಈ ವರ್ಷ ಗೋಧಿ ಬೆಳೆಯ ಉತ್ಪಾದನೆ ತೀರಾ ಕಡಿಮೆಯಾಗಿದೆ. ಇನ್ನೊಂದು ಕಡೆಯಲ್ಲಿ ದುರ್ಬಲ ರಾಷ್ಟ್ರಗಳ ಆಹಾರ ಭದ್ರತೆಯು ಅಪಾಯದಲ್ಲಿದೆ. ಇದೇ ವರ್ಷ ಭಾರತದಲ್ಲಿ ಉರಿಯುತ್ತಿರುವ ಬಿಸಿಗಾಳಿಯು ದೇಶದಲ್ಲಿ ಗೋಧಿ ಬೆಳೆಯ ಉತ್ಪಾದನೆಯನ್ನು ಮೊಟಕುಗೊಳಿಸಿದೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ಭಾರತವು ಸ್ವಲ್ಪ ಮಟ್ಟಿಗೆ ಗೋಧಿ ಕೊರತೆಯನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಜಗತ್ತಿಗೆ ಅತಿಹೆಚ್ಚು ಗೋಧಿಯನ್ನು ರಫ್ತು ಮಾಡುವ ಭಾರತವು ಇದೀಗ ಸ್ವದೇಶದಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ. ಏಕೆಂದರೆ ಈಗಾಗಲೇ ಗೋಧಿ ಬೆಲೆಯು 12 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಗೋಧಿಗೆ ಬಂಗಾರದ ಬೆಲೆ ಬರುವುದಕ್ಕೆ ಕಾರಣವೇನು?
ದೇಶದಲ್ಲಿ ಗೋಧಿ ಬೆಲೆ 12 ವರ್ಷಗಳಲ್ಲಿ ಅತಿಹೆಚ್ಚಿನ ದರವನ್ನು ದಾಖಲಿಸಿತ್ತು. ಆ ಮೂಲಕ ಭಾರತದಲ್ಲಿ ಗೋಧಿ ದರ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಏಪ್ರಿಲ್ ತಿಂಗಳಿನಲ್ಲಿ ಒಂದು ಕೆಜಿ ಗೋಧಿ ಬೆಲೆಯು 32.38 ರೂಪಾಯಿ ಆಗಿತ್ತು. ಈ ವರ್ಷದ ಆರಂಭದಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯು ಶೇ.40ಕ್ಕಿಂತ ಹೆಚ್ಚಾಗಿದೆ. ಏಕೆಂದರೆ ಯುದ್ಧಕ್ಕೂ ಪೂರ್ವದಲ್ಲಿ ಜಗತ್ತಿಗೆ ಮೂರರಲ್ಲಿ ಒಂದು ಭಾಗದಷ್ಟು ಗೋಧಿ ಮತ್ತು ಬಾರ್ಲಿಯನ್ನು ಇದೇ ರಷ್ಯಾ ಹಾಗೂ ಉಕ್ರೇನ್ ನೆಲದಿಂದ ರಫ್ತು ಮಾಡಲಾಗುತ್ತಿತ್ತು. ಆದರೆ ಫೆಬ್ರವರಿ 24ರಂದು ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಿನ ನಂತರದಲ್ಲಿ ವಾಸ್ತವದ ಚಿತ್ರಣವೇ ಬದಲಾಗಿದೆ.