ಕೊರೊನಾ ವೈರಸ್ ಭೀತಿ ನಡುವೆ ವಿದೇಶಿಗರಿಗೆ ಮುಕ್ತ ಪ್ರವೇಶ!
ನವದೆಹಲಿ, ಜೂನ್.03: ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಸಾವಿರ ಸಾವಿರಗಟ್ಟಲೇ ಏರಿಕೆಯಾಗುತ್ತಿದೆ. ದೇಶಾದ್ಯಂತ 2,14,465 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇದುವರೆಗೂ 6,022 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.
ಭಾರತದಲ್ಲಿ 1,05,041 ಮಂದಿಗೆ ಕೊರೊನಾ ವೈರಸ್ ಸೋಂಕಿತ ಸಕ್ರೀಯ ಪ್ರಕರಣಗಳಿದ್ದು, 1,03,391 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದೇಶಿಗರು ಭಾರತಕ್ಕೆ ಆಗಮಿಸಲು ಅನುಕೂಲವಾಗುವಂತೆ ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ.
ಕರ್ನಾಟಕದಿಂದ ಓಡಿದ್ದು 194 ಶ್ರಮಿಕ್ ರೈಲು; 2.8 ಲಕ್ಷ ಜನರ ಪ್ರಯಾಣ
ಕೇಂದ್ರ ಸರ್ಕಾರವು ವೀಸಾ ಮತ್ತು ಸಂಚಾರಿ ನಿರ್ಬಂಧಗಳ ಪೈಕಿ ಕೆಲವು ನಿಯಮಗಳನ್ನು ಸಡಿಲಿಕೆಗೊಳಿಸಲಾಗಿದೆ. ವಿದೇಶದಿಂದ ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಅನುಕೂಲವಾಗುವಂತೆ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ವಿದೇಶಿಗರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಮಾರ್ಗಸೂಚಿ:
- ವಿದೇಶಿ ವ್ಯಾಪಾರಿಗಳು ಬ್ಯುಸಿನೆಸ್ ವೀಸಾವನ್ನು ಬಳಸಿಕೊಂಡು ವಾಣಿಜ್ಯ ವಿಮಾನಗಳಲ್ಲಿ ಭಾರತಕ್ಕೆ ಆಗಮಿಸಲು ಅವಕಾಶ ನೀಡಲಾಗಿದೆ.
- ವಿದೇಶದ ಆರೋಗ್ಯ ತಜ್ಞರು, ವೈದ್ಯಕೀಯ ವೃತ್ತಿಪರರು, ಆರೋಗ್ಯ ಸಂಶೋಧಕರು, ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಕಾರ್ಯಕ್ಕಾಗಿ ಆಗಮಿಸುವ ಇಂಜಿನಿಯರ್ಸ್, ಲ್ಯಾಬೋರೇಟರಿ ಕಾರ್ಯಕ್ಕಾಗಿ ವಿದೇಶದಿಂದ ಆಗಮಿಸುವವರಿಗೆ ಅನುಮತಿ ನೀಡಲಾಗಿದೆ. ಆದರೆ, ಅಧಿಕೃತ ನೋಂದಾಯಿತ ಕಂಪನಿ ಅಥವಾ ಭಾರತದಲ್ಲಿ ಸರ್ಕಾರದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಿಂದ ಆಹ್ವಾನದ ಪ್ರಮಾಣಪತ್ರವನ್ನು ಪಡೆದಿರುವುದು ಕಡ್ಡಾಯವಾಗಿದೆ.
- ಭಾರತದಲ್ಲಿ ಶಾಖೆಗಳನ್ನು ಹೊಂದಿರುವ ವಿದೇಶಿ ಕಂಪನಿಗಳ ಒಬ್ಬ ತಂತ್ರಜ್ಞರು, ವ್ಯವಸ್ಥಾಪಕರು, ಹಾಗೂ ವಿನ್ಯಾಸಕರು ಆಗಮಿಸುವುದಕ್ಕೆ ಅನುಮತಿ ನೀಡಲಾಗಿದೆ. ಎಲ್ಲ ಬಗೆಯ ಉತ್ಪಾದಕ ಘಟಕ, ವಿನ್ಯಾಸ ಘಟಕ, ಸಾಫ್ಟವೇರ್ ಮತ್ತು ಐಟಿ ಘಟಕ ಹಾಗೂ ಹಣಕಾಸು ವಲಯವನ್ನು ಒಳಗೊಂಡಂತೆ ಈ ನಿಯಮವನ್ನು ಸಡಿಲಿಸಲಾಗಿದೆ.
- ಭಾರತೀಯ ಕಂಪನಿಗಳು ಹೊಂದಿರುವ ವಿದೇಶಿ ಯಂತ್ರೋಪಕರಣಗಳನ್ನು ಸ್ಥಾಪಿಸುವುದು, ದುರಸ್ಥಿಗೊಳಿಸಿವುದು ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ವಿದೇಶಿ ವಿಶೇಷ ತಂತ್ರಜ್ಞರು ಭಾರತಕ್ಕೆ ಆಗಮಿಸಲು ಅನುಮತಿ ನೀಡಲಾಗಿದೆ. ಆದರೆ ಅಧಿಕೃತ ಕಂಪನಿಗಳಿಂದ ಆಹ್ವಾನ ಪ್ರಮಾಣಪತ್ರವನ್ನು ಹೊಂದಿರಬೇಕು. ಉಪಕರಣಗಳ ಸ್ಥಾಪನೆ, ಅವಧಿಯುಳ್ಳ ಯಂತ್ರೋಪಕರಣಗಳ ದುರಸ್ಥಿಗೆ ಆಗಮಿಸಲು ಅವಕಾಶ ನೀಡಲಾಗಿದೆ.