ಯಾರು ಯಾರಿಗೆ ಮೊದಲು ಲಸಿಕೆ ನೀಡಬೇಕು?; ಕೇಂದ್ರದಿಂದ ಬಂತು ಮಾರ್ಗಸೂಚಿ
ನವದೆಹಲಿ, ಜನವರಿ 15: ಭಾರತದಾದ್ಯಂತ ಕೊರೊನಾ ಸೋಂಕಿನ ವಿರುದ್ಧ ಜನವರಿ 16ರಿಂದ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈಗಾಗಲೇ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಪೂರೈಸಲಾಗಿದೆ. ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಹಾಗೂ ಭಾರತ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಭಾರತದಲ್ಲಿ ಅನುಮತಿ ದೊರೆತಿದ್ದು, ಜನವರಿ 16ರಿಂದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಲಸಿಕಾ ಅಭಿಯಾನ ಆರಂಭಗೊಳ್ಳುತ್ತಿದೆ.
ಹೀಗಾಗಿ ಲಸಿಕಾ ಕಾರ್ಯಕ್ರಮದಲ್ಲಿ ಗಮನಹರಿಸಬೇಕಾದ ವಿಷಯಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಲಸಿಕೆ ಕಾರ್ಯಕ್ರಮದ ನಿರ್ದೇಶಕರಿಗೆ, ವ್ಯವಸ್ಥಾಪಕರಿಗೆ, ಲಸಿಕಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಕೆಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಆ ಮಾರ್ಗಸೂಚಿಗಳಲ್ಲೇನಿದೆ? ಮುಂದೆ ಓದಿ...
ಲಸಿಕೆಯ ಮಾರ್ಗಸೂಚಿಯಲ್ಲಿ ಏನೇನಿದೆ?
ಲಸಿಕೆ ನೀಡುವ ಮೊದಲು ಕೆಲವು ನಿಯಮಗಳನ್ನು ಅನುಸರಿಸುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆ ಮಾರ್ಗಸೂಚಿಗಳು ಇಂತಿವೆ....
- 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆಯನ್ನು ನೀಡಬೇಕು
- ಗರ್ಭಿಣಿಯರಿಗೆ, ಬಾಣಂತಿಯರಿಗೆ ಕೊರೊನಾ ಲಸಿಕೆ ನೀಡುವಂತಿಲ್ಲ
- ಕೊರೊನಾ ಲಸಿಕೆ ಸ್ವೀಕರಿಸಿದ ನಂತರ ಇತರೆ ಲಸಿಕೆ ಪಡೆಯುವವರು 14 ದಿನ ಅಂತರ ಕಾಯ್ದುಕೊಳ್ಳಬೇಕು.
- ಮೊದಲ ಡೋಸ್ ನಲ್ಲಿ ಪಡೆದ ಲಸಿಕೆಯನ್ನೇ ಎರಡನೇ ಡೋಸ್ ನಲ್ಲೂ ಪಡೆಯಬೇಕು.
ಜ.16ರಂದು ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ
ಯಾರು ಯಾರಿಗೆ ಕೊರೊನಾ ಲಸಿಕೆ ನೀಡಬಹುದು?
ಹೊಸ ರೂಪಾಂತರ ಸೋಂಕು ಇರುವವರಿಗೆ ಈ ಲಸಿಕೆಯನ್ನು ಕೊಡಬಹುದೇ ಎಂಬ ಗೊಂದಲವೂ ಉಂಟಾಗಿದ್ದು, ಈ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
- ಆರೋಗ್ಯ ಕಾರ್ಯಕರ್ತರಿಗೆ ಹೊಸ ರೂಪಾಂತರ ಸೋಂಕು ತಗುಲಿದ್ದರೆ, ಆ ಸೋಂಕಿನಿಂದ ಚೇತರಿಕೆ ಆದ ನಂತರ ಲಸಿಕೆ ಕೊಡಬಹುದು.
- ಆರ್ ಟಿಪಿಸಿಆರ್ ನಲ್ಲಿ ಸೋಂಕು ದೃಢಪಟ್ಟು ಗುಣಮುಖರಾದ ಮೇಲೆ ಸುಸ್ತು, ಅನಾರೋಗ್ಯ ಇದ್ದರೂ ಲಸಿಕೆ ಕೊಡಬಹುದು .
- ಅಸ್ವಸ್ಥತೆ, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಾ ಇದ್ದವರಿಗೆ ಲಸಿಕೆ ಕೊಡಬಹುದು.
ಲಸಿಕೆ ನಂತರ ನಿಗಾ ವಹಿಸಬೇಕಾದ್ದು ಯಾರು?
ಲಸಿಕೆ ಕೊಟ್ಟ ನಂತರ ಹೇಗೆ ನಿಗಾ ವಹಿಸಬೇಕು ಎಂಬ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
- ಲಸಿಕೆ ನೀಡಿದ ಇತರ ಆರೋಗ್ಯ ಸಮಸ್ಯೆ ಇರುವವರ ಬಗ್ಗೆ ಹೆಚ್ಚು ನಿಗಾ ವಹಿಸಬೇಕು.
- ರಕ್ತದೊತ್ತಡ, ಮಧುಮೇಹ ಇರುವವರ ಮೇಲೆ ನಿಗಾ ವಹಿಸಲೇಬೇಕು.
- ಉಸಿರಾಟದ ಸಮಸ್ಯೆ ಇರುವವರ ಬಗ್ಗೆ ಹೆಚ್ಚು ಗಮನ ಹರಿಸಬೇಕು.
- ಬ್ಲೀಡಿಂಗ್ ಸಮಸ್ಯೆ ಇದ್ದರೆ, ಪ್ಲೇಟ್ಲೆಟ್ಸ್ ಏರುಪೇರು ಕಂಡುಬಂದವರಾಗಿದ್ದರೆ ಅಂಥವರ ಮೇಲೆ ಹೆಚ್ಚು ನಿಗಾ ಇಡಬೇಕು.
ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಲಸಿಕೆ
ಜನವರಿ 16, ಶನಿವಾರದಿಂದ ಭಾರತದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳುತ್ತಿದೆ. ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಿದ್ದು, ಮೊದಲ ದಿನ ಸುಮಾರು ಮೂರು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಯೋಜಿಸಲಾಗಿದೆ. ಉದ್ಘಾಟನಾ ದಿನದಂದು ಪ್ರತಿ ಸ್ಥಳದಲ್ಲಿ ಸುಮಾರು 100 ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು.