ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ, ರೈತರ ಸಾಲಮನ್ನಾಕ್ಕೆ ಚಿಂತನೆ?
ನವದೆಹಲಿ, ಡಿಸೆಂಬರ್ 12: ಪಂಚ ರಾಜ್ಯ ಚುನಾವಣೆಯಿಂದ ಬುದ್ಧಿ ಕಲಿತಿರುವ ಬಿಜೆಪಿ ಲೋಕಸಭೆ ಚುನಾವಣೆ ವೇಳೆಗೆ ದೊಡ್ಡ ನಿರ್ಣಯವೊಂದನ್ನು ತೆಗೆದುಕೊಂಡು ಕಳೆದುಕೊಂಡಿರುವ ಗ್ರಾಮೀಣ ಮತಗಳನ್ನು ಮರಳಿ ಪಡೆಯಲು ಯೋಜನೆ ರೂಪಿಸುತ್ತಿದೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದ ಸೋಲಿಗೆ ಪ್ರಮುಖ ಕಾರಣ ರೈತರು, ಗ್ರಾಮೀಣ ಜನರು ಬಿಜೆಪಿ ಪರ ಮತ ಹಾಕಲಿಲ್ಲ ಎಂಬುದೇ ಆಗಿದೆ. ಚುನಾವಣಾ ಫಲಿತಾಂಶದ ವರದಿಗಳು ಸಹ ಇವನ್ನೇ ಸ್ಪಷ್ಟಪಡಿಸುತ್ತಿವೆ. ಹಾಗಾಗಿ ಕೇಂದ್ರವು ಗ್ರಾಮೀಣ ಜನರನ್ನು ಸಂತುಷ್ಟಗೊಳಿಸುವ ಯೋಜನೆಗೆ ಕೈಹಾಕುತ್ತಿದೆ.
ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಆಘಾತ?!
ಕೇಂದ್ರ ಸರ್ಕಾರವು ರೈತರ ಸಾಲಮನ್ನಾ ಮಾಡುವ ಬಗ್ಗೆ ಯೋಜನೆ ರೂಪಿಸುತ್ತಿದೆ. ಗ್ರಾಮೀಣ ಮತಗಳನ್ನು ಗಳಿಸಲು ಇದು ಅವಶ್ಯಕ ಎಂದು ಬಿಜೆಪಿಗೆ ಅನಿಸಿದೆ. ಅದರಲ್ಲಿಯೂ ಮಧ್ಯಪ್ರದೇಶದಲ್ಲಿ ಅಂತೂ ರೈತರನ್ನು ಎದುರು ಹಾಕಿಕೊಂಡಿದ್ದಕ್ಕೇ ಸೋತಿದ್ದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಗ್ರಾಮೀಣ ಜನರು ಬಿಜೆಪಿ ವಿರುದ್ಧ
ಈಗಾಗಲೇ ಹಲವು ರಾಜ್ಯಗಳಲ್ಲಿ ರೈತರು ವಿವಿಧ ಕಾರಣಗಳಿಗಾಗಿ ಕೇಂದ್ರದ ವಿರುದ್ಧ ಇದ್ದಾರೆ. ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಮುಂಚಿನಿಂದಲೂ ಕಾಂಗ್ರೆಸ್ಗಿಂತಲೂ ಹಿಂದೆಯೇ ಇದೆ. ಇದನ್ನು ನಿವಾರಿಸಲು ಸಾಲಮನ್ನಾ ಬಿಜೆಪಿಗೆ ಸಹಾಯವಾಗಲಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿ ಮುಖ್ಯತಲೆಗಳು ಹಾಕುತ್ತಿವೆ.
ಹಲವು ಬಾರಿ ರೈತರು ಪ್ರತಿಭಟಿಸಿದ್ದಾರೆ
ಮೋದಿ ಅವರ ಆಡಳಿತದಲ್ಲಿಯಂತೂ ರೈತರು ಹಲವು ಬಾರಿ ಕೇಂದ್ರದ ಮೇಲೆ ಪ್ರತಿಭಟನೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಅಂತೂ ದೊಡ್ಡ ಚಳವಳಿಯನ್ನೇ ರೈತರು ಮಾಡಿದರು. ಕೇಂದ್ರದ ವಿರುದ್ಧ ತಮಿಳುನಾಡು ರೈತರ ಪ್ರತಿಭಟನೆ ವಿಶ್ವಮಟ್ಟದಲ್ಲಿ ಸುದ್ದಿ ಆಗಿತ್ತು. ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲೂ ಸಹ ರೈತರು ಬಿದಿಗಿಳಿದಿದ್ದರು.
ಗೊತ್ತಾ? ಪ್ರಧಾನಿ ಮೋದಿ ರಾಹುಲ್ ಗಾಂಧಿಗೆ ಮೇಷ್ಟ್ರಂತೆ!
ಬಿಜೆಪಿ ಆಡಳಿತದ ರಾಜ್ಯದಲ್ಲಿ ರೈತರ ಪ್ರತಿಭಟನೆ
ಬಿಜೆಪಿ ಆಡಳಿತವಿರುವ ದೊಡ್ಡ ರಾಜ್ಯಗಳಲ್ಲಿ ರೈತರು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿರುವುದು ಹೆಚ್ಚಾಗುತ್ತಿದೆ. ಹಾಗಾಗಿ ಇದು ಹೀಗೆಯೇ ಮುಂದುವರೆದರೆ ಕೆಲವೇ ತಿಂಗಳು ದೂರದಲ್ಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬುದನ್ನು ಅರಿತಿರುವ ಬಿಜೆಪಿ ಈ ಸಾಲಮನ್ನಾ ದಂತಹಾ ದೊಡ್ಡ ಹೆಜ್ಜೆ ಇಡಲು ಮುಂದಾಗಿದೆ.
ಕಾಂಗ್ರೆಸ್ಗೆ ಸಹ ಇದೇ ಅಸ್ತ್ರವಾಗಿತ್ತು
ಕಾಂಗ್ರೆಸ್ನ ರಾಹುಲ್ ಗಾಂಧಿ ಸಹ ತಮ್ಮ ಪ್ರತಿ ಭಾಷಣದಲ್ಲಿ ರೈತರ ಬಗ್ಗೆ, ನಿರುದ್ಯೋಗದ ಬಗ್ಗೆ ಹಾಗೂ ರಫೆಲ್ ವಿಷಯಗಳನ್ನು ಹಿಡಿದೇ ಕೇಂದ್ರವನ್ನು ಟೀಕಿಸಿದ್ದರು. ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡಿದ್ದೇವೆ, ಮನಮೋಹನ್ ಸಿಂಗ್ ಆಡಳಿತದಲ್ಲಿ ಇದ್ದಾಗ ಸಾಲಮನ್ನಾ ಮಾಡಿದ್ದೆವು ಆದರೆ ಬಿಜೆಪಿ ಸರ್ಕಾರ ಆ ಕಾರ್ಯ ಮಾಡಿಲ್ಲ ಎಂದು ಪ್ರಹಾರ ನಡೆಸಿದ್ದರು.
ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ
ಸಾಲಮನ್ನಾಕ್ಕೆ ತಯಾರಿ ಆರಂಭ?
ಎಲ್ಲವನ್ನೂ ಗಮನಿಸಿರುವ ಬಿಜೆಪಿ ಹೈಕಮಾಂಡ್ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ರೈತರನ್ನು ಪಕ್ಷದತ್ತ ಸೆಳೆಯಲು ಸಾಲಮನ್ನಾವನ್ನು ಮಾಡಲು ನಿರ್ಧರಿಸಿದೆ, ಈ ಬಗ್ಗೆ ಉನ್ನತ ಅಧಿಕಾರಿಗಳ ವಲಯದಲ್ಲಿ ಚರ್ಚೆ ಸಹ ಆರಂಭವಾಗಿದೆ ಎನ್ನಲಾಗಿದ್ದು, ಕೆಲವೇ ದಿನದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.