ವೇತನ ಆಯೋಗ ಶಿಫಾರಸು ಜಾರಿ ವಿಳಂಬ: ಕೇಂದ್ರ ನೌಕರರ ಅಸಮಾಧಾನ
ಇದೇ ತಿಂಗಳ 23ರಂದು ನೌಕರರು ಮುಷ್ಕರ ಹಮ್ಮಿಕೊಂಡಿದ್ದರು. ಆದರೆ, ಕೇಂದ್ರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿತ್ತು. ಆದರೆ, ಆಯೋಗದ ಶಿಫಾರಸುಗಳು ಜಾರಿಗೊಳ್ಳಲಿದ್ದರೆ ಮುಷ್ಕರ ಅನಿವಾರ್ಯ ಎನ್ನುತ್ತಿದೆ ನೌಕರರ ಸಂಘ.
ನವದೆಹಲಿ, ಮೇ 16: ಕೇಂದ್ರ ಸರ್ಕಾರಿ ನೌಕರರ ವಲಯದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರಿ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರದ ವಿಳಂಬ ನೀತಿಯನ್ನು ವಿರೋಧಿಸಿ, ಇದೇ ತಿಂಗಳ 23ರಂದು ನೌಕರರು ಮುಷ್ಕರ ಹಮ್ಮಿಕೊಂಡಿದ್ದರು. ಆದರೆ, ಕೇಂದ್ರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿತ್ತು. ಆದರೆ, ಕೇಂದ್ರ ಮತ್ತೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ನೌಕರರ ಸಂಘದ ಕೆಲ ಪದಾಧಿಕಾರಿಗಳು ಆರೋಪಿಸಿದ್ದಾರೆ.
ವೇತನ ಆಯೋಗದ ಶಿಫಾರಸುಗಳಿಗೆ ಕೇಂದ್ರ ಸಚಿವ ಸಂಪುಟದ ಹಸಿರು ನಿಶಾನೆ ಸಿಕ್ಕಲ್ಲಿ ಅದು 2016ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೊಳ್ಳಲಿದೆ. ಅಂದರೆ, ಕೇಂದ್ರ ಸರ್ಕಾರಿ ನೌಕರರಿಗೆ ಎಷ್ಟರ ಮಟ್ಟಿಗೆ ಭತ್ಯೆಗಳ ಹೆಚ್ಚಳ ಸಿಗಲಿದೆ ಊಹಿಸಿ... ? ಪ್ರತಿಯೊಬ್ಬ ಕೇಂದ್ರ ಸರ್ಕಾರಿ ನೌಕರನೂ ಲಕ್ಷಾಂತರ ರು.ಗಳನ್ನು ಒಮ್ಮೆಲೇ ಪಡೆಯುತ್ತಾನೆ.
ಅಂಥದ್ದೊಂದು ಸುವರ್ಣ ಘಳಿಗೆಗಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರ ವೇತನ ಆಯೋಗದ ಶಿಫಾರಸುಗಳ ಜಾರಿಗೊಳ್ಳಲೆಂದು ತುದಿಗಾಲಿನಲ್ಲಿ ಕಾಯುತ್ತಿದ್ದಾನೆ. ಹಾಗಾಗಿಯೇ, ಕೇಂದ್ರದ ವಿಳಂಬ ನೀತಿಗೆ ಆತ ಅಸಮಾಧಾನಗೊಂಡಿರುವುದು.
ಈಗಾಗಲೇ ಅಶೋಕ್ ಲಾವಾಸಾ ನೇತೃತ್ವದ ಸಮಿತಿಯು ವೇತನ ಆಯೋಗ ನೀಡಿರುವ ಶಿಫಾರಸುಗಳ ಮೇಲೆ ತನ್ನ ಅನಿಸಿಕೆ ಅಭಿಪ್ರಾಯಗಳನ್ನು ವರದಿ ರೂಪದಲ್ಲಿ ಸಲ್ಲಿಸಿ ಕೆಲ ದಿನಗಳೇ ಕಳೆದಿವೆ. ಆ ವರದಿಯಿನ್ನೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ.
ವಿಳಂಬವೇಕೆ?
ಇಷ್ಟರಲ್ಲಾಗಲೇ ಅದು ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಜಾರಿಗೊಳ್ಳಬೇಕಿತ್ತು. ಆದರೂ, ಅದು ಕಾರಣಾಂತರಗಳಿಂದ ವಿಳಂಬವಾಗುತ್ತಿದೆ. ಇದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಲಾವಾಸಾ ಸಮಿತಿಯ ಜತೆಯಲ್ಲೇ ವೆಚ್ಛ ಇಲಾಖೆಯ ಉನ್ನತ ಅಧಿಕಾರವುಳ್ಳ ಸಮಿತಿಯೊಂದನ್ನೂ ರಚಿಸಿ, ಅದೂ ಸಹ 7ನೇ ವೇತನ ಆಯೋಗದ ಶಿಫಾರಸುಗಳ ಸಾಧಕ ಬಾಧಕಗಳನ್ನು ಮಾಪನ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆ ಸಮಿತಿಯ ವರದಿ ಹಾಗೂ ಲಾವಾಸಾ ಸಮಿತಿಯ ವರದಿಗಳೆರಡನ್ನೂ ಕೇಂದ್ರ ಸಚಿವ ಸಂಪುಟ ಚರ್ಚಿಸಬೇಕಿದೆ. ಆದರೆ, ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ. ಸಂಪುಟದಲ್ಲಿ ಚರ್ಚೆಗೆ ಬರಲು ಸುಮಾರು 15 ದಿನಗಳೇ ಬೇಕಾಗಬಹುದು ಎಂದೂ ಹೇಳಲಾಗುತ್ತಿದೆ.
ಸರ್ಕಾರಿ ನೌಕರರ ಎಚ್ಚರಿಕೆ
ತೀರಾ ವಿಳಂಬವಾದರೆ, ತಾವು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ನೌಕರರ ಸಂಘದ ಕೆಲ ಪದಾಧಿಕಾರಿಗಳು ಹೇಳಿದ್ದಾರೆ. ಹೆಸರನ್ನೇಳಲು ಇಚ್ಛಿಸದ ಪದಾಧಿಕಾರಿಯೊಬ್ಬರು ಈ ಬಗ್ಗೆ ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರು ಬೆಲೆ ಏರಿಕೆ ಮುಂತಾದ ವಿಚಾರಗಳಿಂದ ತತ್ತರಿಸಿದ್ದಾರೆ. ಹಾಗಾಗಿ, ಸಂಬಳದಲ್ಲಿ ಕೊಂಚ ಏರಿಕೆ ಕಂಡರೆ ಉತ್ತಮ. ಆದರೆ, ಕೇಂದ್ರ ಸರ್ಕಾರವು ಇದರಲ್ಲಿ ನಿಧಾನಗತಿ ತೋರುತ್ತಿರುವುದು ನಮಗೆ ಬೇಸರ ತರಿಸಿದೆ. ಈಗಾಗಲೇ ಪ್ರತಿಭಟನೆ ನಡೆಸದಿರುವಂತೆ ನಮ್ಮ ಮನವೊಲಿಸಿದೆ. ಈಗ ಮತ್ತೆ ನಿಧಾನಗತಿ ಅನುಸರಿಸಿದರೆ, ನಮಗೂ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.
ಮನೆ ಬಾಡಿಗೆ ಭತ್ಯೆ ಇನ್ನೂ ಅಂತಿಮಗೊಂಡಿಲ್ಲ
ಇದಲ್ಲದೆ, 7ನೇ ವೇತನ ಆಯೋಗವು ಈ ಹಿಂದೆ ನೀಡಲಾಗುತ್ತಿದ್ದ 196 ಭತ್ಯೆಗಳಲ್ಲಿ 53ಕ್ಕೆ ಕೊಕ್ ನೀಡಿದೆ. ಅಲ್ಲದೆ, ಮಹಾ ನಗರಗಳಲ್ಲಿರುವ ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಶೇ. 30ರಿಂದ 24ಕ್ಕೆ ಇಳಿಸಲೂ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಸೇವ ಸಲ್ಲಿಸುವತ್ತಿರುವ ನಗರಗಳನ್ನು ಎಕ್ಸ್, ವೈ ಹಾಗೂ ಝೆಡ್ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಿ, ಅವುಗಳಿಗೆ ಕ್ರಮವಾಗಿ ಶೇ. 24, 16 ಹಾಗೂ ಶೇ. 8ರಷ್ಟು ಮನೆ ಬಾಡಿಗೆ ಭತ್ಯೆಯನ್ನು ನೀಡುವಂತೆ ಆಯೋಗ ಶಿಫಾರಸು ಮಾಡಿದೆ. ಆದರೆ, ಅದಿನ್ನೂ ಅಂತಿಮವಾಗಿಲ್ಲ.
ಎಲ್ಲವೂ ನೆನೆಗುದಿಗೆ
ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲಾವಾಸಾ ಅವರ ವಿಮರ್ಶಾ ವರದಿಯಲ್ಲಿ ಮನೆ ಬಾಡಿಗೆ ಭತ್ಯೆ ಇಳಿಸುವುದು ಬೇಡ ಎಂದು ಹೇಳಿದ್ದರೆ ಅದು ಜಾರಿಯಾಗುವುದಿಲ್ಲ. ಇದೂ ಸೇರಿದಂತೆ, ಹಲವಾರು ವಿಚಾರಗಳ ಬಗ್ಗೆ ಲಾವಾಸಾ ವರದಿಯಲ್ಲಿ ಏನು ಹೇಳಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ.
ಚರ್ಚೆಯಾದರೆ ಮಾತ್ರ ಸ್ಪಷ್ಟ ಮಾಹಿತಿ
ಸಂಪುಟ ಸಭೆಯಲ್ಲಿ ವೇತನ ಆಯೋಗದ ಶಿಫಾರಸುಗಳು ಹಾಗೂ ಲಾವಾಸಾ ಸಮಿತಿಯ ಪರಾಮರ್ಶೆಗಳು ಚರ್ಚೆಗೊಂಡ ನಂತರವಷ್ಟೇ ಆ ವಿಚಾರಗಳು ಹಾಗೆ ಹೀಗೆ ಹೊರಗೆ ಬರುತ್ತವೆ. ಈ ವಿಚಾರಗಳು ಚರ್ಚೆಯಾಗುವ ನಿಟ್ಟಿನಲ್ಲಿ ಕರೆಯಬೇಕಿರುವ ಸಂಪುಟ ಸಭೆ ವಿಳಂಬವಾಗುತ್ತಿರುವುದೇ ಕೇಂದ್ರ ಸರ್ಕಾರಿ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.