ಆದಿತ್ಯ ಬಿರ್ಲಾ ಸೇರಿ 31 ಕಂಪನಿಗಳ ನೋಂದಣಿ ರದ್ದು
ನವದೆಹಲಿ, ಜೂ. 05: ಕಳೆದ ಎರಡು ವರ್ಷ ಗಳಿಂದ ರಂಜಕ ಮತ್ತು ಪೊಟ್ಯಾಶಿಯಂ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳದ ಕಂಪನಿಗಳ ಮೇಲೆ ಸರ್ಕಾರ ಗದಾಪ್ರಹಾರ ಮಾಡಿದೆ. ರಸಗೊಬ್ಬರ ಸಚಿವಾಲಯ ಆದಿತ್ಯ ಬಿರ್ಲಾ ಸಮೂಹ ಸೇರಿದಂತೆ 31 ಕಂಪನಿಗಳ ನೋಂದಣಿಯನ್ನು ತಕ್ಷಣ ದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ.
ಹಿಂಡಾಲ್ಕೊ ಮತ್ತು ಇಂಡೋ ಗಾಲ್ಫ್ ಫರ್ಟಿಲೈಸರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಮಧು ಫರ್ಟಿಲೈಸರ್ಸ್, ಖೇತಾನ್ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್, ರಾಮ್ ಫಾಸ್ಪೇಟ್ಸ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಮತ್ತು ಎನ್ಎಫ್ಎಲ್, ಎನ್ಎಎಫ್ಇಡಿ ರದ್ದಾಗಿರುವ ಇತರೇ ಕಂಪನಿಗಳು.[ಪಡಿತರ ಸಬ್ಸಿಡಿಯೂ ನೇರವಾಗಿ ಬ್ಯಾಂಕ್ ಖಾತೆಗೆ]
ರಸಗೊಬ್ಬರ ಆಮದು ಮಾಡಿಕೊಳ್ಳುವ ಪ್ರತಿಯೊಂದು ಕಂಪನಿಯೂ ಸಬ್ಸಿಡಿ ಪಡೆಯಬೇಕಾದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆದರೆ, 31 ಕಂಪೆನಿಗಳು ಕಳೆದೆರಡು ವರ್ಷಗಳಲ್ಲಿ ರಂಜಕ ಮತ್ತು ಪೊಟ್ಯಾಶಿಯಂ ಆಮದು ಮಾಡಿಕೊಳ್ಳದೇ ಇರುವುದರಿಂದ ನೋಂದಣಿ ರದ್ದುಪಡಿಸಲಾಗಿದೆ. ಹಾಗಾಗಿ ಇನ್ನು ಮುಂದೆ ಇವಕ್ಕೆ ಸಬ್ಸಿಡಿ ಲಾಭ ಸಿಗುವುದಿಲ್ಲ ಸಚಿವಾಲಯ ತಿಳಿಸಿದೆ. [ವಿದ್ಯುತ್ ಸಂಪರ್ಕ ಇದ್ದರೆ ಸೀಮೆಎಣ್ಣೆ ಕೊಡಲ್ಲ?]
ನೋಂದಣಿ ರದ್ದತಿಗೆ ಒಳಗಾಗಿರುವ ಕಂಪನಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿದೇಶಗಳಿಂದ ರಾಸಾಯನಿಕ ಆಮದು ಮಾಡಿಕೊಳ್ಳಲು ರದ್ದು ಪಟ್ಟಿಯಲ್ಲಿ ಸೇರಿಕೊಂಡಿರುವ ಕಂಪನಿಗಳು ಹೆಚ್ಚಿನ ಹಣ ನೀಡಬೇಕಾಗಿದೆ. ಮುಂಗಾರು ಮಳೆ ಆರಂಭವಾಗಲಿದ್ದು ದೇಶದಲ್ಲಿ ಒಮ್ಮೆಲೆ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಲಿದ್ದು ಇದು ರೈತರ ಮೇಲೆ ಪರಿಣಾಮ ಬೀರುವ ಲಕ್ಷಣವಿದೆ.